ಭಟ್ಕಳ: ಮಳೆಗಾಳಿಗೆ ಸಿಲುಕಿ ಅಪಾಯದಲ್ಲಿರುವ ಮೀನುಗಾರರು ರಕ್ಷಣೆಗಾಗಿ ತಮ್ಮ ಸಂಬಂಧಿಕರಿಗೆ ಮೊರೆ ಹೋಗಿದ್ದು ಅಪಾಯದಲ್ಲಿದ್ದ ನಾಲ್ಕು ಮಂದಿ ಮೀನುಗಾರರನ್ನು ಅಬುಬಕರ್ ಎನ್ನುವವರ ದೋಣಿಯ ಮೂಲಕ ದಡಕ್ಕೆ ಸೇರಿಸಿದ ಘಟನೆ ಭಾನುವಾರ ಬೆಳಗಿನ ಜಾವ ಇಲ್ಲಿಗೆ ಸಮೀಪ ಕಾಗೆ ಗುಡ್ಡ ಸಮೀಪ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಅಪಾಯದಿಂದ ಪಾರಾಗಿರುವ ಮೀನುಗಾರರನ್ನು ಮಹಾರಾಷ್ಟ್ರ ಮೂಲದ ಸಚಿನ್ ಬೀರಪ್ಪ, ಹರೇಶ ತಾಂಡೇಲ್, ಜ್ಞಾನೇಶ ಕರಡಿಕರ್, ನಾರಾಯಣ ಬಾಹೇಬ ಎಂದು ಗುರುತಿಸಲಾಗಿದೆ. ಇವರು ರವಿವಾರ ಬೆಳಿಗ್ಗೆ ಮಾದೇವ ತಿಮ್ಮಪ್ಪ ಮೊಗೇರ ಮಾಲಕತ್ವದ `ದೇವಾನುಗ್ರಹ' ಹೆಸರಿನ ಯಾಂತ್ರೀಕೃತ ದೋಣಿಯಲ್ಲಿ ಶಿರಾಲಿ ಅಳ್ವೇಕೋಡಿಯಿಂದ ಮೀನುಗಾರಿಕೆಗೆ ತೆರಳಿದ್ದರು. ಕಡಲ ಅಲೆಗಳ ಹೊಡೆತಕ್ಕೆ ದೋಣಿಯ ಯಂತ್ರ ಕೆಟ್ಟು ಹೋಗಿದ್ದು, ಮೀನುಗಾರರು ದಡದತ್ತ ವಾಪಸ್ಸು ಬರಲಾಗದೇ ಕಂಗೆಟ್ಟಿದ್ದರು.
ಅಬೂಬಕರ್ ಎನ್ನುವವರ ದೋಣಿಯ ಮೂಲಕ ವಿನೋದ ಮೊಗೇರ ಮುಂಡಳ್ಳಿ, ರೋಹಿದಾಸ ಮೊಗೇರ ಮುರುಡೇಶ್ವರ, ಕೃಷ್ಣ ಮೊಗೇರ ಬೆಳ್ನಿ ಹಾಗೂ ಮಂಜುನಾಥ ಮೊಗೇರ ಎನ್ನುವವರು ಅಪಾಯದಲ್ಲಿದ್ದ ಮೀನುಗಾರರನ್ನು ರಕ್ಷಣೆ ಮಾಡಿದ್ದಾರೆ.
ರವಿವಾರ ಸಂಜೆ 6.30 ಸುಮಾರಿಗೆ ಮೀನುಗಾರರನ್ನು ರಕ್ಷಿಸಿ ದಡಕ್ಕೆ ಕರೆ ತರಲಾಯಿತು. ದೋಣಿಯನ್ನು ಎಳೆದು ತರಲು ಸಾಧ್ಯವಾಗದ ಕಾರಣ, ಕರಿಕುಂದದ ಸಮೀಪವೇ ಹಗ್ಗ ಕಟ್ಟಿ ತೇಲಿ ಬಿಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.