ಕಾರವಾರ: ಹಜ್ ಯಾತ್ರೆ ಮಾಡುವುದು ಮುಸ್ಲಿಮರಿಗೆ ಒಂದು ಪವಿತ್ರ ಕಾರ್ಯ. ಹಜ್ ಯಾತ್ರೆಯಿಂದ ಮನುಷ್ಯನ ಮನಸ್ಸು ಪರಿಶುದ್ದವಾಗುತ್ತದೆ. ಪ್ರತಿವರ್ಷ ತಾನು ಇದನ್ನು ಕಂಡಿದ್ದೇನೆ. ಎಲ್ಲಾ ಹಜ್ ಯಾತ್ರಿಗಳಿಗೆ ಶುಭವಾಗಲಿ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ||ಶಿವಾನಂದ ಕುಡ್ತರ್ಕರ್ ಹೇಳಿದರು.
ಅವರು ಸಾಹಿಲ್ ಸೋಶಿಯಲ್ ವೆಲ್ಫೇರ್ ಟ್ರಸ್ಟ್ ಕಾರವಾರದವರು ಜಿಲ್ಲಾ ಆಸ್ಪತ್ರೆಯಲ್ಲಿ ಹಮ್ಮಿಕೊಂಡ ಹಜ್ ಯಾತ್ರಿಗಳಿಗೆ ಲಸಿಕೆ ನೀಡುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು. ಪ್ರವಚನವನ್ನು ನೀಡಲು ಆಗಮಿಸಿದ ಕಾರವಾರ ಮಸೀದಿಯ ಮೌಲಾನಾ ಬದ್ರುಝ್ಝಾ ರವರು ಹಜ್ ಯಾತ್ರೆಯನ್ನು ಕೈಗೊಳ್ಳಬೇಕಾದರೆ ಅನುಸರಿಸಬೇಕಾದ ನಿಯಮಗಳ ಬಗ್ಗೆ ಹಾಗೂ ಪ್ರಾಮುಖ್ಯತೆಯ ಬಗ್ಗೆ ವಿವರವಾಗಿ ತಿಳಿಸಿದರು. ಇದೇ ಸಂದರ್ಭದಲ್ಲಿ ಜಿಲ್ಲೆಯ ಬೇರೆ ಬೇರೆ ತಾಲೂಕಿನಿಂದ ಆಗಮಿಸಿದ ಹಜ್ ಯಾತ್ರಿಗಳಿಗೆ ಯಾವದೇ ಸಾಂಕ್ರಮಿಕ ರೋಗಗಳು ಬಾರದಂತೆ ತಡೆಯಲು ಲಸಿಕೆಯನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಡಾ|| ಅಮಿತ ಕಾಮತ, ಡಾ|| ನದೀಮ್ ಸಯ್ಯದ್, ಡಾ|| ಮೋಹನ ಬಾಬು, ರಾಷ್ಟ್ರ ಹಾಗೂ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ನಜೀರ್ ಅಹಮದ್ ಯು.ಶೇಖ್, ನಗರಸಭೆಯ ಮಾಜಿ ಅಧ್ಯಕ್ಷ ಎಮ್.ಇ.ಶೇಖ್, ಅಸ್ಲಮ್ ಶೇಖ್, ಮುಸ್ತಾಕ್ ಮೊಮಿನ್, ಅಝೀಮ್ ಅಂಬಾರಿ, ಜಿಲ್ಲಾ ವಕ್ಫ ಅಧ್ಯಕ್ಷ ಖಯಾಮ ಮುಗದ್, ಮೊಹಮ್ಮದ್ ಅಕ್ಬರ್ ಶೇಖ್, ಜಿಲ್ಲಾ ಆಸ್ಪತ್ರೆಯ ಸುಪರಿಂಟೆಂಡೆಂಟ್ ಪಾವಸ್ಕರ್, ಹಜ್ ಕಮಿಟಿಯ ಪ್ರತಿನಿಧಿ ನಾಸಿರ್ ಸಾಬ್ ಮತ್ತಿತರರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಸಾಹಿಲ್ ಸೋಶಿಯಲ್ ವೆಲ್ಫೇರ್ ಟ್ರಸ್ಟ್ನ ಅಧ್ಯಕ್ಷರಾದ ಮೊಹಮ್ಮದ್ ಕಲೀಂ ಶೇಖ್ ಎಲ್ಲರನ್ನು ಸ್ವಾಗತಿಸಿದರು. ಕೊನೆಯಲ್ಲಿ ಕಲ್ಲೂರ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ಇಬ್ರಾಹಿಂ ಕಲ್ಲೂರ್ ವಂದಿಸಿದರು.