ಹೊನ್ನಾವರ ಶಾಲಾ ಬಾಲಕಿ ಚೂರಿ ಇರಿತ ಪ್ರಕರಣ ಬೇಧ
- ಸ್ವಜಾತಿ ಯುವಕನ ಪೀಡನೆಯಿಂದ ತಪ್ಪಿಸಿಕೊಳ್ಳಲು ಸುಳ್ಳು ಹೇಳಿದೆ=ವಿದ್ಯಾರ್ಥಿನಿ
- ಲೈಂಗಿಕ ದೌರ್ಜನ್ಯದಡಿ ಇಬ್ಬರು ವಿರುದ್ಧ ಪ್ರಕರಣ ದಾಖಲು
- ಮನೆ, ಮಸೀದಿ ಮೇಲೆ ಕಲ್ಲು ತೂರಾಟ; ನಾಲ್ಕು ಪ್ರಕರಣ ದಾಖಲು
ಭಟ್ಕಳ: ಹೊನ್ನಾವರ ತಾಲೂಕಿನ ಮಾಗೋಡು ಗ್ರಾಮದ ೯ನೇ ತರಗತಿ ವಿದ್ಯಾರ್ಥಿನಿಯ ಮೇಲೆ ಮುಸುಕುಧಾರಿ ಯುವಕರು ಚೂರಿಯಿಂದ ಇರಿದು ಹಲ್ಲೆ ಮಾಡಿರುವ ಪ್ರಕರಣವನ್ನು ಬೇಧಿಸಿದ ಉತ್ತರಕನ್ನಡ ಜಿಲ್ಲಾ ಪೊಲೀಸರು ಇದೊಂದು ಲೈಂಗೀಕ ದೌರ್ಜನ್ಯ ಪ್ರಕರಣವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ್ ಭಾನುವಾರದಂದು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬಚ್ಚಿಕೇರಿ, ಮಾಗೋಡ ನಿವಾಸಿ ಗಣೇಶ್ ಈಶ್ವರ ನಾಯ್ಕ ಹಾಗೂ ಸಂತೋಷ್ ಎಂಬುವರ ವಿರುದ್ಧ ಲೈಂಗಿಕ ದೌರ್ಜನ್ಯಗಳಿಂದ ಮಕ್ಕಳ ರಕ್ಷಣೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದು ತನಿಖೆಯನ್ನು ಕೈಗೊಂಡಿದ್ದಾರೆ. ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ಪರೇಶ ಮೇಸ್ತಾ ನ ಸಾವಿನ ನಂತರ ನಡೆದ ಹಿಂಸಾಚಾರದಿಂದ ನಲುಗಿದ್ದ ಉತ್ತರಕನ್ನಡ ಜಿಲ್ಲೆ ಶಾಂತ ಸ್ಥಿತಿಗೆ ಮರಳುವಾಗಲೇ ಡಿ.೧೪ ರಂದು ಹೊನ್ನಾವರ ತಾಲೂಕಿನ ಮಾಗೋಡು ಗ್ರಾಮದ ಶಾಲಾ ಬಾಲಕೀಯ ಮೇಲೆ ದುಷ್ಕರ್ಮಿಗಳು ಚೂರಿಯಿಂದ ಇರಿದು ಹಲ್ಲೆಗೆ ಮುಂದಾಗಿದ್ದರು ಎಂಬ ವದಂತಿಯಿಂದ ಮತ್ತೇ ಹೊನ್ನಾವರದಲ್ಲಿ ವಿಷಮ ಪರಿಸ್ಥಿತಿಯುಂಟಾಗಿದ್ದು ಇದರಿಂದಾಗಿ ಮುಸ್ಲಿಮರಿಗೆ ಸೇರಿದ ಮಸೀದಿ, ಮನೆಗಳ ಮೇಲೆ ದಾಳಿ ನಡೆದು ಅಪಾರ ಸ್ವತ್ತುವಿತ್ತ ನಾಶಗೊಂಡಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಇಲಾಖೆ ಕೊನೆಗೂ ಇದನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದು ದುಷ್ಕರ್ಮಿಗಳಿಗೆ ಹೆಡೆಮುರಿ ಏಟು ನೀಡಿದ್ದಾರೆ. ಶಾಂತವಾಗಿದ್ದ ಉತ್ತರಕನ್ನಡ ಜಿಲ್ಲೆಯನ್ನು ರಾಜಕೀಯ ಹಿತಾಸಕ್ತಿಗಾಗಿ ಕೋಮುಗಲಭೆಗಳನ್ನು ಸೃಷ್ಟಿಸುವಲ್ಲಿ ಸಫಲರಾಗಿದ್ದ ಕಿಡಿಗೇಡಿಗಳು ಶಾಲಾ ಬಾಲಕೀಯನ್ನು ಮುಂದಿಟ್ಟುಕೊಂಡು ಆಟ ಆಡಲು ನೋಡಿದ್ದು ಜಿಲ್ಲೆಯ ಪ್ರಜ್ಞಾವಂತ ನಾಗರೀಕರು ತಲೆ ತಗ್ಗಿಸುವಂತಾಗಿದೆ.
ಪ್ರಕರಣದ ಹಿನ್ನೆಲೆ: ಡಿ.೧೪ ರಂದು ಹೊನ್ನಾವರ ತಾಲೂಕಿನ ಮಾಗೋಡು ಅಂಚೆ ಕೊಡ್ಲಗದ್ದೆ ಗ್ರಾಮದ ೯ನೇ ತರಗತಿ ವಿದ್ಯಾರ್ಥಿನಿ ಬೆಳಗಿನ ಜಾವ ಮನೆಯಿಂದ ಸಂಶಿ ಶಾಲೆಗೆ ನಡೆದುಕೊಂಡು ಬರುವಾರ ಬಾಲಕಿಯ ಎರಡು ಕೈಗಳ ಮೇಲೆ ಕೊಯ್ದ ಗಾಯಗಳಾದ ಹಿನ್ನೆಲೆಯಲ್ಲಿ ಮಾಗೋಡ ಸರ್ಕಲ್ ನಲ್ಲಿ ನೂರಾರು ಸಂಖ್ಯೆಯಲ್ಲಿ ಜನರು ಸೇರಿ ಪ್ರಕ್ಷುಬ್ಧ ವಾತಾವರಣವನ್ನು ನಿರ್ಮಾಣ ಮಾಡಿದ್ದು ನಂತರ ವಿದ್ಯಾರ್ಥಿನಿಯನ್ನು ಚಿಕಿತ್ಸೆಗಾಗಿ ಹೊನ್ನವರ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿಲಗಿತ್ತು. ಬಾಲಕಿಯನ್ನು ವಿಚಾರಣೆಗೊಳ ಪಡಿಸಿದ ಪೊಲೀಸರಿಗೆ ಬಾಲಕಿ, ತಾನು ಶಾಲೆಗೆ ಹೋಗುತ್ತಿದ್ದಾಗ ಬೆಳಿಗ್ಗೆ ೭.೩೦ಕ್ಕೆ ಯಾರೋ ಇಬ್ಬರು ಅಪರಿಚಿತರು ಹಿಂಬಂದಿ ಬಂದು ಎರಡು ಕೈಗಳನ್ನು ಹಿಡಿದು ಚಾಕು ತೋರಿಸಿ ಕೊಲೆ ಮಾಡುತ್ತೇವೆ ಎಂದು ಬೆದರಿಸಿ ಬಾಯಿಗೆ ಕರ ವಸ್ತ್ರ ತುರುಕಿ ಅಪಹರಣ ಮಾಡಲು ಪ್ರಯತ್ನಿಸಿದ್ದರು ಆ ಸಮಯದಲ್ಲಿ ಅವರ ಕೈಯಲ್ಲಿದ್ದ ಚಾಕುವಿನಿಂದ ನನ್ನ ಎರಡೂ ಕೈಗಳಿಗೆ ಹೊಡೆದು ಗಾಯಪಡಿಸಿರುತ್ತಾರೆ ಎಂಬ ಹೇಳಿಕೆ ನೀಡಿದ್ದಳು. ಅಲ್ಲದೆ ಹಲ್ಲೆ ಮಾಡಿದವರು ಗಡ್ಡಬಿಟ್ಟಿದ್ದರು ಎಂದೂ ಹೇಳಿದ್ದು ಒಂದು ಕೋಮಿನ ಜನರ ಮೇಲೆ ಶಂಕೆ ಹುಟ್ಟಿಸುವಂತೆ ಮಾಡಿತ್ತು. ಈ ಕುರಿತಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆಯನ್ನು ಕೈಗೊಂಡಿದ್ದರು.
ಶಾಲಾ ಬಾಲಕಿಯ ಮೇಲೆ ಚೂರಿ ಹಾಕಿದ ಪ್ರಕರಣ ವಿಚಿತ್ರ ತಿರುವು ಪಡೆದುಕೊಂಡಿದ್ದು ನಂತರ ಮುಸ್ಲಿಮರನ್ನು ಗುರಿಯಾಗಿಸಿ ಮಸೀದಿ ಹಾಗೂ ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಲ್ಲದೆ ಮಸೀದಿಯಲ್ಲಿ ಪ್ರಾರ್ಥನೆ ಮಾಡುವ ಮುಸಲ್ಲಾಗಳನ್ನು ಸುಟ್ಟುಹಾಕಲಾಗಿತ್ತು. ಈ ಘಟನೆಗೆ ಸಂಬಂಧಿಸಿಂತೆ ಹೊನ್ನಾವರ ಠಾಣೆಯಲ್ಲಿ ನಾಲ್ಕು ವಿವಿಧ ಪ್ರಕರಣಗಳು ದಾಖಲಾಗಿದ್ದು ಕಳೆದ ಒಂದು ವಾರದಿಂದ ಹೊನ್ನಾವರ ಸೇರಿದಂತೆ ಜಿಲ್ಲೆಯ ಹಲವುಕಡೆ ಪ್ರಕ್ಷುಬ್ಧ ವಾತವರಣ ನಿರ್ಮಾಣಗೊಂಡಿತ್ತು.
ಬಾಲಕೀಯ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಧಿಕಾರಿಗಳ ತಂಡಗಳನ್ನು ರಚಿಸಿ ತನಿಖೆಯನ್ನು ಕೈಗೊಂಡಿತ್ತು. ಅಲ್ಲದೆ ನೊಂದ ಶಾಲಾ ಬಾಲಕಿಯನ್ನು ಮಹಿಳಾ ಸಾಂತ್ವನ ಕೇಂದ್ರದ ನುರಿತ ಆಪ್ತ ಸಮಾಲೋಚಕರ ಸಮಕ್ಷಮದಲ್ಲಿ ವಿಚಾಣೆ ನಡೆಸಿದ್ದು ಬಾಲಕಿ ಸತ್ಯವನ್ನು ಬಹಿರಂಗಗೊಳಿಸಿದ್ದಾಳೆ.
ನಡೆದ ಘಟನೆ: ಬಾಲಕಿ ತನ್ನ ಮನೆಯಿಂದ ಸುಮಾರು ೮ಕಿಮಿ. ದೂರ ಇರುವ ಸಂಶಿ ಶಾಲೆಗೆ ಕಾಡಿನ ಮಾರ್ಗವಾಗಿ ನಡೆದುಕೊಂಡೇ ಹೋಗುತ್ತಿದ್ದು ಸ್ವಜಾತಿಯ ಯುವಕನೋರ್ವ ಕಳೆದ ಹಲವು ದಿನಗಳಿಂದ ಆಕೆಯನ್ನು ಪೀಡಿಸುತ್ತಿದ್ದ ಎಂದು ತಿಳಿಸಿದ್ದು ತನ್ನ ಕುಟುಂಬ ಗೌರಕ್ಕೆ ಹೆದರಿದ ಬಾಲಕಿ ವಿಷಯವನ್ನು ತಾಯಿ ಬಳಿ ಹೇಳಿಕೊಂಡಿದ್ದಾಳೆ. ಆಗಾಗ ಯುವಕನು ಬಾಲಕಿಯನ್ನು ತನ್ನ ಬೈಕಿನಲ್ಲಿ ಕೂಡುವಂತೆ ಪೀಡಿಸುತ್ತಿದ್ದನ್ನು ಎಂದು ಬಾಲಕಿ ಬಾಯಿಬಿಟ್ಟಿದ್ದಾಳೆ. ಕಳೆದ ಶುಕ್ರವಾರ ಶಾಲೆಗೆ ಹೋಗುವಾಗ ಪೀಡಕ ದಾರಿ ಮಧ್ಯದಲ್ಲಿ ಬಾಲಕೀಯನ್ನು ಅಡ್ಡ ಹಾಕಿ ನಿನಗೆ ತುಂಬ ಸೊಕ್ಕು, ನನ್ನ ಬೈಕಿನಲ್ಲಿ ಕರೆದರೆ ಬರಲಿಕ್ಕೆ ಆಗುವುದಿಲ್ಲವಾ ನಿನಗೆ ಏನಾದರೂ ಆದರೆ ತಾನಾಗಿಯೇ ನನ್ನ ಜೊತೆ ನನ್ನ ಬೈಕಿನಲ್ಲಿ ಬುರತ್ತಿಯಾ ಎಂಬಿತ್ಯಾದಿಯಾಗಿ ಬೆದರಿಕೆಯನ್ನು ಹಾಕಿದ್ದು ಬೆದರಿಕೆಗೆ ಹೆದರಿದ ಬಾಲಕಿ ತನ್ನಿಂದ ತನ್ನ ಕುಟುಂಬಕ್ಕ ಅಗೌರವ ಉಂಟಾಗುತ್ತದೆ ಎಂದು ಆತಂಕಗೊಂಡಿದ್ದಾಗಿ ವಿಚಾರಣೆಯಿಂದ ಹೊರಬಂದಿದೆ. ಡಿ.೧೪ರಂದು ಆಕೆ ಮನೆಯಿಂದ ಶಾಲೆಗೆ ಬರುವಾಗ ದಾರಿ ಮಧ್ಯದಲ್ಲಿ ತಾನು ತಂದಿದ್ದ ನಿಂಬೆ ಹಣ್ಣಿನ ಗಿಡದ ಮುಳ್ಳಿನಿಂದ ತನ್ನ ಎರಡು ಕೈಗಳ ಮೇಲೆ ತಾನಾಗಿಯೇ ಗಾಯ ಮಾಡಿಕೊಂಡಿದ್ದು ನಂತರ ತಾನು ಮಾಡಿದ್ದು ತಪ್ಪು ಎಂದು ಅರಿವಾಗಿ ಹಾಗೇಯೆ ಶಾಲೆಗೆ ಹೋಗಿದ್ದಾಳೆ. ಈ ವಿಷಯವನ್ನು ತನ್ನ ಗೆಳತಿಯೊಂದಿಗೆ ಹೇಳಿಕೊಂಡಿದ್ದು ಆಕೆ ಗಾಯಕ್ಕೆ ಪಟ್ಟಿ ತರಲು ಅಂಗಡಿ ಹೋಗಿದ್ದಾಳೆ. ಆದರೆ ಅಂಗಡಿಯಲ್ಲಿರುವ ವ್ಯಕ್ತಿ ನಿನ್ನೆ ಯಾರೋ ಇಬ್ಬರೂ ಅಪರಿಚಿತರು ರಾತ್ರಿ ವೇಳೆಯಲ್ಲಿ ಕೊಡ್ಲಗದ್ದೆಯ ಕಡೆಗೆ ಹೋಗುವುದನ್ನು ನಾನು ನೋಡಿದ್ದೇನೆ. ಅದರಲ್ಲಿ ಒಬ್ಬನಿಗೆ ಗಡ್ಡ ಇತ್ತು ಇನ್ನೊಬ್ಬ ಸಫೂರವಾಗಿದ್ದ ಅವರೇ ನಿನಗೆ ಚಾಕುವಿನಿಂದ ಈ ಗಾಯ ಮಾಡಿರುತ್ತಾರೆ ಎಂದು ಹೇಳಿದ್ದಾರೆ. ಅದನ್ನೇ ಆ ಬಾಲಕಿ ಪೊಲೀಸರಿಗೆ ಕಥೆ ಹೇಳುವ ರೀತಿಯಲ್ಲಿ ತಿಳಿಸಿದ್ದಾಳೆ. ಇದಕ್ಕೆ ಕೆಲವೊಂದು ರೆಕ್ಕೆಪುಕ್ಕ ಹುಟ್ಟಿಕೊಂಡು ಮುಸ್ಲಿಮರೇ ಶಾಲಾ ಬಾಲಕೀಯನ್ನು ಹತ್ಯೆ ಮಾಡಲು ಮುಂದಾಗಿದ್ದರು ಎನ್ನವು ವದಂತಿಗಳು ಹಬ್ಬಿಕೊಂಡಿದ್ದು ಸಮಾಜದಲ್ಲಿ ಕ್ಷೋಭೆಯನ್ನು ಹರಡಲು ಕಾರಣವಾಗಿದೆ.
ತಜ್ಞ ವೈದ್ಯರಿಂದ ಪರೀಕ್ಷೆ : ಬಾಲಕೀಯ ಕೈಗಳ ಮೇಲೆ ಆದ ಗಾಯಗಳನ್ನು ಪರೀಕ್ಷಿಸಿರುವ ತಜ್ಞ ವೈದ್ಯರ ತಂಡ ಇದು ಹೆದರಿಕೆಯಿಂದ ಸ್ವಯಂ ಮಾಡಿಕೊಂಡ ಗಾಯಗಳ ಲಕ್ಷಣವನ್ನು ಹೊಂದಿರುತ್ತದೆ ಎಂದು ಸ್ಪಷ್ಟಪಡಿಸಿದ್ದ ಅಲ್ಲದೆ ಆಪ್ತ ಸಮಾಲೋಚನೆಯ ಸಂದರ್ಭದಲ್ಲಿಯೂ ಬಾಲಕಿ ಈ ಬಗ್ಗೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು ಮಾನ್ಯ ನ್ಯಾಯಾಲಯದ ಮುಂದೆಯೂ ಇದೇ ಹೇಳಿಕೆಯನ್ನು ನೀಡಿದ್ದಾಳೆ.
ಶಾಂತಿ ಕದಡುವ ವ್ಯಕ್ತಿಗಳನ್ನು ಬಂಧಿಸಲು ತಂಡ ರಚನೆ; ಒಂದು ಸುಳ್ಳು ಘಟನೆಯನ್ನು ಬಳಸಿಕೊಂಡು ಸಮಾಜದಲ್ಲಿ ಅಶಾಂತಿಗೆ ಕಾರಣರಾದ ಕೋಮುಗಲಭೆಗಳನ್ನು ಸೃಷ್ಟಿಸುತ್ತಿರುವ ವ್ಯಕ್ತಿಗಳನ್ನು ಬಂಧಿಸಲು ಪೊಲೀಸರು ಜಾಲ ಬೀಸಿದ್ದು ಇದಕ್ಕಾಗಿ ವಿವಿಧ ತಂಡಗಳನ್ನು ರಚಿಸಿದ್ದಾರೆ. ಕೆಲ ಕಿಡಿಗೇಡಿಗಳು ಶಾಂತಿ ಕದಡುವ, ಕೋಮು ಸಾಮರಸ್ಯ ಹಾಳು ಮಡುವ ದುರುದ್ಧೇಶದಿಂದ ಜನರನ್ನು ಭಾವೋದ್ರೇಕಗೊಳಿಸಿ ಗಲಭೆ ಉಂಟಾಗುವಂತೆ ಪ್ರಚೋದನೆ ನೀಡಿದ್ದು, ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹರಡುತ್ತಿದ್ದಾರೆ ಇಂತಹ ವ್ಯಕ್ತಿಗಳ ವಿರುದ್ಧವೂ ಜಿಲ್ಲಾಡಳಿತ ಸೂಕ್ತ ಕಾನೂನು ಕ್ರಮ ಜರಗಿಸಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇಂತಹ ಕಿಡಿಕೇಡಿಗಳ ಕಂಡಬಂದಲ್ಲಿ ಕೂಡಲೇ ಜಿಲ್ಲಾ ಪೊಲೀಸ್ ನಿಯಂತ್ರ ಕೊಠಡಿಯ ವಾಟ್ಸಪ್ ಸಂಖ್ಯೆ 948080805200, ಹೊನ್ನಾವರ ಪೊಲೀಸ್ ಠಾಣೆ 08387-220248, ಹೊನ್ನಾವರ ಸಿಪಿಐ : 9480805233, ಹಾಗೂ ಹೊನ್ನವರ ಪಿ.ಎಸ್.ಐ : 9480805273 ಗೆ ಸಂಪರ್ಕಿ ಮಾಹಿತಿ ನೀಡಬೇಕೆಂದು ಅವರು ಸಾರ್ವಜನಿಕರಲ್ಲಿ ವಿನಂತಿಸಿಕೊಂಡಿದ್ದಾರೆ.