ಬೈಂದೂರು:ಮುಂಬೈಯಿಂದ ಎರ್ನಾಕುಲಂಗೆ ತೆರಳುತ್ತಿದ್ದ ಮಂಗಳ ಎಕ್ಸ್ ಪ್ರೆಸ್ (12618) ರೈಲಿನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಕೆಲ ಕಾಲ ಆತಂಕಕ್ಕೆ ಕಾರಣವಾಯಿತು.
ರೈಲಿನ ಬಿ-4 ಎಸಿ ಬೋಗಿಯಲ್ಲಿ, ಎಸಿ ಸಮರ್ಪಕವಾಗಿ ಕಾರ್ಯನಿರ್ವಹಿಸದ ಹಿನ್ನಲೆಯಲ್ಲಿ, ಅದನ್ನು ದುರಸ್ತಿಪಡಿಸುವಂತೆ ಪ್ರಯಾಣಿಕರೊಬ್ಬರು ರೈಲ್ವೆ ಅಧಿಕಾರಿಗಳ ಗಮನಕ್ಕೆ ತಂದಿದ್ದು, ತಕ್ಷಣ ಆಗಮಿಸಿದ ತಂತ್ರಜ್ಞರು ಅದನ್ನು ದುರಸ್ತಿ ಮಾಡಿ ತೆರಳಿದ್ದರು. ತಡರಾತ್ರಿ 1 . 20 ರ ಸುಮಾರಿಗೆ ರೈಲು ಬಿಜೂರು ರೈಲ್ವೆ ನಿಲ್ದಾಣದಿಂದ ಸ್ವಲ್ಪ ದೂರದಲ್ಲಿರುವ ಕಂಬದಕೋಣೆಯಲ್ಲಿ ತೆರಳುತ್ತಿದ್ದಾಗ ಬೋಗಿಯ ಎಸಿ ಫ್ಯಾನ್ ನಲ್ಲಿ ಶಾರ್ಟ್ ಸರ್ಕಿಟ್ ನಿಂದಾಗಿ ಬೆಂಕಿ ಕಾಣಿಸಿಕೊಂಡಿದೆ.
ಕುಂದಾಪುರದಲ್ಲಿ ಇಳಿಯಬೇಕಾಗಿದ್ದ ಮಹಿಳೆಯೊಬ್ಬರು ಅದನ್ನು ಗಮನಿಸಿ, ತಕ್ಷಣ ಇತರ ಪ್ರಯಾಣಿಕರನ್ನು ಎಚ್ಚರಿಸಿ, ರೈಲ್ವೆ ಅಧಿಕಾರಿಗಳ ಗಮನಕ್ಕೆ ತಂದರು, ಹೀಗಾಗಿ ಹೆಚ್ಚಿನ ಅನಾಹುತವಾಗುವುದು ತಪ್ಪಿತು ಎಂದು ತಿಳಿದುಬಂದಿದೆ.
ತಕ್ಷಣ ರೈಲನ್ನು ನಿಲ್ಲಿಸಲಾಗಿದ್ದು, ಸ್ಥಳೀಯರು ತಮ್ಮ ಪಂಪ್ ಸೆಟ್ ನಿಂದ ನೀರನ್ನು ಹಾಯಿಸಿ ಬೆಂಕಿಯನ್ನು ನಂದಿಸಲು ಯತ್ನಿಸಿದ್ದಾರೆ. ಕುಂದಾಪುರ ಹಾಗು ಭಟ್ಕಳದಿಂದ ಅಗ್ನಿಶಾಮಕ ದಳದವರು ಆಗಮಿಸಿದರು. ಬಳಿಕ ಮತ್ತ್ತೊಂದು ರೈಲು ಆಗಮಿಸುತ್ತಿದ್ದ ಹಿನ್ನಲೆಯಲ್ಲಿ, ರೈಲನ್ನು ಹಿಮ್ಮುಕವಾಗಿ ತಂದು ಬಿಜೂರು ರೈಲ್ವೆ ನಿಲ್ದಾಣದಲ್ಲಿ ನಿಲ್ಲಿಸಲಾಯಿತು.
ಈ ಅಗ್ನಿ ಅವಘಡದಲ್ಲಿ ಎಲ್ಲರೂ ಅಪಾಯದಿಂದ ಪಾರಾಗಿದ್ದು ಇಬ್ಬರು ಪುರುಷರು ಹಾಗೂ ಇಬ್ಬರು ಮಹಿಳೆಯರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಮಹಿಳೆಯೊಬ್ಬರು ರಕ್ತದೊತ್ತಡಕ್ಕೆ ತುತ್ತಾಗಿದ್ದರು. ಉಡುಪಿ ರೈಲ್ವೆ ಇಲಾಖೆ ವೈದ್ಯರು ತಕ್ಷಣ ಸ್ಥಳೀಯ ವೈದ್ಯರಿಗೆ ಮಾಹಿತಿ ನೀಡಿದ ಹಿನ್ನಲೆಯಲ್ಲಿ ಸ್ಥಳೀಯ ವೈದ್ಯರು ಹಾಗೂ 108 ಆಗಮಿಸಿ ಪ್ರಥಮ ಚಿಕಿತ್ಸೆ ನೀಡಿದರು