ಹೊನ್ನಾವರ : ತಾಲೂಕಿನ ಮಂಕಿ ರೈಲ್ವೆ ನಿಲ್ದಾಣದ ಬಳಿ ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ನಡೆದಿದೆ. ಸಂತೋಷಕುಮಾರ ಎಂ (48) ಮೃತ ದುರ್ದೈವಿಯಾಗಿದ್ದಾನೆ.
ಈತ ಸೌಥ ದೆಹಲಿ ಮೂಲದವನೆಂದು ಹೇಳಲಾಗುತ್ತಿದ್ದು, ದೆಹಲಿಯಿಂದ ತ್ರಿವೆಂಡ್ರಮ್ ಗೆ ತೆರಳುವ ಮಂಗಲಾ ಎಕ್ಸಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದನು. ಈತ ಟಿಕೇಟ್ ತೆಗೆಯದೆ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದರಿಂದ ಮಥುರಾ ರೈಲ್ವೆ ನಿಲ್ದಾಣದಲ್ಲಿ ದಂಡ ಹಾಕಲಾಗಿತ್ತು. ದಂಡ ನೀಡಿ ತನ್ನ ಪ್ರಯಾಣ ಮುಂದುವರಿಸಿದ್ದನು. ಮಂಕಿ ಬಳಿ ರೈಲ್ವೆ ನಿಲ್ದಾಣದ ಬಳಿ ಹಳಿಯಲ್ಲಿ ಮೃತದೇಹ ಪತ್ತೆಯಾಗಿದೆ.
ರೈಲು ಹೊರಡುವ ವೇಳೆಯೇ ಜಿಗಿದು ಕೆಳಕ್ಕೆ ಬಿದ್ದಿರಬಹುದೆಂದು ಶಂಕಿಸಲಾಗಿದೆ. ಸೊಂಟದ ಭಾಗ ಸಂಪೂರ್ಣ ಗಾಯವಾದ ರೀತಿಯಲ್ಲಿದೆ. ಮಂಕಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.