ಭಟ್ಕಳ: ಭಟ್ಕಳ ಸಮೀಪದ ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆ ಮಾಡುತ್ತಿದ್ದ ಯಾಂತ್ರಿಕ ಬೋಟೊಂದು ದುರಂತಕ್ಕೀಡಾಗಿದ್ದು ಐದು ಮಂದಿ ಮೀನುಗಾರರನ್ನು ರಕ್ಷಿಸಿದ ಘಟನೆ ಭಾನುವಾರ ಜರಗಿದೆ.
ರಾಘವೇಂದ್ರ ಖಾರ್ವಿ ಎಂಬುವವರಿಗೆ ಸೇರಿದ ಶ್ರೀ ಲಕ್ಷ್ಮೀವೆಂಕಟೇಶ ಹೆಸರಿನ ಯಾಂತ್ರಿಕ ಬೋಟು. ಭಾನುವಾರ ಬೆಳಿಗ್ಗೆ ತಾಲೂಕಿನ ಕರಿಕಾಲ್ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದು ಅಲೆಗಳ ಅಬ್ಬರಕ್ಕೆ ಸಿಲುಕಿ ದೋಣಿ ಬುಡದಿಂದ ನೀರು ತುಂಬಿಕೊಂಡ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದ್ದು ಸಮೀಪವೇ ಇದ್ದ ಎರಡು ಯಾಂತ್ರಿಕ ಬೋಟುಗಳ ಸಹಾಯದಿಂದ ಮುಳುಗುತ್ತಿದ್ದ ಲಕ್ಷ್ಮೀ ವೆಂಕಟೇಶ ಬೋಟ್ ಹಾಗೂ ಅದರಲ್ಲಿದ್ದ ಐವರು ಮೀನುಗಾರರನ್ನು ರಕ್ಷಿಸಲಾಗಿದೆ. ರಾಘವೇಂದ್ರ, ಚೇತನ, ಉದಯಕುಮಾರ, ಶನಿಯಾರ, ಸುಬ್ರಹ್ಮಣ್ಯ ಎಂಬುವವರೇ ರಕ್ಷಣೆಗೊಳಗಾದವರು ಎಂದು ತಿಳಿದುಬಂದಿದೆ. ಭಟ್ಕಳ ಕರಾವಳಿ ಕಾವಲು ಪಡೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.