ಹೊಸದಿಲ್ಲಿ: ಇತ್ತಿಚಿನ ದಿನಗಳಲ್ಲಿ ಅತ್ಯಂತ ಹೆಚ್ಚು ದುರುಪಯೋಗಪಡಿಸಿಕೊಂಡ ಸ್ವಾತಂತ್ರಗಳ ಪೈಕಿ ವಾಕ್ ಸ್ವಾತಂತ್ರ ಕೂಡಾ ಒಂದಾಗಿದೆ ಎಂದು ತಬ್ಲೀಗಿ ಜಮಾಅತ್ ಬಗ್ಗೆ ನಕಲಿ ಸುದ್ದಿಗಳನ್ನು ಪ್ರಸಾರ ಮಾಡಿದ್ದಕ್ಕಾಗಿ ಮತ್ತು ನಿಝಾಮುದ್ದೀನ್ ಮರ್ಕಝ್ ಘಟನೆಯನ್ನು ಕೋಮುವಾದೀಕರಿಸಿದ ಆರೋಪದ ಮೇಲೆ ಟಿವಿ ಚಾನೆಲ್ಗಳ ವಿರುದ್ಧ ಕ್ರಮ ಕೈಗೊಳ್ಳಲು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ವೇಳೆ ಗುರುವಾರ ಸುಪ್ರೀಂಕೋರ್ಟ್ ಹೇಳಿದೆ.
"ನೀವು ಈ ನ್ಯಾಯಾಲಯವನ್ನು ಈ ರೀತಿ ಪರಿಗಣಿಸಲು ಸಾಧ್ಯವಿಲ್ಲ. ಕಿರಿಯ ಅಧಿಕಾರಿಯೊಬ್ಬರು ಅಫಿಡವಿಟ್ ಸಲ್ಲಿಸುತ್ತಾರೆ. ಅರ್ಜಿದಾರರು ಪ್ರಸ್ತಾವಿಸಿರುವ ಕೆಟ್ಟ ವರದಿಯ ಬಗ್ಗೆ ಸ್ಪಂದಿಸಿಲ್ಲ. ಘಟನೆ ನಡೆದಿಲ್ಲ ಎಂದು ನೀವು ಹೇಗೆ ಹೇಳುತ್ತೀರಿ'' ಎಂದು ಭಾರತದ ಮುಖ್ಯನ್ಯಾಯಾಧೀಶ ಎಸ್.ಎ.ಬೋಬ್ಡೆ ಅವರು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ತಿಳಿಸಿದರು.
ಮುಖ್ಯ ನ್ಯಾಯಾಧೀಶರ ಮಾತಿಗೆ ವಿಚಲಿತರಾದಂತೆ ಕಂಡುಬಂದ ಮೆಹ್ತಾ ಹೊಸ ಅಫಿಡವಿಟ್ ಸಲ್ಲಿಸುವ ಕುರಿತು ಗಮನ ಹರಿಸುವುದಾಗಿ ಹೇಳಿದರು. ಸಂಬಂಧಪಟ್ಟ ಇಲಾಖೆಯ ಕಾರ್ಯದರ್ಶಿ ಹೊಸ ಅಫಿಡವಿಟ್ ಸಲ್ಲಿಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಲು ನ್ಯಾಯಾಲಯವು ಮೆಹ್ತಾ ಅವರಿಗೆ ಕೇಳಿದೆ.
"ನಿರ್ದಿಷ್ಟ ಘಟನೆಗಳ ಬಗ್ಗೆ ( ಅರ್ಜಿದಾರರಿಂದ ಉಲ್ಲೇಖಿಸಲ್ಪಟ್ಟ) ಅವರು ಏನು ಯೋಚಿಸುತ್ತಾರೆ ಎಂಬುದನ್ನು ಕಾರ್ಯದರ್ಶಿ ನಮಗೆ ತಿಳಿಸಬೇಕು ಹಾಗೂ ಈಗ ಏನು ಮಾಡಲಾಗಿದೆ ಎಂಬುದರ ಬಗ್ಗೆ ಅಸಂಬದ್ಧವಾದ ವರ್ತನೆಗಳನ್ನು ತೋರಬಾರದು. ಇಲಾಖೆಯ ಕಾರ್ಯದರ್ಶಿ ದಾಖಲೆಯಲ್ಲಿ ಅಫಿಡವಿಟ್ ಸಲ್ಲಿಸಬೇಕು. ಇಂತಹ ಘಟನೆಗಳ ಬಗ್ಗೆ ಅವರು ಏನು ಹೇಳುತ್ತಾರೆ ಎನ್ನುವುದನ್ನು ಗಮನಹರಿಸಬೇಕು ಎಂದು ಬೋಬ್ಡೆ ಹೇಳಿದ್ದಾರೆ.
ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ದುಶ್ಯಂತ್ ದವೆ ಈ ವಿಚಾರವು ವಾಕ್ಚಾತುರ್ಯವನ್ನು ಗೊಂದಲಗೊಳಿಸುತ್ತದೆ ಎಂದು ಸರಕಾರ ಹೇಳಿಕೊಂಡಿದ್ದಾಗಿ ತಿಳಿಸಿದರು.
ವಾಕ್ ಸ್ವಾತಂತ್ರವು ಇತ್ತೀಚಿನ ದಿನಗಳಲ್ಲಿ ಹೆಚ್ಚು ದುರುಪಯೋಗವಾಗುತ್ತಿರುವ ಸ್ವಾತಂತ್ರಗಳ ಪೈಕಿ ಒಂದಾಗಿದೆ ಎಂದು ಸಿಜೆಐ ಬೋಬ್ಡೆ ಟೀಕಿಸಿದರು.
ತಬ್ಲೀಗಿ ಜಮಾಅತ್ ದಿಲ್ಲಿಯ ನಿಝಾಮುದ್ದೀನ್ ಪ್ರದೇಶದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರಿಗೆ ಕೊರೋನ ವೈರಸ್ ಸೋಂಕು ತಗುಲಿದ ಬಳಿಕ ಮಾರ್ಚ್ 30ರಂದು ನಿಝಾಮುದ್ದೀನ್ ಪ್ರದೇಶವನ್ನು ಸೀಲ್ಡೌನ್ ಮಾಡಲಾಗಿತ್ತು.
ಕೆಲವು ಮಾಧ್ಯಮಗಳು ಘಟನೆಯ ವರದಿಗಾರಿಕೆಯ ವೇಳೆ ಪತ್ರಿಕೋದ್ಯಮದ ಮಾನದಂಡಗಳನ್ನು ಹಾಗೂ ಕೇಬಲ್ ಟಿವಿ ನೆಟ್ವರ್ಕ್ಗಳ ನಿಯಂತ್ರಣ ಕಾಯ್ದೆಯ ನಿಬಂಧನೆಗಳನ್ನು ಹಾಗೂ ಆ ಕಾಯ್ದೆಯಡಿ ಕಾರ್ಯಕ್ರಮ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಅರ್ಜಿದಾರರು ತಿಳಿಸಿದ್ದಾರೆ.