ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಸಭೆಯಲ್ಲಿ ನಿರ್ಧಾರ ‘ಜ.23ಕ್ಕೆ ರ್ಯಾಲಿ: ಮನೆಗೊಬ್ಬರಂತೆ ಬರಲಿದ್ದಾರೆ ಅತಿಕ್ರಮಣದಾರರು’
ಕುಮಟಾ: ‘ಜೀವನಕ್ಕಾಗಿ, ವಾಸ್ತವ್ಯಕ್ಕಾಗಿ ಅರಣ್ಯಭೂಮಿ ಮಂಜೂರಿಗೆ ಸಕಲ ಹೋರಾಟಕ್ಕೂ ಸಿದ್ಧ. ಅರಣ್ಯ ಅತಿಕ್ರಮಣ ಮಂಜೂರಿಗೆ ಸಂಬಂಧಿಸಿ ಜನವರಿ 23ರಂದು ಸಂಘಟಿಸಲಾದ ರ್ಯಾಲಿಗೆ ಮನೆಗೊಬ್ಬರಂತೆ ಭಾಗವಹಿಸಲು ಅತಿಕ್ರಮಣದಾರರು ತೀರ್ಮಾನಿಸಿದ್ದಾರೆ. ಈ ಹೋರಾಟಕ್ಕೆ ಎಲ್ಲರೂ ಶಕ್ತಿ ನೀಡಬೇಕು’ ಎಂದು ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ಎ.ರವೀಂದ್ರ ನಾಯ್ಕ ಹೇಳಿದರು.
ಅರಣ್ಯ ಅತಿಕ್ರಮಣದಾರರ ಸಮಸ್ಯೆಗಳಿಗೆ ಸ್ಪಂದಿಸಲು ಮುಂದಿನ ಕಾರ್ಯಯೋಜನೆ ಕುರಿತು ತಾಲೂಕಿನ ಕತಗಾಲ (ಅಳಕೋಡ) ಪ್ರೌಢಶಾಲೆಯ ಆವರಣದಲ್ಲಿ ನಡೆದÀ ಅತಿಕ್ರಮಣದಾರರ ಸಭೆಯಲ್ಲಿ ಅವರು ಹೇಳಿದರು.
ಅರಣ್ಯ ಹಕ್ಕು ಕಾಯಿದೆ ಜಾರಿಗೆ ಬಂದು 12 ವರ್ಷವಾದರೂ ಮಂಜೂರಿ ಪ್ರಕ್ರಿಯೆ ನಿಧಾನಗತಿಯಲ್ಲಿ ಸಾಗಿದ ಬಗ್ಗೆ ಸಭೆಯಲ್ಲಿ ವಿಷಾದ ವ್ಯಕ್ತಪಡಿಸಲಾಯಿತು. ‘ತಾಲೂಕಿನಲ್ಲಿ ಒಟ್ಟೂ 6,601 ಅರ್ಜಿಗಳು ಸ್ವೀಕಾರವಾಗಿದೆ. ಅವುಗಳಲ್ಲಿ ಕೇವಲ 135 ಅರ್ಜಿಗಳಿಗೆ ಮಾನ್ಯತೆ ದೊರಕಿದ್ದು, ಇನ್ನುಳಿದ ಅರ್ಜಿಗಳ ಶೀಘ್ರ ವಿಲೇವಾರಿ ಆಗಬೇಕಿದೆ. ತೀವ್ರಗತಿಯಲ್ಲಿ ಅರಣ್ಯ ಹಕ್ಕು ಅನುಷ್ಠಾನವನ್ನು ಸಾಂದರ್ಭಿಕ ದಾಖಲೆಗಳ ಆಧಾರದ ಮೇಲೆ ಮಂಜೂರಿಗೆ ಮಾನ್ಯತೆ ನೀಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸಲು ಜ.23 ರಂದು ಬೆಳಿಗ್ಗೆ 10 ಗಂಟೆಗೆ ಸ್ಥಳೀಯ ಮಾಸ್ತಿಕಟ್ಟೆ ಆವರಣದಿಂದ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ರವೀಂದ್ರ ನಾಯ್ಕ ತಿಳಿಸಿದರು.
ಸಂಚಾಲಕ ಮಹೇಂದ್ರ ನಾಯ್ಕ ಸ್ವಾಗತಿಸಿ ಪ್ರಸ್ತಾವಿಕ ನುಡಿದರು. ಸೀತಾರಾಮ ಮರಾಠಿ ವಂದಿಸಿದರು. ಸಭೆಯಲ್ಲಿ ವೇದಿಕೆ ತಾಲೂಕಾಧ್ಯಕ್ಷ ಮಂಜುನಾಥ ಮರಾಠಿ, ಗ್ರಾಮ ಅರಣ್ಯ ಹಕ್ಕು ಸಮಿತಿ ಪದಾಧಿಕಾರಿಗಳಾದ ರಾಜು ಕುಪ್ಪಾ ಭಟ್ಟ, ನಾಗರಾಜ ನಾಯ್ಕ, ಗ್ರಾಮ ಪಂಚಾಯತ ಅಧ್ಯಕ್ಷ ಕೃಷ್ಣಾನಂದ ವೆರ್ಣೇಕರ, ಜಗದೀಶ ನಾಯ್ಕ, ಬಾಬು ನಾಯ್ಕ, ದ್ಯಾವಾ ಗೌಡ, ನಾರಾಯಣ ಮರಾಠಿ ಮುಂತಾದವರು ಮಾತನಾಡಿದರು.