ಭಟ್ಕಳ: ಕಳೆದ ಮೂರು ದಿನಗಳಿಂದ ನಿರಂತರವಾಗಿ ರಾತ್ರಿವೇಳೆ ಗುಡುಗು ಸಿಡಿಲಿನಿಂದ ಮಳೆಯಾಗುತ್ತಿದ್ದು ಪವರ್ ಕಟ್ ಸಮಸ್ಯೆಯೊಂದಿಗೆ ಗ್ರಾಮೀಣ ಭಾಗದಲ್ಲಿ ಮನೆಗಳ ಮೇಲೆ ಮರಬಿದ್ದು ಹಾನಿ ಸಂಭವಿಸಿದ್ದು ಸಿಡಿಲು ಬಡಿದ ಪರಿಣಾಮ ಒಂದು ಮನೆಯ ಟಿವಿ, ವಿದ್ಯುತ್ ಮೀಟರ್ ಹಾಗೂ ಎಲೆಕ್ಟ್ರಿಕ್ ವೈರ್ ಹಾನಿಯಾದ ಬಗ್ಗೆ ವರದಿಯಾಗಿದೆ.
ತಾಲೂಕಿನ ಮಾವಳ್ಳಿ ಪಂಚಾಯತ್ ವ್ಯಾಪ್ತಿಯ ದೀವಗೇರಿ ಎಂಬಲ್ಲಿ ಪದ್ಮಾ ಸುಬ್ರಾಯ ನಾಯ್ಕ ಎಂಬುವವರ ವಾಸಿಸುವ ಮನೆಗೆ ಸಿಡಿಲು ಬಡಿದಿದ್ದು ಟಿವಿ, ಮೀಟರ್ಗೆ ಹಾನಿಯಾಗಿದೆ. ಅಲ್ಲದೆ ಬೇಂಗ್ರಯ ಮಾದೇವ ಕುಪ್ಪ ನಾಯ್ಕ ಎಂಬುವವರ ಮನೆಯ ಮೇಲೆ ಮರಬಿದ್ದ ಪರಿಣಾಮ ಅಂದಾಜು 30 ಸಾವಿರ ರೂ ಹಾನಿಯಾಗಿರುವ ಕುರಿತಂತೆ ಮಾಹಿತಿಯಿದೆ.
ಗುಡುಗು ಸಿಡಿಲಿನಿಂದಾಗಿ ಮುರುಡೇಶ್ವರ, ಹೊನ್ನಾವರ ಭಾಗದಲ್ಲಿ 33ಕೆವಿ ವಿದ್ಯುತ್ ತಂತಿ ಹರಿದು ಬಿದ್ದ ಪರಿಣಾಮ ಹೊನ್ನಾವರ ಹಾಗೂ ಭಟ್ಕಳ ತಾಲೂಕಿನಲ್ಲಿ ವಿದ್ಯುತ್ ಸಮಸ್ಯೆಯುಂಟಾಗಿದ್ದು ದಿನದ 24 ಗಂಟೆಗಳಲ್ಲಿ ಕೇವಲ 1-2 ಗಂಟೆ ಮಾತ್ರ ವಿದ್ಯುತ್ ನೀಡಲಾಗುತ್ತಿದೆ. ಇದರಿಂದಾಗಿ ಜನರು ಹಲವು ತೊಂದರೆಗಳನ್ನು ಎದುರಿಸುವಂತಾಗಿದೆ. ಮಂಗಳವಾರವು ಕೂಡ ಬಸ್ತಿಯ ಗೌಡರಗದ್ದೆಯಲ್ಲಿ ಹಾದುಹೋಗಿರುವ ಮುರುಢೇಶ್ವರ-ಭಟ್ಕಳ 33ಕೆ.ವಿ. ಲೈನ್ ಫಾಲ್ಟ್ ಉಂಟಾಗಿದ್ದ ರಿಂದ ಮಧ್ಯಾಹ್ನ 1ಗಂಟೆಯಿಂದ ಸಂಜೆ 5 ಗಂಟೆ ವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಿದ್ದು ಜನರು ಮನೆಯಲ್ಲಿ ಪರದಾಡುವಂತಾಗಿದೆ.