ಮಂಗಳೂರು : ಪ್ರತಿಕೂಲ ಪರಿಸ್ಥಿತಿಯಿಂದ ತಡವಾಗಿ ಆರಂಭವಾದ ಮೀನುಗಾರಿಕೆ ಋತುವಿಗೆ ಮಿಶ್ರಫಲ ದೊರೆತಿದೆ. ಮಂಗಳೂರಿನಲ್ಲಿ ಕೆಂಪು ಸಿಗಡಿ, ಬಂಗುಡೆ, ಕಲ್ಲೂರು, ಅಂಜಲ್ ಉತ್ತಮ ಪ್ರಮಾಣದಲ್ಲಿ ಸಿಕ್ಕಿದ್ದು, ಮೀನುಗಾರರು ಸ್ವಲ್ಪ ನಿರಾಳತೆ ಅನುಭವಿಸಿದ್ದಾರೆ. ಆದರೆ ಉಡುಪಿಯಲ್ಲಿ ಮೀನುಗಾರರಿಗೆ ಲಾಭ ತರುವ ಮೀನುಗಳು ವಾಡಿಕೆ ಪ್ರಮಾಣದಲ್ಲಿ ದೊರೆಯದಿರುವುದು ನಿರಾಶೆಗೆ ಕಾರಣವಾಗಿದೆ.
ಕಳೆದ ವರ್ಷ ನಿರಂತರ ಚಂಡಮಾರುತ, ವ್ಯತಿರಿಕ್ತ ಹವಾಮಾನದಿಂದ ಮೀನುಗಾರಿಕೆ ನಡೆಸಲು ಹೆಚ್ಚಿಗೆ ಅವಕಾಶ ದೊರೆತಿರಲಿಲ್ಲ. ಕೊರೊನಾ ಸಂಬಂಧ ಮಾರ್ಚ್ 25ರಂದು ಘೋಷಣೆಯಾದ ಲಾಕ್ಡೌನ್, ಜೂನ್ ಮತ್ತು ಜುಲೈಯಲ್ಲಿ ವಾರ್ಷಿಕ ಮೀನುಗಾರಿಕೆ ರಜೆ, ಆಗಸ್ಟ್ನಲ್ಲಿ ಪ್ರಕ್ಷುಬ್ಧ ವಾತಾವರಣ ಮೀನುಗಾರರು ಹಾಗೂ ಅವರ ಬದುಕನ್ನು ಕಟ್ಟಿ ಹಾಕಿತ್ತು.
ಮಂಗಳೂರು ಭಾಗದಲ್ಲಿ ಕಡಲಿಗಿಳಿದ ಬೋಟುಗಳಲ್ಲಿ ಎರಡು ದಿನಗಳಿಂದ ಕೆಂಪು ಸಿಗಡಿ, ಮಾಂಜಿ, ಅಂಜಲ್ ಒಳ್ಳೆಯ ಪ್ರಮಾಣದಲ್ಲಿ ಬಂದಿದೆ. ಮಂಗಳೂರಿನಿಂದ ಹೊರಟ ಕೆಲ ಬೋಟುಗಳು 1000 ಟನ್ನಷ್ಟು ಕೆಂಪು ಸಿಗಡಿ ಜತೆ ವಾಪಸ್ ಬಂದಿವೆ. ಮಂಗಳೂರಿಗೆ ಹೋಲಿಸಿದರೆ ಮಲ್ಪೆಯಲ್ಲಿ ಕ್ಲಾಥಿ ಎನ್ನುವ ಮೀನು ಗರಿಷ್ಠ ಪ್ರಮಾಣದಲ್ಲಿ ಬಂದಿದ್ದು, ಕೆಲವೆಡೆ ಈ ಮೀನುಗಳನ್ನು ಇಡಲು ಸ್ಥಳಾವಕಾಶದ ಕೊರತೆ ಉಂಟಾಗಿದೆ. ವಿದೇಶಗಳಿಗೆ ರಫ್ತು ಆಗುತ್ತಿದ್ದರೂ ಮಾರುಕಟ್ಟೆಯಲ್ಲಿ ಈ ಮೀನುಗಳಿಗೆ ಬೆಲೆ ಕಡಿಮೆ. ಕರ್ನಾಟಕ, ಕೇರಳದಲ್ಲಿ ಈ ಮೀನು ತಿನ್ನುವವರಿಲ್ಲ ಎನ್ನುತ್ತಾರೆ ಮೀನುಗಾರರು.
ಅಧಿಕ ಆದಾಯದ ಮೀನುಗಳು ಕಡಿಮೆ
ಮಳೆಗಾಲದ ವಾರ್ಷಿಕ ಎರಡು ತಿಂಗಳ ಮೀನುಗಾರಿಕೆ ರಜೆ ಕಳೆದು ಮೀನುಗಾರಿಕೆ ಆರಂಭವಾಗುವ ಸಂದರ್ಭ ಮೀನುಗಾರರಿಗೆ ಅಧಿಕ ಆದಾಯ ತರುವ ಕಪ್ಪೆ ಬೊಂಡಾಸ್, ರಿಬ್ಬನ್ ಫಿಶ್, ಮದಿಮಾಲ್ ಮೀನುಗಳು ಉಡುಪಿಯಲ್ಲಿ ಈ ಬಾರಿ ಸಿಗಲಿಲ್ಲ.
ಕರಾವಳಿಯ ಆಳಸಮುದ್ರ ಮೀನುಗಾರಿಕೆಯಲ್ಲಿ ಕಾರ್ಮಿಕರಾಗಿ ದುಡಿಯುವರಲ್ಲಿ ಶೇ.95 ಜನ ಆಂಧ್ರಪ್ರದೇಶ, ತಮಿಳುನಾಡು, ಛತ್ತೀಸ್ಗಡ ಮುಂತಾದ ರಾಜ್ಯದವರು. ಲಾಕ್ಡೌನ್ ಸಂದರ್ಭ ನಾಡಿಗೆ ತೆರಳಿದ್ದ ಈ ಮೀನುಗಾರರಲ್ಲಿ ಶೇ.70 ಮಂದಿ ವಾಪಸಾಗಿದ್ದು, ಮೀನುಗಾರಿಕೆ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಮೀನುಗಾರಿಕೆ ಆಗದಿರುವುದು ಕಡಲ ಮಕ್ಕಳನ್ನ ಕಂಗೆಡಿಸಿದೆ.