ಅರಫಾ ಮೈದಾನದಲ್ಲಿ 25ಲಕ್ಷ ಮುಸ್ಲಿಮರು; ಹಜ್ ಯಾತ್ರೆಯ ಎರಡನೇ ದಿನ ಮಕ್ಕಾದಲ್ಲಿ

Source: sonews | By Staff Correspondent | Published on 10th August 2019, 11:09 PM | Global News | Don't Miss |

ಅರಫಾತ್ : ಹಜ್ ಯಾತ್ರೆಯಲ್ಲಿ ಪಾಲ್ಗೊಂಡಿರುವ ಸುಮಾರು 25 ಲಕ್ಷ ಮುಸ್ಲಿಮರು ಯಾತ್ರೆಯ ಎರಡನೇ ದಿನವಾದ ಶನಿವಾರ ಅರಫಾತ್ ಬೆಟ್ಟಕ್ಕೆ ಆಗಮಿಸಿದ್ದಾರೆ.

ಪುರುಷ ಮತ್ತು ಮಹಿಳಾ ಯಾತ್ರಿಗಳು ದೇವರ ನಾಮ ಪಠಿಸುತ್ತಾ ಬೆಟ್ಟವನ್ನು ಹತ್ತಿದರು.

ಪ್ರವಾದಿ ಮುಹಮ್ಮದರು ತನ್ನ ಕೊನೆಯ ಪ್ರವಚನವನ್ನು ನೀಡಿದ ಬೆಟ್ಟಕ್ಕೆ ಹೆಚ್ಚಿನ ಯಾತ್ರಿಕರು ಶನಿವಾರ ಮುಂಜಾನೆಯೇ ನಡೆದುಕೊಂಡು ಹೋದರು.

 ಭೂಮಿ ಮೇಲಿನ ಅತಿ ದೊಡ್ಡ ಧಾರ್ಮಿಕ ಸಮಾವೇಶಗಳ ಪೈಕಿ ಒಂದಾಗಿರುವ ಹಜ್ ಆಚರಣೆಯ ಎರಡನೇ ದಿನವು ಯಾತ್ರಿಗಳಿಗೆ ಅತ್ಯಂತ ಸ್ಮರಣೀಯವಾಗಿದೆ.

ಶುಕ್ರವಾರ ರಾತ್ರಿ ಮಿನಾದಲ್ಲಿ ತಂಗಿದ ಯಾತ್ರಿಕರು ಶನಿವಾರ ಸೂರ್ಯೋದಯದ ಬಳಿಕ ಅರಫಾತ್ ಬೆಟ್ಟದತ್ತ ಸಾಗಿದರು.

ರಸ್ತೆಗಳಲ್ಲಿ ಯಾತ್ರಿಕರ ಸಂಚಾರವನ್ನು ನಿಯಂತ್ರಿಸಿದ ಭದ್ರತಾ ಸಿಬ್ಬಂದಿ, ಅವರಿಗೆ ಮಾರ್ಗದರ್ಶನ ನೀಡಿದರು. ವಿವಿಧ ಸರಕಾರ ಸಂಸ್ಥೆಗಳು ಯಾತ್ರಿಗಳಿಗೆ ಆಹಾರ ಮತ್ತು ಔಷಧಗಳನ್ನು ಪೂರೈಸಿದರು.

► ಯಾತ್ರಿಕರ ಮೇಲೆ ಸುರಿದ ಜಡಿ ಮಳೆ

ಶನಿವಾರ ಅರಫಾತ್ ಬೆಟ್ಟದಲ್ಲಿ ಹಜ್‌ನ ಎರಡನೇ ದಿನದ ವಿಧಿ ವಿಧಾನಗಳನ್ನು ಯಾತ್ರಿಕರು ಪೂರೈಸುತ್ತಿದ್ದಂತೆಯೇ, ಭಾರೀ ಮಳೆ ಸುರಿಯಿತು.

ಕೆಲವರು ಆಶ್ರಯಕ್ಕಾಗಿ ಓಡಿದರೆ, ಹಲವರು ಪ್ರಾರ್ಥನೆ ಸಲ್ಲಿಸುವುದಕ್ಕಾಗಿ ರಸ್ತೆಗಳಿಗೆ ಓಡಿದರು.

ಮಳೆ ಸುರಿಯುತ್ತಿರುವಾಗ ಪ್ರಾರ್ಥನೆ ಸಲ್ಲಿಸಿದರೆ ಹೆಚ್ಚಿನ ಪ್ರತಿಫಲ ಸಿಗುತ್ತದೆ ಎಂಬ ನಂಬಿಕೆ ಇಸ್ಲಾಮ್‌ನಲ್ಲಿದೆ.

ಜಡಿ ಮಳೆ ಸುರಿದ ಕೆಲವೇ ನಿಮಿಷಗಳಲ್ಲಿ ರಸ್ತೆಗಳಲ್ಲಿ ಪ್ರವಾಹದ ನೀರು ಹರಿಯಿತು. ರಸ್ತೆಗಳಲ್ಲಿ ಅಲ್ಲಲ್ಲಿ ನೀರು ನಿಂತಿತು ಹಾಗೂ ವಾತಾವರಣ ತಂಪಾಯಿತು.

ಈ ಸಂದರ್ಭದಲ್ಲಿ ಪ್ರವಾಹ ತಲೆದೋರುವ ಸಾಧ್ಯತೆಯಿರುವ ತಗ್ಗು ಪ್ರದೇಶಗಳಿಗೆ ಹೋಗದಂತೆ ಹಾಗೂ ಲೋಹದ ವಸ್ತುಗಳನ್ನು ಸ್ಪರ್ಶಿಸದಂತೆ ಅಧಿಕಾರಿಗಳು ಯಾತ್ರಿಗಳಿಗೆ ಎಚ್ಚರಿಕೆ ನೀಡಿದರು.

► ಮೂರನೇ ಘಟ್ಟದತ್ತ ಯಾತ್ರಿಕರು

ಶನಿವಾರ ಹಗಲು ಅರಫಾತ್ ಬೆಟ್ಟದಲ್ಲಿ ಕಳೆದ ಬಳಿಕ, ರಾತ್ರಿ ಯಾತ್ರಿಕರು ಹಜ್‌ನ ಮೂರನೇ ಘಟ್ಟದತ್ತ ಸಾಗಿದ್ದಾರೆ.

ಸುಮಾರು 25 ಲಕ್ಷ ಯಾತ್ರಿಕರು ಶನಿವಾರ ರಾತ್ರಿ ಮುಝ್ದಲಿಫದಲ್ಲಿ ಕಳೆಯಲಿದ್ದಾರೆ. ಅವರು ಮಧ್ಯರಾತ್ರಿಯ ಬಳಿಕ, ‘ಸೈತಾನನಿಗೆ ಕಲ್ಲೆಸೆಯುವ’ ವಿಧಿಯಲ್ಲಿ ಪಾಲ್ಗೊಳ್ಳಲು ಮಿನಾಕ್ಕೆ ತೆರಳಲಿದ್ದಾರೆ.

ಮಿನಾದಲ್ಲಿ ಅವರು ಸೈತಾನನ್ನು ಸಂಕೇತಿಸುವ ಗೋಡೆಗೆ ಕಲ್ಲೆಸೆಯಲಿದ್ದಾರೆ.

Read These Next

ಗಾಝಾದ ಅಲ್-ಶಿಫಾ ಆಸ್ಪತ್ರೆಯನ್ನು 'ಸಾವಿನ ವಲಯ'ವೆಂದು ಘೋಷಿಸಿದ ವಿಶ್ವಸಂಸ್ಥೆ ಪ್ರವೇಶದ್ವಾರದಲ್ಲಿ ಸಾಮೂಹಿಕ ಸಮಾಧಿ: ವಿಶ್ವ ಆರೋಗ್ಯ ಸಂಸ್ಥೆ

ಹಮಾಸ್ ನಿಯಂತ್ರಣದ ಗಾಝಾ ಪಟ್ಟಿಯಲ್ಲಿ ಇಸ್ರೇಲ್‌ನ ವೈಮಾನಿಕ ದಾಳಿಯ ಬಳಿಕ ನೆಲೆಸಿರುವ ಭೀಕರ ಪರಿಸ್ಥಿತಿಯನ್ನು ಅವಲೋಕಿಸಲು ಈ ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...