ಭಟ್ಕಳ: ಕುಂದಾಪುರ ಕೋಟೇಶ್ವರ ಅಮೃತೇಶ್ವರಿ ಆಯುರ್ವೇದ ಆಸ್ಪತ್ರೆ, ಭಟ್ಕಳದ ಹಿರಿಯ ಧುರೀಣ ಇನಾಯಿತುಲ್ಲಾ ಶಾಬಂದ್ರಿ ಅಭಿಮಾನಿ ಬಳಗ ಇವರ ಆಶ್ರಯದಲ್ಲಿ ಸರಕಾರಿ ಆಯುರ್ವೇದ ಮೆಡಿಕಲ್ ಕಾಲೇಜು ಬೆಂಗಳೂರು ಇವರ ಸಹಯೋಗದೊಂದಿಗೆ ಏ.10ರಂದು ಭಟ್ಕಳ ಶ್ರೀನಿವಾಸ ಡೀಲಕ್ಸ್ ಹಿಂಬದಿಯ ಅಕೀಬ್ ವಿಲ್ಲಾ ಸಮುದಾಯ ಭವನದಲ್ಲಿ ಉಚಿತ ಆಯುರ್ವೇದ ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿದೆ.
ಈ ಕುರಿತು ಸೋಮವಾರ ಕೋಟೇಶ್ವರ ಅಮೃತೇಶ್ವರಿ ಆಯುರ್ವೇದ ಆಸ್ಪತ್ರೆಯ ವೈದ್ಯ ಡಾ.ಪ್ರಸನ್ನ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಸಂಧಿವಾತದಂತಹ ನರ ಸಂಬಂಧಿ ಕಾಯಿಲೆಗಳು, ಕಣ್ಣು, ಕಿವಿ, ಮೂಗು, ನಾಲಿಗೆಯ ಸಮಸ್ಯೆಗಳು, ಮೂಲವ್ಯಾಧಿ, ಸ್ತ್ರೀರೋಗ ಕಾಯಿಲೆಗಳಿಗೆ ತಪಾಸಣೆ ಮತ್ತು ಚಿಕಿತ್ಸೆ ನೀಡಲಾಗುತ್ತದೆ. ಭಟ್ಕಳದ ಜನರು ಈ ಶಿಬಿರದ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು. ಬೆಂಗಳೂರು ಸರಕಾರಿ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯ ಡಾ.ಶ್ರೀಧರ ಮಾತನಾಡಿ, ಜಗತ್ತಿನಲ್ಲಿ ಆಯುರ್ವೇದಕ್ಕೆ ಹೆಚ್ಚಿನ ಮಹತ್ವ ಇದೆ. ಇತ್ತೀಚಿನ ದಿನಗಳಲ್ಲಿ ಕೊರೊನಾದಂತಹ ವೈರಾಣು ಸಂಬಂಧಿ ಕಾಯಿಲೆಗಳಿಗೆ ಜನರು ಭಯ ಪಡುವಂತಾಗಿದೆ. ಸರಿಯಾದ ಊಟ, ಮಲ, ಮೂತ್ರ ವಿಸರ್ಜನೆಗಳು ಮನುಷ್ಯನನ್ನು ಆರೋಗ್ಯವಾಗಿಡುತ್ತವೆ. ರೋಗ ಬಂದ ನಂತರ ಚಿಕಿತ್ಸೆ ನೀಡುವುದಕ್ಕಿಂತ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಿಕೊಳ್ಳುವುದು ಅತಿ ಮುಖ್ಯವಾಗಿದೆ. ಈ ದಿಶೆಯಲ್ಲಿ ಭಟ್ಕಳದಲ್ಲಿ ಆಯುರ್ವೇದ ಆರೋಗ್ಯ ಶಿಬಿರವನ್ನು ಆಯೋಜಿಸಲಾಗುತ್ತಿದ್ದು, ಇಂತಹ ಶಿಬಿರಗಳು ಹೆಚ್ಚು ನಡೆಯಬೇಕಾಗಿದೆ, ರೋಗನಿರೋಧಕ ಶಕ್ತಿ ವೃದ್ಧಿಗಾಗಿ ಶಿಬಿರಾರ್ಥಿಗಳಿಗೆ ಉಚಿತವಾಗಿ ಔಷಧಿಯನ್ನು ವಿತರಿಸಲಾಗುವುದು ಎಂದು ವಿವರಿಸಿದರು.
ಇನಾಯಿತುಲ್ಲಾ ಶಾಬಂದ್ರಿ, ಪುರಸಭಾ ಮಾಜಿ ಅಧ್ಯಕ್ಷ ಸಾದೀಕ್ ಮಟ್ಟಾ ಮೊದಲಾದವರು ಉಪಸ್ಥಿತರಿದ್ದರು.