ಶ್ರೀನಿವಾಸಪುರ: ಕನ್ನಡ ಪರಂಪರೆಯ ಉಳಿವಿಗೆ ಪ್ರತಿಯೊಬ್ಬರೂ ಶ್ರಮಿಸಬೇಕು. ಕನ್ನಡ ಭಾಷೆ, ನೆಲ, ಜಲದ ಋಣ ತೀರಿಸಬೇಕು ಎಂದು ತಹಶೀಲ್ದಾರ್ ಕಮಲಾಬಾಯಿ ಹೇಳಿದರು.
ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಗುರುವಾರ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿ, ಕನ್ನಡ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಕೀಳರಿಮೆ ಬೆಳೆಸಿಕೊಳ್ಳಬಾರದು. ಸರ್ಕಾರಿ ಕನ್ನಡ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳು ಸಾಧನೆಯ ಹಾದಿಯಲ್ಲಿ ಮುಂದಿದ್ದಾರೆ. ಕನ್ನಡ ಶಾಲೆಯಲ್ಲಿ ಓದುತ್ತಿರುವುದರ ಬಗ್ಗೆ ಹೆಮ್ಮೆ ಇರಲಿ ಎಂದು ಹೇಳಿದರು.
ಕನ್ನಡ ನಾಡು ನಮಗೇನು ಕೊಟ್ಟಿದೆ ಎಂದು ಕೇಳಬಾರದು. ನಾಡಿಗೆ ನಮ್ಮ ಕೊಡುಗೆ ಏನು ಎಂಬುದರ ಬಗ್ಗೆ ಆಲೋಚಿಸಬೇಕು. ಕನ್ನಡಿಗರಿಗೊಂದು ನಾಡು ಕಟ್ಟಲು ಅದೆಷ್ಟೋ ಮಂದಿ ಹೋರಾಟ ಮಾಡಿದ್ದಾರೆ. ಈ ಸಂದರ್ಭದಲ್ಲಿ ಅವರನ್ನು ಸ್ಮರಿಸಬೇಕು. ಅವರ ಆಶಯಕ್ಕೆ ತಕ್ಕಂತೆ ನಡೆದುಕೊಳ್ಳಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳು ಕನ್ನಡ ಭಾಷೆ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು. ಕನ್ನಡ ಪತ್ರಿಕೆ, ಸಾಹಿತ್ಯ ಕೃತಿಗಳನ್ನು ಓದಬೇಕು. ಕನ್ನಡ ಭಾಷೆಯ ಸೊಗಡು ಹರಡಲು ನಿರಂತರ ಪ್ರಯತ್ನ ನಡೆಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಳೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ ನೂರಕ್ಕೆ ನೂರಷ್ಟು ಅಂಕ ಪಡೆದಿದ್ದ ತಾಲ್ಲೂಕಿನ ಬೇರೆ ಬೇರೆ ಶಾಲೆಗಳ 18 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿವಿಧ ಶಾಲೆಗಳ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಎಪಿಎಂಸಿ ಅಧ್ಯಕ್ಷ ಎನ್.ರಾಜೇಂದ್ರ ಪ್ರಸಾದ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನಾರಾಯಣಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಶಂಷುನ್ನೀಸಾ, ರಾಜಸ್ವ ನಿರೀಕ್ಷಕ ಮುನಿರೆಡ್ಡಿ, ವೆಂಕಟೇಶ್ವರ ಗ್ರಾಮೀಣ ಆರೋಗ್ಯ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ. ವೈ.ವಿ.ವೆಂಕಟಾಚಲ, ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಎಂ.ವೆಂಕಟರಾಮಪ್ಪ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರಾಜಣ್ಣ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಶ್ರೀನಿವಾಸಮೂರ್ತಿ,ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ನಾಗರಾಜ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗೋವಿಂದರೆಡ್ಡಿ, ಕಲಾ ಶಂಕರ್, ಸುಬ್ರಮಣಿ, ಸತ್ಯಪ್ರಕಾಶ್, ವಿ.ಶೇಕರ್, ದೇವರೆಡ್ಡಿ ಇದ್ದರು.
ಮೆರವಣಿಗೆ: ಭುವನೇಶ್ವರಿ ಮೆರವಣಿಗೆಗೆ ತಹಶೀಲ್ದಾರ್ ಕಮಲಾಬಾಯಿ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಭುವನೇಶ್ವರಿ ಭಾವ ಚಿತ್ರ ಹೊತ್ತ ಟ್ರ್ಯಾಕ್ಟರ್ಗಳು ಭಾಗವಹಿಸಿದ್ದವು. ವೆಂಕಟೇಶ್ವರ ಗ್ರಾಮೀಣ ಆರೋಗ್ಯ ಶಿಕ್ಷಣ ಸಂಸ್ಥೆ ನಿರ್ಮಿಸಿದ್ದ ಸಾಹಿತ್ಯ ಹಾಗೂ ಸ್ವಚ್ಛತೆ ಮಹತ್ವ ಸಾರುವ ರಥ ವೀಕ್ಷಕರ ಗಮನ ಸೆಳೆಯಿತು. ಕಲಾ ತಂಡಗಳು ಹಾಗೂ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಟಿಪ್ಪು ಸೇನೆ: ಪಟ್ಟಣದಲ್ಲಿ ಜೈ ಕರ್ನಾಟಕ ಆಟೋ ಮಾಲೀಕರ ಸಂಘ ಹಾಗೂ ಟಿಪ್ಪು ಸೆಕ್ಯುಲರ್ ಸೇನೆ ವತಿಯಿಂದ ರಾಜ್ಯೋತ್ಸವ ಆಚರಿಸಲಾಯಿತು. ಡಾ. ವೈ.ವಿ.ವೆಂಕಟಾಚಲ, ಸೇನೆ ಅಧ್ಯಕ್ಷ ಮಹಮದ್ ರಫಿ, ಮುಖಂಡರಾದ ಸೈಯದ್ ಅಕ್ಬರ್, ಮುಬಾರಕ್ ಖಾನ್, ಮಾಲೀಕ್ ಪಾಷ, ಜಗದೀಶ್ ಇದ್ದರು.
ಎಂ.ಜಿ ರಸ್ತೆಯ ಭುವನೇಶ್ವರಿ ಕನ್ನಡ ಸೇವಾ ಬಳಗದ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಮುಖಂಡರಾದ ರಾಘವೇಂದ್ರ, ಗೋಪಿನಾಥ್, ರಮೇಶ್, ಅಶೋಕ್, ನಾಗೇಂದ್ರ, ಅಮರ್, ನಂದೀಶ್ ಇದ್ದರು.