ಗುಂಡ್ಲುಪೇಟೆ: ಎಸೆಸೆಲ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡಿದ್ದರಿಂದ ವಿದ್ಯಾರ್ಥನಿಯೋರ್ವಳು ಆತ್ಮಹತ್ಯೆಗೈದ ಘಟನೆ ತಾಲೂಕಿನ ಕೊಡಗಾಪುರ ಎಂಬಲ್ಲಿ ನಡೆದಿದೆ.
ಅಗತಗೌಡನಹಳ್ಳಿ ಗ್ರಾಮದ ಕಾಂತರಾಜಪ್ಪ ಎಂಬವರ ಪುತ್ರಿ ಮಾನಸಾ ಸೋಮಹಳ್ಳಿ ಗ್ರಾಮದಲ್ಲಿರುವ ಗಂಗಾಧರೇಶ್ವರ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಇಂದು ಪ್ರಕಟವಾದ ಎಸೆಸೆಲ್ಸಿ ಫಲಿತಾಂಶದಲ್ಲಿ ತಾನು ನಾಲ್ಕು ವಿಷಯಗಳಲ್ಲಿ ಅನುತ್ತೀರ್ಣಗೊಂಡದ್ದರಿಂದ ಮನನೊಂದು ತನ್ನ ಅಜ್ಜಿ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ವಿಷಯ ತಿಳಿಯುತ್ತಿದ್ದಂತೆ ಮಾನಸಾಳ ಪೋಷಕರು ಕೊಡಗಾಪುರಕ್ಕೆ ಆಗಮಿಸಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಗುಂಡ್ಲುಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎನ್.ರಾಜು ಕೊಡಗಾಪುರಕ್ಕೆ ಭೇಟಿ ನೀಡಿ, ಪೋಷಕರಿಗೆ ಸಾಂತ್ವನ ಹೇಳಿದರು.
ಶಿವಮೊಗ್ಗ: ಇಲ್ಲಿನ ಬಸವನಗುಡಿ 2ನೇ ಕ್ರಾಸ್ ನ ಗಣೇಶ್ ಎಂಬರ ಪುತ್ರಿ ಪ್ರೀತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಶಿವಮೊಗ್ಗದ ಸರ್ವೋದಯ ಪ್ರೌಢಶಾಲೆಯ ವಿದ್ಯಾರ್ಥಿನಿಯಾದ ಪ್ರೀತಿ ಎಸೆಸೆಲ್ಸಿಯಲ್ಲಿ ಅನುತ್ತೀರ್ಣಗೊಂಡದ್ದರಿಂದ ಬೇಸರಗೊಂಡು ಆತ್ಮಹತ್ಯೆಗೆ ಯತ್ನಿಸಿದ್ದಳು. ತಕ್ಷಣವೇ ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಈ ಬಗ್ಗೆ ಜಯನಗರ ಪೋಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.