ಮುಂಡಗೋಡ : ಮಹಾರಾಷ್ಟ್ರ ಮೂಲದ ಸಂದೇಶ ಮಹೇಶರಾಮ ಟಿಬೆಟ್ಗೆ ಸ್ವಾತಂತ್ರ್ಯ ನೀಡಿ ಭಾರತ ಉಳಿಸಿ ಎನ್ನುವ ಘೋಷಣೆಯೊಂದಿಗೆ ಪ್ರಾರಂಭಿಸಿದ್ದ ಸೈಕಲ್ ಯಾತ್ರೆ ಮುಂಡಗೋಡ ಟಿಬೆಟಿಕಾಲೋನಿಯಲ್ಲಿ ಸಮಾಪ್ತಿಗೊಂಡಿತು.
ಸಂದೇಶ ಮಹೇಶರಾಮ ಅವರು ಹಿಮಾಚಲ ಪ್ರದೇಶದ ಧರ್ಮಶಾಲಾದಿಂದ ಸೈಕಲ್ ಅಭಿಯಾನ ಆರಂಭಿಸಿದ್ದರು. ಕಳೆದ 84 ದಿನದಲ್ಲಿ ಪಂಜಾಬ್, ಹರಿಯಾಣ, ದೆಹಲಿ, ಉತ್ತರಪ್ರದೇಶ, ರಾಜಸ್ತಾನ, ಮಹಾರಾಷ್ಟ್ರ, ಗುಜರಾತ, ಗೋವಾ ಸೇರಿದಂತೆ 10 ರಾಜ್ಯದಲ್ಲಿ ಪ್ರಯಾಣ ಮಾಡಿ ಟಿಬೆಟಿಯನ್ನರು ಸ್ವಾತಂತ್ರ್ಯಕ್ಕಾಗಿ ಪಡುತ್ತಿರುವ ಸಂಕಷ್ಟವನ್ನು ವಿವರಿಸಿದ್ದಾರೆ. ಟಿಬೆಟಿಯನ್ನರ ನೆರವಿಗೆ ನಿಲ್ಲುವಂತೆ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕ-ಕೇರಳ ಇಂಡೋ-ಟಿಬೆಟನ್ ಸಮನ್ವಯಾಧಿಕಾರಿ ಜಯಪ್ರಕಾಶ ಅರಸ ಮಾತನಾಡಿ, ಸಂದೇಶ ಮಹೇಶರಾಮ ಅವರು ಭಾರತೀಯನಾಗಿ ಟಿಬೆಟಿಯನ್ನರ ಪರವಾಗಿ ಅಭಿಯಾನದ ಮೂಲಕ ಜಾಗೃತಿ ಮೂಡಿಸಿರುವುದು ಟಿಬೆಟಿಯನ್ನರಲ್ಲಿ ಭಾರತದ ಬಗ್ಗೆ ಹೆಮ್ಮೆ ಹಾಗೂ ಅಭಿಯಾನ ಹೆಚ್ಚಾಗಿದೆ ಎಂದರು.
ಸೈಕಲ್ ಅಭಿಯಾನ ನಡೆಸಿದ ಸಂದೇಶ ಮಹೇಶರಾಮ ಮಾತನಾಡಿ, ಅಭಿಯಾನದಲ್ಲಿ ಅಭೂತಪೂರ್ವ ಜನ ಬೆಂಬಲ ದೊರೆತಿದೆ. ಟಿಬೆಟಿಯನ್ನರ ಪರಿಸ್ಥಿತಿಯನ್ನು ಜನರಿಗೆ ತಿಳಿಸಿದ್ದೇನೆ ಎಂದರು.
ಈ ವೇಳೆ ಇಂಡೋ-ಟಿಬೆಟನ್ ಫ್ರೆಂಡ್ಶಿಪ್ ಅಸೋಸಿಯೇಶನ್ ಕಾರ್ಯದರ್ಶಿ ಕೆ.ಸಿ.ಥಾಮಸ್, ಜಂಟಿ ಕಾರ್ಯದರ್ಶಿ ರಾಜಶೇಖರ ನಾಯ್ಕ, ಸದಸ್ಯರಾದ ಎನ್.ಡಿ,ಕಿತ್ತೂರ, ತಹಶೀಲದಾರ ಕಚೇರಿಯ ಸಿಬ್ಬಂದಿಗಳು, ದಲೈಲಾಮಾ ಕಚೇರಿಯ ಜಿಗ್ಮೆ, ಮುಂಡಗೋಡ ಟಿಬೆಟಿಕಾಲೋನಿಯ ದಲೈಲಾಮಾ ಪ್ರತಿನಿಧಿ ಕಚೇರಿಯ ಅಧಿಕಾರಿಗಳು, ಸಿಬ್ಬಂದಿಗಳಿದ್ದರು.