ಸರಕಾರ ದೇಶದ್ರೋಹ ಅಸ್ತ್ರ ಬಳಸಿ ವಾಕ್ ಸ್ವಾತಂತ್ರ್ಯ ಮೊಟಕುಗೊಳಿಸುತ್ತಿದೆ- ನ್ಯಾಯಮೂರ್ತಿ ಲೋಕೂರ್ ಆರೋಪ
ಹೊಸದಿಲ್ಲಿ: ವಾಕ್ ಸ್ವಾತಂತ್ರ್ಯವನ್ನು ಮೊಟಕುಗೊಳಿಸಲು ದೇಶದ್ರೋಹ ಕಾನೂನನ್ನು ಸರಕಾರ ಅಸ್ತ್ರವಾಗಿ ಬಳಸುತ್ತಿದೆ ಎಂದು ಸುಪ್ರೀಂಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಎಂ.ಬಿ.ಲೋಕೂರ್ ಗಂಭೀರ ಆರೋಪ ಮಾಡಿದ್ದಾರೆ.
ನ್ಯಾಯಾಂಗ ಹೊಣೆಗಾರಿಕೆ ಮತ್ತು ಸುಧಾರಣೆಗಳ ಅಭಿಯಾನ (ಸಿಜೆಎಆರ್) ಮತ್ತು ಸ್ವರಾಜ್ ಅಭಿಯಾನ್ ಆಯೋಜಿಸಿದ್ದ ವೆಬಿನಾರ್ನಲ್ಲಿ ಅವರು ಮಾತನಾಡುತ್ತಿದ್ದರು.
"ಸರಕಾರ ಸಂವಿಧಾನಾತ್ಮಕ ವಿಧಾನದಲ್ಲಿ ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕಬಹುದು ಮತ್ತು ತಡೆಯಬಹುದು/ ಆದರೆ ಸರಕಾರ ಇದಕ್ಕಾಗಿ ದೇಶದ್ರೋಹ ಕಾನೂನನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ. ದಿಢೀರನೇ ದೇಶದ್ರೋಹದ ಆರೋಪ ಪ್ರಕರಣಗಳು ಹೆಚ್ಚುತ್ತಿವೆ" ಎಂದು ಹೇಳಿದರು.
ಈಶಾನ್ಯ ದಿಲ್ಲಿ ಗಲಭೆಗೆ ಕುಮ್ಮಕ್ಕು ನೀಡಿದ ಆರೋಪದಲ್ಲಿ ಜೆಎನ್ಯು ವಿದ್ಯಾರ್ಥಿ ಮುಖಂಡ ಉಮರ್ ಖಲೀದ್ ಅವರನ್ನು ಬಂಧಿಸಿದ ಬೆನ್ನಲ್ಲೇ ನ್ಯಾಯಮೂರ್ತಿಗಳು ಈ ಅಭಿಪ್ರಾಯ ವ್ಯಕ್ತಪಡಿಸಿರುವುದಕ್ಕೆ ವಿಶೇಷ ಮಹತ್ವ ಬಂದಿದೆ. ಕಾನೂನುಬಾಹಿರ ಚಟುವಟಿಕೆಗಳು ಮತ್ತು ತಡೆ ಕಾಯ್ದೆ (ಯುಎಪಿಎ), ದೇಶದ್ರೋಹ ಸೇರಿದಂತೆ ಭಾರತೀಯ ದಂಡಸಂಹಿತೆಯ ವಿವಿಧ ವಿಧಿಗಳ ಅನ್ವಯ ಖಲೀದ್ ವಿರುದ್ಧ ಪ್ರಕರಣ ದಾಖಲಾಗಿದೆ.
ದೇಶದ ಏಕತೆ ಮತ್ತು ಸಮಗ್ರತೆ ಬಗ್ಗೆ ಮಾತನಾಡುವವರನ್ನು 'ದೇಶ ವಿಭಜಕರು' ಎಂದು ಕಾಣಲಾಗುತ್ತಿದ್ದು, ಅವರನ್ನು ಮುಂಜಾಗ್ರತಾ ಕ್ರಮವಾಗಿ ಜೈಲಿಗೆ ಅಟ್ಟಲಾಗುತ್ತಿದೆ. ದೇಶಕ್ಕೆ ಒಳ್ಳೆಯದು ಮಾಡುವ ಬಗ್ಗೆ ಯುವಕರು, ವಿದ್ಯಾರ್ಥಿಗಳು ಮಾತನಾಡುತ್ತಿದ್ದಾರೆ; ಆದರೆ ನಿಮ್ಮನ್ನು ಕಾನೂನುಬಾಹಿರ ಚಟುವಟಿಕೆಗಳು ಮತ್ತು ದೇಶದ್ರೋಹ ಆರೋಪದಲ್ಲಿ ಬಂಧಿಸುತ್ತಿದ್ದೇವೆ ಎಂದು ಸರ್ಕಾರ ಹೇಳುತ್ತಿದೆ ಎಂದು ನ್ಯಾಯಮೂರ್ತಿ ವಿಶ್ಲೇಷಿಸಿದರು.