ಬೆಂಗಳೂರು:ಬಹುಕೋಟಿ ವಂಚನೆ ಪ್ರಕಣದಲ್ಲಿ ತಲೆಮರೆಸಿಕೊಂಡು ವಿದೇಶದಲ್ಲಿದ್ದ ಮನ್ಸೂರ್ ನನ್ನು ಹೊಸದಿಲ್ಲಿಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಹಲಾಲ್ ಹೂಡಿಕೆ ಹೆಸರಿನಲ್ಲಿ ಸಾವಿರಾರು ಕೋಟಿ ರೂ. ವಂಚಿಸಿ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಐಎಂಎ ಮುಖ್ಯಸ್ಥ ಮನ್ಸೂರ್ ಖಾನ್.
ವಂಚನೆ ಪ್ರಕರಣದ ಬಳಿಕ ದುಬೈ ನಲ್ಲಿ ತಲೆಮರೆಸಿಕೊಂಡಿದ್ದ ಮನ್ಸೂರ್ ಖಾನ್ ರಾತ್ರಿ 1:50 ಕ್ಕೆ ಹೊಸದಿಲ್ಲಿಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದು, ಈ ವೇಳೆ ಎಸ್ಐಟಿ ಅಧಿಕಾರಿಗಳು ಆತನನ್ನು ಬಂಧಿಸಿದ್ದಾರೆ.
ಐಎಂಎ ಸಮೂಹ ಕಂಪನಿ ವಿರುದ್ಧ ಕಮರ್ಷಿಯಲ್ ಸ್ಟೀಟ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ಮೊದಲ ಆರೋಪಿ ಮನ್ಸೂರ್ ಖಾನ್ ಆಗಿದ್ದು, ಈತನನ್ನು ಇ.ಡಿ ಅಧಿಕಾರಿಗಳು ಮೊದಲು ವಿಚಾರಣೆ ನಡೆಸಲಿದ್ದಾರೆ. ನಂತರ, ನಾವು ಆದಷ್ಟು ಬೇಗ ಬೆಂಗಳೂರು ಕರೆತಂದು ನ್ಯಾಯಾಲಯದ ಎದುರು ಹಾಜರುಪಡಿಸುತ್ತೇವೆ ಎಂದು ಸಿಟ್ ಮೂಲಗಳು ತಿಳಿಸಿವೆ.
ದುಬೈನಲ್ಲಿ ಅಡಗಿಕೊಂಡು ಅಲ್ಲಿಂದಲೇ ವೀಡಿಯೊ ಸಂದೇಶಗಳನ್ನು ಬಿಡುಗಡೆ ಮಾಡುತ್ತಿದ್ದ ಮನ್ಸೂರ್, ತನಗೆ ರಕ್ಷಣೆ ನೀಡುವುದಾದಲ್ಲಿ 24 ಗಂಟೆಯೊಳಗೆ ಭಾರತಕ್ಕೆ ವಾಪಸ್ ಬರುವುದಾಗಿ ಮೊನ್ನೆಯಷ್ಟೇ ವೀಡಿಯೊ ಸಂದೇಶದಲ್ಲಿ ತಿಳಿಸಿದ್ದ. ಅದರಂತೆ, ರಕ್ಷಣೆ ಕೊಡುತ್ತೇವೆ ಎಂದು ಆತನಿಗೆ ಭರವಸೆ ನೀಡಿ ಭಾರತಕ್ಕೆ ಬರಲು ಸಿಟ್ ಸೂಚಿಸಿತ್ತು.