ಗಾಂಧಿಜಿಯವರ 150ನೇ ಜಯಂತಿ ಆಚರಣೆ; ಭಟ್ಕಳ ಅಂಜುಮನ್ ಕಾಲೇಜಿನಲ್ಲಿ ಶ್ರಮದಾನ ಮತ್ತು ರೋಗಿಗಳಿಗೆ ಹಣ್ಣು ವಿತರಣೆ
ಭಟ್ಕಳ: ಗಾಂಧಿಜಯಂತಿ ಪ್ರಯುಕ್ತ ಸ್ಥಳೀಯ ಅಂಜುಮನ್ ಕಲಾ, ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯ ಮತ್ತು ಸ್ನಾತಕೋತ್ತರ ಕೇಂದ್ರದಲ್ಲಿ ಎನ್ಎಸ್ಎಸ್ ಮತ್ತು ಎನ್ಸಿಸಿ ಸಹಯೋಗದಲ್ಲಿ ಶ್ರಮದಾನ ಮತ್ತು ಬಡ ರೋಗಿಗಳಿಗೆ ಹಣ್ಣು ವಿತರಿಸುವ ಕಾರ್ಯಕ್ರಮ ನಡೆಯಿತು. ಬೆಳಿಗ್ಗೆ 8.30ಕ್ಕೆ ಕಾಲೇಜಿನ ಪ್ರಾಶುಂಪಾಲರಾದ ಪ್ರೊ. ಮುಸ್ತಾಕ್ ಕೆ. ಶೇಖ್ ಶ್ರಮದಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಎನ್ಎಸ್ಎಸ್ ಅಧಿಕಾರಿ ಪ್ರೊ. ಆರ್. ಎಸ್. ನಾಯಕ ಮತ್ತು ಎನ್ಸಿಸಿ ಸಂಯೋಜಕರಾದ ಪ್ರೊ. ಜುಲ್ಫಿಕರ್ ಅಹ್ಮದ್ ಅವರ ನೇತೃತ್ವದಲ್ಲಿ ಕಾಲೇಜಿನ ಆವರಣವನ್ನು ಸ್ವಚ್ಛಗೊಳಿಸಲಾಯಿತು.
ಎನ್ಸಿಸಿ ಮತ್ತು ಎನ್ಎಸ್ಎಸ್ ಸ್ವಯಂಸೇವಕರು ಎಲ್ಲ ಅಧ್ಯಾಪಕರ ಮತ್ತು ಸಿಬ್ಬಂಧಿಗಳ ಜೊತೆ ಸೇರಿ ಆವರಣದಲ್ಲಿರುವ ಕಸಕಡ್ಡಿಗಳನ್ನು, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಆಯ್ದು, ಪಾರ್ತೇನಿಯಂ ಕಳೆಯನ್ನು ಕಿತ್ತು ಕಾಲೇಜಿನ ಆವರಣವನ್ನು ಸ್ವಚ್ಛ ಮತ್ತು ಸುಂದರಗೊಳಿಸಿದರು.
ಮಧ್ಯಾಹ್ನದವರೆಗೂ ಆವರಣದಲ್ಲಿ ಶ್ರಮದಾನ ಮಾಡಿ ನಂತರ ಭಟ್ಕಳದ ಸರ್ಕಾರಿ ಆಸ್ಪತ್ರೆಗೆ ತೆರಳಿ ಅಲ್ಲಿರುವ ಒಳರೋಗಿಗಳಿಗೆ ಹಣ್ಣು, ತಿನಿಸು ಮತ್ತು ತಂಪು ಪಾನೀಯವನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಆಸ್ಪತ್ರೆಯ ಮುಖ್ಯ ಆರೋಗ್ಯಾಧಿಕಾರಿಯಾದ ಡಾ. ಸವಿತಾ ಭಟ್ಟ ಮತ್ತು ಸಿಬ್ಬಂಧಿಗಳು ತುಂಬುಹೃದಯದ ಸಹಕಾರ ನೀಡಿದರು.
ಅಂಜುಮನ್ ಕಾಲೇಜು ಗಾಂಧೀಜಯಂತಿಯನ್ನು ಈ ರೀತಿ ಅರ್ಥಪೂರ್ಣವಾಗಿ ಆಚರಿಸಿದ್ದು ಬಡ ರೋಗಿಗಳ ಮತ್ತು ಸಾರ್ವಜನಿಕರ ಶ್ಲಾಘನೆಗೆ ಕಾರಣವಾಯಿತು. ಬಿರುಬಿಸಿಲಿನಲ್ಲಿ ಶ್ರಮದಾನಗೈದ ವಿದ್ಯಾರ್ಥಿಗಳಿಗೂ ಕಾಲೇಜಿನ ವತಿಯಿಂದ ಲಘು ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.