ಹೊನ್ನಾವರ ಬಳಿ ಭೀಕರ ರಸ್ತೆ ಅಪಘಾತ ಐವರ ದುರ್ಮರಣ
ಹೊನ್ನಾವರ: ಟೆಂಪೋ ಹಾಗೂ ಗ್ಯಾಸ್ ಟ್ಯಾಂಕರ್ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಐವರು ಮೃತಪಟ್ಟಿದ್ದು ಹದಿನೈದಕ್ಕೂ ಹೆಚ್ಚು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಶನಿವಾರ ಉತ್ತರನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕರ್ಕಿ ರಾಷ್ಟ್ರೀಯ ಹೆದ್ದಾರಿ (66)ರ ಕರ್ಕಿ ಮಠದ ಬಳಿ ಘಟನೆ ನಡೆದಿದೆ.
ರಸ್ತೆ ಅವಘಡದಲ್ಲಿ ಮೃತಪಟ್ಟವರನ್ನು ಕುಮಟಾ ತಾಲೂಕಿನ ಬಗ್ಗೋಣದ ಕಮಲಾಕರ ಭಂಡಾರಿ(೫೦), ಹೊನ್ನಾವರ ಕರ್ಕಿಯ ಮೋಹನ ಮೇಸ್ತಾ (೫೦), ಕುಮಟಾ ನಾಗೂರಿನ ಸಮಂತ ಮಡಿವಾಳ (೩೪), ಸಿಂಚನಾ ಮಡಿವಾಳ (೬), ಹೊನ್ನಾವರ ನಗರೆಯ ನಾಗರಾಜ ನಾಯ್ಕ (೨೬) ಎಂದು ಗುರುತಿಸಲಾಗಿದೆ.
ಗಾಯಗೊಂಡವರನ್ನು ಹೊನ್ನಾವರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಬಳಿಕ ಮಣಿಪಾಲ ಆಸ್ಪತ್ರೆಗೆ ರವಾನಿಸಲಾಗಿದೆ.
ಕುಮಟಾದಿಂದ ಹೊನ್ನಾವರ ಕಡೆ ತೆರಳುತ್ತಿದ್ದ ಪ್ಯಾಸೆಂಜರ್ ಟೆಂಪೊ ಹಾಗೂ ಹೊನ್ನಾವರದಿಂದ ಕಾರವಾರ ಕಡೆ ಹೋಗುತ್ತಿದ್ದ ಗ್ಯಾಸ್ ಟ್ಯಾಂಕರ್ ನಡುವೆ ಈ ಅಪಘಾತ ಸಂಭವಿಸಿದ್ದು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.