ಹಣಹೂಡಿಕೆಯಲ್ಲಿ ಹೆಚ್ಚಿನ ಲಾಭದ ಆಮೀಷ; ಕೋಟ್ಯಾಂತರ ರೂ ವಂಚಿಸಿದ ಫ್ಲೂಲೆಸ್ ಕಂಪನಿ ಜನರಿಂದ ಹೆದರಿ ಪೊಲೀಸ್ ಸಹಾಯ ಪಡೆದ ವಂಚಕ
ಭಟ್ಕಳ: ಸಾರ್ವಜನಕರನ್ನು ವಂಚಿಸುವ ಜಾಲಗಳು ದಿನದಿನಕ್ಕೆ ಹೆಚ್ಚಾಗುತ್ತಿದ್ದು ಹೆಚ್ಚಿನ ಹಣದ ಆಮಿಷ ತೋರಿಸಿ ಕೋಟ್ಯಾಂತರ ರೂ ವಂಚಸಿರುವ ಹಲವಾರು ಪ್ರಕರಣಗಳು ಬೆಳಕಿಗೆ ಬಂದರೂ ಕಾನೂನಿನ ರಕ್ಷಣೆಯಲ್ಲಿ ವಂಚಕರು ಐಶಾರಮಿ ಜೀವನ ನಡೆಸುತ್ತಿದ್ದು ವಿದೇಶಕ್ಕೆ ಹೋಗಿ ತಲೆಮರೆಸಿಕೊಂಡು ಅಲ್ಲಿ ವಿಲಾಸಿ ಜೀವನ ನಡೆಸುತ್ತಿದ್ದು ಇತ್ತ ಹೆಚ್ಚು ಗಳಿಸುವ ಉದ್ದೇಶದಿಂದ ನಕಲಿ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡಿ ಇಂಗು ತಿಂದ ಮಂಗನಂತಾಗಿರು ಜನರು ವಂಚಕ ತಮ್ಮ ಕಣ್ಣ ಮುಂದೆ ಸಿಕ್ಕರೆ ಸುಮ್ಮನೆ ಬಿಡುವರೆ?
ಇಲ್ಲ ಖಂಡಿತ ಇಲ್ಲ. ಅವನನ್ನು ಅಟ್ಟಾಡಿಸಿ ಹೊಡೆದು ತಮ್ಮ ರೋಷವನ್ನು ಹೊರಚೆಲ್ಲುತ್ತಾರೆ.
ಇಂತಹದ್ದೊಂದು ಘಟನೆ ಭಟ್ಕಳದಲ್ಲಿ ಶುಕ್ರವಾರ ನಡೆದ ಕುರಿತಂತೆ ತಡವಾಗಿ ಬೆಳಕಿಗೆ ಬಂದಿದ್ದು ಫ್ಲೋಲೆಸ್ ಎಂಬ ಹಣ ಹೂಡಿಕೆಯ ವಂಚಕ ಕಂಪನಿಯನ್ನು ತೆರೆದು ಜನರನ್ನು ಕೋಟ್ಯಾಂತರ ರೂ ಟೋಪ್ಪಿ ಹಾಕಿ ವಿದೇಶದಲ್ಲಿ ವಿಲಾಸಿ ಜೀವನ ನಡೆಸುತ್ತಿದ್ದ ವ್ಯಕ್ತಿಯೊಬ್ಬ ಅಕಸ್ಮಿಕವಾಗಿ ಭಟ್ಕಳದ ಜನರ ಕಣ್ಣಿಗೆ ಕಾಣಿಸಿಕೊಂಡಿದ್ದು ಆತನನ್ನು ಹಿಂಬಾಲಿಸಿದ ನೂರಾರು ಮಂದಿಯನ್ನು ಕಂಡು ತನ್ನ ಜೀವ ಉಳಿಸಿಕೊಳ್ಳಲು ಪೊಲೀಸ್ ಠಾಣೆ ಹೊಳಹೊಕ್ಕು ಅವರಿಂದ ರಕ್ಷಣೆ ಪಡೆದ ಸುದ್ದಿ ಇಲ್ಲಿ ಹರಿದಾಡುತ್ತಿದೆ.
ವಂಚಕ ಕಂಪನಿ ಫ್ಲೋಲೆಸ್ ನ ಸ್ಥಾಪಕರಲ್ಲೊಬ್ಬ ಎಂದು ಹೇಳಲಾದ ವ್ಯಕ್ತಿಯು ಕಳೆದೆರಡು ದಿನಗಳ ಹಿಂದೆ ವಿದೇಶದಿಂದ ಬಂದಿರುವ ಕುರಿತು ಮಾಹಿತಿ ಇತ್ತು ಎನ್ನಲಾಗಿದೆ. ಇದನ್ನೇ ಹೊಂಚು ಹಾಕುತ್ತಿರುವವರಿಗೆ ಶುಕ್ರವಾರ ಸಂಜೆ ಆತನು ಬೇರೊಬ್ಬರ ಕಾರಿನಲ್ಲಿ ವೇಗವಾಗಿ ಹೋಗುತ್ತಿರುವುದನ್ನು ಕಂಡು ನಿಲ್ಲಿಸಲು ಸೂಚಿಸಿದರೂ ಕೂಡಾ ನಿಲ್ಲಿಸದೇ ಪರಾರಿಯಾಲು ನೋಡಿದ್ದು ನಂತರ ಹೆದರಿ ಕಾರನ್ನು ಭಟ್ಕಳ ನಗರ ಠಾಣೆಯತ್ತ ತಿರುಗಿಸಿದರು ಎನ್ನಲಾಗಿದೆ.
ಕಂಪೆನಿಯು ಈಗಾಗಲೇ ಬಡ್ಡಿ ನೀಡುವುದನ್ನು ನಿಲ್ಲಿಸಿದ್ದರಿಂದ ಸಾವಿರಕ್ಕೂ ಹೆಚ್ಚು ಜನರು ತೀವ್ರ ತೊಂದರೆಗೊಳಗಾಗಿದ್ದು ಇದ್ದ ಹಣವನ್ನೆಲ್ಲಾ ಬಡ್ಡಿ ಆಸೆಗಾಗಿ ತೊಡಗಿಸಿಕೊಂಡಿದ್ದು ಜೀವನ ನಡೆಸುವುದೇ ಕಷ್ಟವಾಗಿತ್ತು. ಅಲ್ಲದೇ ಹಲವಾರು ಮಹಿಳೆಯರು, ಮನೆಯಲ್ಲಿ ತಿಳಿಯದೇ ತಾವೇ ಲಾಭದಾಸೆಗೆ ಹಣ ಹೂಡಿಕೆ ಮಾಡಿದ್ದರಿಂದ ಪತಿ ಪತ್ನಿ ಬೇರಾಗುವ ಸಂಭವ ಕೂಡಾ ಇತ್ತು ಎನ್ನಲಾಗಿದೆ. ಜನತೆ ಇವರ ಬರುವಿಕೆಯನ್ನೇ ಕಾಯುತ್ತಿದ್ದು ಸುದ್ದಿ ತಿಳಿದ ತಕ್ಷಣ ಮಹಿಳೆಯರೂ ಸೇರಿದಂತೆ ನೂರಾರು ಜನರು ಪೊಲೀಸ್ ಠಾಣೆಯ ಎದುರು ಜಮಾಯಿಸಿ, ತೀವ್ರ ತರಾಟೆಗೆ ತೆಗೆದುಕೊಂಡರು. ಪೊಲೀಸರಿಗೆ ಜನರನ್ನು ನಿಯಂತ್ರಿಸುವುದೇ ಕಷ್ಟಕರವಾಗಿ ಪರಿಣಮಿಸಿತ್ತು.
ಭಟ್ಕಳದವನೇ ಆಗಿರುವ ವಂಚಕ ವ್ಯಕ್ತಿಯ ಪಾಲುದಾರಿಕೆಯಲ್ಲಿ ಫ್ಲೋಲೆಸ್ ಎನ್ನುವ ಕಂಪೆನಿಯನ್ನು ತೆರೆದಿದ್ದು ಕಂಪೆನಿಯಲ್ಲಿ ತನಗೆ ಮೋಸ ಮಾಡಲಾಗಿದೆ ಎನ್ನುವ ಕಥೆ ಕಟ್ಟುತ್ತಿದ್ದಾರೆ. ಠಾಣೆಯಲ್ಲಿ ತನ್ನ ಪಾಲುದಾರರಾದ ಅಬ್ದುಲ್ ರಶೀದ್ ಮತ್ತು ರಮೇಶ ಎನ್ನುವವರು ಮೋಸ ಮಾಡಿದ್ದು ಹಣವನ್ನು ದುಬೈನಲ್ಲಿ ಹೂಡಿಕೆ ಮಾಡುವುದಾಗಿ ತೆಗೆದುಕೊಂಡಿದ್ದಾರೆನ್ನುತ್ತಿದ್ದಾನೆ.
ಫ್ಲೋಲೆಸ್ ಎನ್ನುವ ಕಂಪೆನಿಯನ್ನು ತೆರೆದು ಕಂಪೆನಿಯಲ್ಲಿ ಹಣ ಹೂಡಿಕೆ ಮಾಡಿದವರಿಗೆ ಶೇ.18 ರಿಂದ ಶೇ.30ರ ತನಕ ಲಾಭಾಂಶ ಕೊಡುತ್ತೇವೆಂದು ಪ್ರಚಾರ ಗಿಟ್ಟಿಸಿಕೊಂಡಿದ್ದ ಕಂಪೆನಿ ಕೋಟ್ಯಂತರ ರೂಪಾಯಿ ಹಣವನ್ನು ಭಟ್ಕಳ ತಾಲೂಕೊಂದರಿಂದಲೇ ಸಂಗ್ರಹಿಸಿದೆ. ಭಟ್ಕಳದಲ್ಲಿನ ರಾಷ್ಟ್ರೀಕೃತ ಬ್ಯಾಂಕುಗಳು ಹಾಗೂ ಸಹಕಾರಿ ಬ್ಯಾಂಕುಗಳು ತಮ್ಮ ಬ್ಯಾಂಕಿನ ಗ್ರಾಹಕರು ಒಂದೇ ಸವನೆ ಹಣ ತೆಗೆಯುತ್ತಿರುವುದನ್ನು ನೋಡಿ ಗಾಬರಿಗೊಂಡು ವಿಚಾರಿಸುತ್ತಿರುವಾಗ ಕಂಪೆನಿಗಳು ಹುಟ್ಟಿಕೊಂಡು ದುಪ್ಪಟ್ಟು ಬಡ್ಡಿಕೊಡುವ ಕುರಿತು ತಿಳಿದು ಬಂದಿತ್ತು. ಆಗಲೇ ತಮ್ಮ ಗ್ರಾಹಕರಿಗೆ ಬ್ಯಾಂಕ್ ಅಧಿಕಾರಿಗಳು ತಿಳಿ ಹೇಳಿದ್ದರೂ ಸಹ ಅವರ ಮಾತಿಗೆ ಬೆಲೆಕೊಡದೇ ಬ್ಯಾಂಕ್ ಡಿಪಾಜಿಟ್ ಮಾತ್ರವಲ್ಲ, ಮನೆಯಲ್ಲಿದ್ದ ಚಿನ್ನ, ಬೆಲೆಬಾಳುವ ವಸ್ತುಗಳನ್ನು ಮಾರಾಟ ಮಾಡಿದ್ದಲ್ಲೇ ಹಲವರು ವಾಸ್ತವ್ಯದ ಮನೆಯನ್ನು ಅಡವಿಟ್ಟು ಹಣ ತುಂಬಿದ್ದರು. ಒಂದು ಲಕ್ಷದಿಂದ ಒಂದು ಕೋಟಿ ತನಕ ತುಂಬಿದ ವ್ಯಕ್ತಿಗಳಿದ್ದು ಅವರು ಇಂದು ಕಂಗಾಲಾಗಿದ್ದಾರೆ. ಹಲವು ಮಹಿಳೆಯರು ತಮ್ಮ ಗಂಡನಿಗೆ ತಿಳಿಯದಂತೆ ಲಾಭ ಮಾಡಲು ಹೋಗಿ ತೀವ್ರ ಸಂಕಷ್ಟಕ್ಕೊಳಗಾಗಿದ್ದಲ್ಲದೇ ಕೆಲವರು ಗಂಡನನ್ನೇ ಕಳೆದುಕೊಂಡ ಉದಾಹರಣೆಯೂ ಇದೆ ಎನ್ನುತ್ತಾರೆ ಭಟ್ಕಳದ ಜನತೆ. ಒಟ್ಟಾರೆ ಭಟ್ಕಳದ ಜನತೆಗೆ ಮಕ್ಮಲ್ ಟೋಪಿಯನ್ನು ಹಾಕಿದ ಇವರನ್ನು ಕಾನೂನು ಎನು ಮಾಡುತ್ತದೆ ಎಂದು ಕಾದು ನೋಡಬೇಕಾಗಿದೆ.