ಹೊಸದಿಲ್ಲಿ: ಸಂಸತ್ ಅಧಿವೇಶನಕ್ಕೆ ರೈತ ಪ್ರತಿಭಟನೆಯ ಬಿಸಿ ಜು.22ರಿಂದ 200 ರೈತರಿಂದ ಸಂಸತ್ ಸಮೀಪ ಧರಣಿ
ಹೊಸದಿಲ್ಲಿ: ಕೇಂದ್ರ ಸರಕಾರದ ಕೃಷಿ ಕಾಯ್ದೆಗಳ ವಿರುದ್ಧ ಜುಲೈ 22ರಿಂದ 200 ರೈತರು ಸಂಸತ್ತಿನ ಸಮೀಪ ಪ್ರತಿಭಟನೆ ನಡೆಸಲಿದ್ದಾರೆ. ಎಂದು ಭಾರತೀಯ ಕಿಸಾನ್ ಒಕ್ಕೂಟದ ನಾಯಕ ರಾಕೇಶ್ ಟಿಕಾಯತ್ ಅವರು ಶನಿವಾರ ಮಾಹಿತಿ ನೀಡಿದ್ದಾರೆ.
ಒಂದು ವೇಳೆ ಕೇಂದ್ರ ಸರಕಾರ ಕೃಷಿ ಕಾಯ್ದೆಗಳ ಬಗ್ಗೆ ಚರ್ಚಿಸಲು ಬಯಸುವುದಾದರೆ, ನಾವು ಸಿದ್ಧ.ಆದರೆ, ಮಾತುಕತೆ ನಡೆಯದೇ ಇದ್ದರೆ ಅಥವಾ ಫಲಿತಾಂಶ ಫಲಪ್ರದವಾಗದೇ ಇದ್ದರೆ, ನಾವು ಜುಲೈ 22ರಿಂದ ನಮ್ಮ 200 ರೈತರೊಂದಿಗೆ ಸಂಸತ್ತಿನ ಸಮೀಪ ಪ್ರತಿಭಟನೆ ನಡೆಸಲಿದ್ದೇವೆ' ಎಂದು ಅವರು ಹೇಳಿದ್ದಾರೆ.
ಕೃಷಿ ಕಾಯ್ದೆಗಳ ಕುರಿತು ಸರಕಾರದೊಂದಿಗೆ ಮಾತುಕತೆ ನಡೆಸಲು ರೈತರು ಸಿದ್ಧ ಎಂದು ಟಿಕಾಯತ್ ಗುರುವಾರ ತಿಳಿಸಿದ್ದರು. ಆದರೆ, ನಿಶ್ಶರ್ತವಾಗಿ ಮಾತುಕತೆ ನಡೆಸಬೇಕು ಎಂದು ಅವರು ಸ್ಪಷ್ಟವಾಗಿ ಹೇಳಿದ್ದರು.
ಇತರ ಆಯ್ಕೆಗಳನ್ನು ಚರ್ಚಿಸಲು ಪ್ರತಿಭಟನೆ ನಡೆಸುತ್ತಿರುವ ರೈತರೊಂದಿಗೆ ಮಾತುಕತೆ ನಡೆಸಲು ಕೇಂದ್ರ ಸರಕಾರ ಸಿದ್ದ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ನೀಡಿದ್ದ ಹೇಳಿಕೆಗೆ ರಾಕೇಶ್ ಟಿಕಾಯತ್ ಈ ಪ್ರತಿಕ್ರಿಯೆ ನೀಡಿದರು.
ಸಂಸತ್ ಮುಂಗಾರು ಅಧಿವೇಶನ ಜುಲೈ 19ರಂದು ಆರಂಭಗೊಳ್ಳಲಿದೆ.
ಈ ವರ್ಷದ ಗಣರಾಜ್ಯೋತ್ಸವದ ಘಟನೆಯ ಕುರಿತು ಮಾತನಾಡಿದ ಟಿಕಾಯತ್, “ನೂತನ ಕೃಷಿ ಕಾಯ್ದೆಗಳ ಕುರಿತ ವಿವಾದವನ್ನು ವಿಶ್ವಸಂಸ್ಥೆಯ ಗಮನಕ್ಕೆ ತರುತ್ತೇವೆ ಎಂದು ನಾವು ಹೇಳಿಲ್ಲ. ಜನವರಿ 26ರಂದು ನಡೆದ ಘಟನೆ ಕುರಿತ ಪ್ರಶ್ನೆಗಳಿಗೆ ನಾವು ಪ್ರತಿಕ್ರಿಯಿಸಬೇಕು. ನಿಷ್ಪಕ್ಷ ತನಿಖೆ ನಡೆಸಲು ಯಾವುದಾದರೂ ತನಿಖಾ ಸಂಸ್ಥೆಗಳು ಇಲ್ಲಿ ಇವೆಯೇ? ಇಲ್ಲದೆ ಇದ್ದರೆ, ನಾವು ಈ ವಿಷಯವನ್ನು ವಿಶ್ವಸಂಸ್ಥೆಗೆ ತೆಗೆದುಕೊಂಡು ಹೋಗಬೇಕೇ'' ಎಂದು ಅವರು ಪ್ರಶ್ನಿಸಿದರು.