ಭಟ್ಕಳದಲ್ಲಿ ಹರ್ ಘರ್ ತಿರಂಗಾ ಜಾಗೃತಿ ಜಾಥಾ

Source: S O News | By I.G. Bhatkali | Published on 12th August 2022, 7:46 PM | Coastal News |

ಭಟ್ಕಳ: ತಾಲೂಕು ಆಡಳಿತ ಭಟ್ಕಳ, ತಾಲೂಕು ಪಂಚಾಯತ ಭಟ್ಕಳ, ಪುರಸಭೆ ಭಟ್ಕಳ, ಪಟ್ಟಣ ಪಂಚಾಯತ ಭಟ್ಕಳ, ಹಾಗೂ ರಾಜ್ಯ ಸರಕಾರಿ ನೌಕರರ ಸಂಘ ಭಟ್ಕಳ ಇವರ ಸಂಯುಕ್ತ ಆಶ್ರಯದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ಗುರುವಾರ ಹಮ್ಮಿಕೊಳ್ಳಲಾದ ಹರ್ ಘರ್ ತಿರಂಗಾ ಅಭಿಯಾನ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಭಟ್ಕಳ ಸಹಾಯಕ ಆಯುಕ್ತೆ ಮಮತಾದೇವಿ ಚಾಲನೆ ನೀಡಿದರು.

 ನಂತರ ಭಟ್ಕಳ ಸಂಶುದ್ದೀನ್ ಸರ್ಕಲ್‍ನಲ್ಲಿ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕ ಮಹನೀಯರು ಬಲಿದಾನ ಗೈದಿದ್ದಾರೆ. ಪರಿಣಾಮವಾಗಿ ಪ್ರತಿಯೊಬ್ಬ ದೇಶವಾಸಿಗಳ ಉಸಿರಾಟದಲ್ಲಿ ಸ್ವಾತಂತ್ರ್ಯ ಇರುವುದನ್ನು ಕಾಣಬಹುದಾಗಿದೆ.

ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂದರ್ಭದಲ್ಲಿ ಆ.13 ಬೆಳಿಗ್ಗೆಯಿಂದ ಆ.15ರ ಸಂಜೆಯವರೆಗೆ ಪ್ರತಿ ಮನೆ, ಸರಕಾರಿ ಹಾಗೂ ಸರಕಾರಿಯೇತರ ಕಚೇರಿಗಳಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲು ಅವಕಾಶ ಮಾಡಿಕೊಡಲಾಗಿದೆ.

ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ಐತಿಹಾಸಿಕ ಕುಮಟಾ ಮಿರ್ಜಾನ ಕೋಟೆಯು ತ್ರಿವರ್ಣದಿಂದ ಕಂಗೊಳಿಸಲಿದೆ. ಸ್ವಾತಂತ್ರ್ಯ ಆಚರಣೆ ಮುಗಿದ ನಂತರ ಧ್ವಜಕ್ಕೆ ಅಪಮಾನವಾಗದಂತೆ ಎಲ್ಲರೂ ಕಾಳಜಿ ವಹಿಸಬೇಕು ಎಂದು ಕರೆ ನೀಡಿದರು.

ತಹಸೀಲ್ದಾರ ಡಾ.ಸುಮಂತ್, ತಾಪಂ ಕಾರ್ಯನಿರ್ವಹಣಾಧಿಕಾರಿ ಪ್ರಭಾಕರ ಚಿಕ್ಕನಮನೆ, ಕ್ಷೇತ್ರ ಶಿಕ್ಷಣಾಧಿಕಾರಿ ದೇವಿದಾಸ ಮೊಗೇರ, ಉಪ ತಹಶೀಲ್ದಾರ ಪ್ರವೀಣ, ಪುರಸಭಾ ಮುಖ್ಯಾಧಿಕಾರಿ ಸುರೇಶ, ಎಸ್‍ಐ ಬಿ. ಸುಮಾ, ಕರ್ನಾಟಕ ರಾಜ್ಯ ನೌಕರರ ಸಂಘ ಭಟ್ಕಳ ಶಾಖೆಯ ಅಧ್ಯಕ್ಷ ಮೋಹನ ನಾಯ್ಕ, ಕಾರ್ಯದರ್ಶಿ ಗಣೇಶ ಹೆಗಡೆ, ರಾಜ್ಯ ಪರಿಷತ್ ಸದಸ್ಯ ಪ್ರಕಾಶ ಶಿರಾಲಿ, ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು, ವಿವಿಧ ಶಾಲೆಗಳ ವಿದ್ಯಾರ್ಥಿಗಳು ಜಾಥಾದಲ್ಲಿ ಪಾಲ್ಗೊಂಡರು.

Read These Next