ಮುಂಬೈ: ಅಂಬಾನಿ ನಿವಾಸದ ಮುಂದೆ ಸ್ಫೋಟಕ ತುಂಬಿದ್ದ ವಾಹನ ಪತ್ತೆ ಪ್ರಕರಣ ಪ್ರತಿಷ್ಠೆ ಹೆಚ್ಚಿಸಿಕೊಳ್ಳಲು ಬಾಂಬ್ ಭೀತಿ ಹುಟ್ಟಿಸಿದ್ದ ಪೊಲೀಸ್ ಅಧಿಕಾರಿ ಸಚಿನ್ ವಝೆ : ಎನ್ಐಎ
ಮುಂಬೈ: ಯಶಸ್ವಿ ಪೊಲೀಸ್ ಅಧಿಕಾರಿ ಎಂಬ ಪ್ರತಿಷ್ಠೆಯನ್ನು ಹೆಚ್ಚಿಸಿಕೊಳ್ಳುವ ಪಿತೂರಿಯ ಅಂಗವಾಗಿ ಪೊಲೀಸ್ ಅಧಿಕಾರಿ ಸಚಿನ್ ವಝೆ , ಖ್ಯಾತ ಉದ್ಯಮಿ ಮುಕೇಶ್ ಅಂಬಾನಿ ನಿವಾಸದ ಮುಂದೆ ಬಾಂಬ್ ಭೀತಿ ಸೃಷ್ಟಿಸಿದ್ದು ಇದೀಗ ದೃಢಪಟ್ಟಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ ಹೇಳಿದೆ.
ಇದರೊಂದಿಗೆ ಅಂಬಾನಿ ನಿವಾಸದ ಮುಂದೆ ಸ್ಫೋಟಕ ತುಂಬಿದ್ದ ವಾಹನ ಪತ್ತೆಯಾದ ಪ್ರಕರಣ ಬಗೆಹರಿದಿದೆ ಎಂದು ಎನ್ಐಎ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
ಮುಂಬೈ ಪೊಲೀಸ್ ಇಲಾಖೆಯ ಅಪರಾಧ ವಿಭಾಗದಲ್ಲಿ ಅಪರಾಧ ಗುಪ್ತಚರ ಘಟಕದ ಮುಖ್ಯಸ್ಥರಾಗಿದ್ದ ಸಚಿನ್ ವಝ 20 ಜಿಲೆಟಿನ್ ಕಡ್ಡಿಗಳನ್ನು ಹೊಂದಿದ್ದ ಸ್ಕಾರ್ಪಿಯೊ ವಾಹನ ಅಂಬಾನಿ ನಿವಾಸದ ಮುಂದೆ ಪತ್ತೆಯಾದ ಪ್ರಕರಣದ ಆರಂಭಿಕ ವಿಚಾರಣೆಯ ನೇತೃತ್ವ ವಹಿಸಿದ್ದರು. ಬಳಿಕೆ ಮಾರ್ಚ್ 8ರಂದು ಪ್ರಕರಣವನ್ನು ಎನ್ಐಎಗೆ ವರ್ಗಾಯಿಸಲಾಗಿದ್ದು, ಮಾರ್ಚ್ 13ರಂದು ಸಚಿನ್ ವಝೆ ಅವರನ್ನು ಬಂಧಿಸಲಾಗಿತ್ತು.
ಫೆ.25ರಂದು ಸ್ಕಾರ್ಪಿಯೊ ವಾಹನವನ್ನು ಸಚಿನ್ ವಝೆ ಸ್ವತಃ ಚಾಲನೆ ಮಾಡಿದ್ದರು. ಇದರ ಹಿಂದೆ ಮುಂಬೈ ಪೊಲೀಸ್ ಇಲಾಖೆಗೆ ಸೇರಿದ್ದ ಕಾರು ಇತ್ತು. ಕಾರ್ಮಿಶೆಲ್ ರಸ್ತೆಯಲ್ಲಿ ಸ್ಥಾರ್ಪಿಯೊ ವಾಹನವನ್ನು ನಿಲ್ಲಿಸಿ ಕಾರಿನಲ್ಲಿ ಕಿ ಸಚಿನ್ ವಝೆ ಅಲ್ಲಿಂದ ತೆರಳಿದ್ದರು ಎಂದು ಹಿರಿಯ ಎನ್ ಐಎ ಅಧಿಕಾರಿ ಹೇಳಿದ್ದಾರೆ.
ಸಚಿನ್ ವಝೆ
ಈ ಪ್ರಕರಣದ ಬಗ್ಗೆ ನಿರ್ಣಯಕ್ಕೆ ಬರಲಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಲು ಅವರು ನಿರಾಕರಿಸಿದ್ದಾರೆ. ಜತೆಗೆ ಇದನ್ನು ತನಿಖೆ ವೇಳೆ ಸಚಿನ್ ವಝೆ ಒಪ್ಪಿಕೊಂಡಿದ್ದಾರೆಯೇ ಹಾಗೂ ಅಪರಾಧದ ಹಿಂದಿನ ಉದ್ದೇಶದ ಬಗ್ಗೆ ಸ್ಪಷ್ಟಪಡಿಸಿದ್ದಾರೆಯೇ ಎಂಬ ಪ್ರಶ್ನೆಗೆ ಅವರು ಉತ್ತರಿಸಿಲ್ಲ.
ಈ ಘಟನೆಯಲ್ಲಿ ಯಾವುದೇ ಭಯೋತ್ಪಾದನೆ ಅಂಶ ಒಳಗೊಂಡಿರುವುದನ್ನು ತಳ್ಳಿಹಾಕಿರುವ ಅಧಿಕಾರಿಗಳು, ಮುಂಬೈನಲ್ಲಿ ಹಲವು ಗಂಟೆಗಳ ಕಾಲ ನಡೆದ ದಾಳಿಯಲ್ಲಿ ಪ್ರಮುಖ ಪುರಾವೆಗಳನ್ನು ಸಂಗ್ರಹಿಸಲಾಗಿದೆ. ಇದು ಈ ಪಿತೂರಿಯ ಅನುಕ್ರಮಣಿಕೆಯನ್ನು ಪತ್ತೆ ಮಾಡಲು ಸಹಕಾರಿಯಾಗಿದೆ ಎಂದು ವಿವರಿಸಿದ್ದಾರೆ.