ಹೊಸದಿಲ್ಲಿ: ಇಲ್ಲಿನ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಗುರುವಾರ ನಿಧನರಾಗಿದ್ದಾರೆ. ಮೂತ್ರಪಿಂಡದ ಸಮಸ್ಯೆಗೆ ಚಿಕಿತ್ಸೆಗಾಗಿ ವಾಜಪೇಯಿಯವರನ್ನು ಜೂನ್ 11ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆನಂತರ ಅವರ ಆರೋಗ್ಯ ಮತ್ತಷ್ಟು ಹದಗೆಟ್ಟಿತ್ತು.
1924ರ ಡಿಸೆಂಬರ್ 25ರಂದು ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ಜನಿಸಿದ ವಾಜಪೇಯಿ 1957ರಲ್ಲಿ ಭಾರತೀಯ ಜನಸಂಘದಿಂದ ಸಂಸತ್ ಗೆ ಆಯ್ಕೆಯಾಗಿದ್ದರು.
ಅಟಲ್ ರವರು 1924 ರಲ್ಲಿ ಕೃಷ್ಣದೇವಿ ಹಾಗೂ ಕೃಷ್ಣ ಬಿಹಾರಿ ವಾಜಪೇಯಿ ದಂಪತಿಗೆ ಮಗನಾಗಿ ಮಧ್ಯ ಪ್ರದೇಶದ ಗ್ವಾಲಿಯರ್ ಹತ್ತಿರದ ಶಿಂದೆ ಕಿ ಚವ್ವಾಣಿ ಎನ್ನುವ ಗ್ರಾಮದಲ್ಲಿ ಜನಿಸಿದರು. ತಂದೆ ಒಬ್ಬ ಕವಿ, ಮತ್ತು ಶಿಕ್ಷಕರಾಗಿದ್ದರು. ಅಟಲ್ ಪದವಿಯನ್ನು ವಿಕ್ಟೋರಿಯಾ ಕಾಲೇಜಿನಿಂದ (ಈಗ ಲಕ್ಷ್ಮಿ ಬಾಯಿ ಕಾಲೇಜು) ಪಡೆದರು. ಹಿಂದಿ, ಇಂಗ್ಲೀಷ್ ಹಾಗೂ ಸಂಸ್ಕೃತ ಭಾಷೆಯಲ್ಲಿ ಪಾಂಡಿತ್ಯ ಗಳಿಸಿದ ಅಟಲ್ ರಾಜಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನ ಕಾನ್ಪುರದ ಡಿ.ಎ.ವಿ ಕಾಲೇಜಿನಿಂದ ಪಡೆದರು. ಕಾನ್ಪುರದ ಲಕ್ಷ್ಮೀಬಾಯಿ ಕಾಲೇಜಿನಲ್ಲಿ ರಾಜಕೀಯ ಶಾಸ್ತ್ರದಲ್ಲಿ ಮಾಸ್ಟರ್ ಡಿಗ್ರಿ ಪಡೆದ ಅಟಲ್ 1942ರಲ್ಲಿ ಕ್ವಿಟ್ ಇಂಡಿಯ ಚಳವಳಿಯಲ್ಲಿ ಧುಮುಕಿದ್ದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್.ಎಸ್.ಎಸ್)ವನ್ನು ಸೇರಿ 'ವೀರ ಅರ್ಜುನ' ಹಾಗೂ 'ಪಾಂಚಜನ್ಯ' ಎನ್ನುವ ಎರಡು ಪತ್ರಿಕೆಗಳಿಗೆ ಪತ್ರಕರ್ತರಾಗಿ ಸೇವೆ ಸಲ್ಲಿಸಿದರು.
ವಾಜಪೇಯಿ ಭಾರತೀಯ ಜನ ಸಂಘದ ಸ್ಥಾಪಕ ಶ್ಯಾಮ ಪ್ರಸಾದ್ ಮುಖರ್ಜಿ ಅವರ ಆಪ್ತ ಅನುಯಾಯಿಯಾಗಿದ್ದರು. ವಾಜಪೇಯಿ 1957ರಲ್ಲಿ ಮೊದಲ ಚುನಾವಣೆಯಲ್ಲಿ ಸ್ಪರ್ಧಿಸಿ ಲೋಕಸಭೆ ಪ್ರವೇಶಿಸಿದ್ದರು. 1957 ರಿಂದ 2009ರ ವರೆಗೆ ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರಾಗಿ ವಾಜಪೇಯಿ ಅವರು ಸೇವೆ ಸಲ್ಲಿಸಿದರು. 10 ಬಾರಿ ಲೋಕಸಭೆ ಮತ್ತು 2 ಬಾರಿ ರಾಜ್ಯಸಭೆಗೆ ಆಯ್ಕೆಯಾಗಿದ್ದರು.
4 ದಶಕಗಳ ಕಾಲ ವಿಪಕ್ಷದಲ್ಲಿದ್ದ ಬಿಜೆಪಿ 1996ರಲ್ಲಿ ವಾಜಪೇಯಿ ನೇತೃತ್ವದಲ್ಲಿ ಅಧಿಕಾರಕ್ಕೇರಿತು. ಆದರೆ ಸರಕಾರ 13 ದಿನಗಳ ಕಾಲವಷ್ಟೇ ಅಧಿಕಾರ ನಡೆಸಿತು.1998ರಲ್ಲಿ 13 ತಿಂಗಳುಗಳ ಕಾಲ ಅಧಿಕಾರ ನಡೆಸಿದ ಬಿಜೆಪಿ ಸರಕಾರ ಎಐಎಡಿಎಂಕೆ ಅಧಿನಾಯಕಿ ಜೆ. ಜಯಲಲಿತಾ ಬೆಂಬಲ ವಾಪಸ್ ತೆಗೆದುಕೊಂಡಾಗ ಮತ್ತೆ ಪತನಗೊಂಡಿತ್ತು.
1999ರಲ್ಲಿ ಮತ್ತೆ ವಾಜಪೇಯಿ ಸರ್ಕಾರ ಅಧಿಕಾರಕ್ಕೇರಿ 5 ವರ್ಷಗಳ ಅಧಿಕಾರಾವಧಿಯನ್ನು ಪೂರೈಸಿತು . ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರ ಸರಕಾರದಲ್ಲಿ ವಿದೇಶಾಂಗ ಸಚಿವರಾಗಿದ್ದ ವಾಜಪೇಯಿ ವಿಶ್ವ ಸಂಸ್ಥೆಯ ಜನರಲ್ ಅಸೆಂಬ್ಲಿಯಲ್ಲಿ ಹಿಂದಿಯಲ್ಲಿ ಭಾಷಣ ಮಾಡಿದ್ದರು. ಇದು ಅವರಿಗೆ ಹೆಚ್ಚು ಕೀರ್ತಿಯನ್ನು ತಂದುಕೊಟ್ಟಿತ್ತು. 1999ರಲ್ಲಿ ಪಾಕಿಸ್ತಾನಕ್ಕೆ ಬಸ್ ಸಂಪರ್ಕ ಕಲ್ಪಿಸಿ ಪಾಕ್ ಭೇಟಿ ಮಾಡಿದ್ದು ಅವರ ಸಾಧನೆಗಳಲ್ಲೊಂದು.
ಬ್ರಹ್ಮಚಾರಿಯಾಗಿದ್ದ ವಾಜಪೇಯಿ ಉತ್ತಮ ವಾಗ್ಮಿ ಮತ್ತು ಕವಿಯಾಗಿದ್ದಾರೆ. ಭಾರತ ಸರಕಾರ ಇವರಿಗೆ 1992ರಲ್ಲಿ ಪದ್ಮ ವಿಭೂಷಣ ಮತ್ತು ಮಾರ್ಚ್ 27,2015 ರಂದು ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿತ್ತು.