ಶ್ರೀನಿವಾಸಪುರ: ಬಡವರ ಹಸಿವು ನಿವಾರಣೆ ಹಾಗೂ ಆರೋಗ್ಯ ರಕ್ಷಣೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಪುರಸಭೆ ಸದಸ್ಯೆ ಕೆ.ಎಸ್.ಸುನಿತ ಮಂಜುನಾಥ್ ಹೇಳಿದರು.
ಕೊರೊನಾ ವೈರಾಣು ಸೋಂಕು ತಪ್ಪಿಸಲು ಲಾಕ್ ಡೌನ್ ಅನಿವಾರ್ಯವಾಗಿದೆ. ಪ್ರತಿಯೊಬ್ಬರೂ ಸಾಮಾಜಿಕ ಅಂತರ ಪಾಲಿಸಬೇಕು. ಕಟ್ಟುನಿಟ್ಟಾಗಿ ಮನೆಯಲ್ಲಿಯೇ ಉಳಿಯಬೇಕು. ಸಮಸ್ಯೆ ಕಂಡುಬಂದಲ್ಲಿ ಆಯಾ ವಾರ್ಡ್ನ ಉಸ್ತುವಾರಿ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು ಹೇಳಿದರು.
ಪಟ್ಟಣದಲ್ಲಿ ದಿನಗೂಲಿ ಮಾಡುವ ವ್ಯಕ್ತಿಗಳು ಹಾಗೂ ಅಸಂಘಟಿತ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕರ್ಫೂ್ಯ ವಿಧಿಸಿರುವುದರಿಂದ ಕೆಲಸಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ. ಸಂಪಾದನೆ ಇಲ್ಲದೆ ಸಂಕಷ್ಟ ಎದುರಾಗಿದೆ. ಆದ್ದರಿಂದ ಅಗತ್ಯ ಇರುವವರನ್ನು ಗುರುತಿಸಿ ಆಹಾರ ಪದಾರ್ಥ ವಿತರಿಸಲಾಗುತ್ತಿದೆ ಎಂದು ಹೇಳಿದರು.
ಪಟ್ಟಣದ ಕೊಳ್ಳೂರು, ಕೊಳ್ಳೂರು ಕಾಲೋನಿ, ಇಂದಿರಾ ನಗರ ಹಾಗೂ ವೆಂಕಟೇಶ್ವರ ಬಡಾವಣೆಯ 150 ಕುಟುಂಬಗಳಿಗೆ ತಲಾ ಒಂದು ಮೂಟೆ ಅಕ್ಕಿ, ಅಡುಗೆ ಎಣ್ಣೆ, ಸಾಂಬಾರು ದಿನಿಸು ಹಾಗೂ ತರಕಾರಿ ಹಂಚಲಾಯಿತು.
ಪುರಸಭಾ ಸದಸ್ಯರಾದ ಬಿ.ವೆಂಕಟರೆಡ್ಡಿ, ಸತ್ಯನಾರಾಯಣ, ಮುಖಂಡರಾದ ರಂಗಪ್ಪ, ಡಿ.ಕೆ.ಚೊಕ್ಕಿರೆಡ್ಡಿ, ಈರಪ್ಪ, ಮುನಿಶಾಮಿ, ಮುನಿರಾಜು, ಮಂಜುನಾಥ್ ಇದ್ದರು.
ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ