ಧಾರವಾಡ : ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಇತ್ತೀಚಿನ ದಿನಗಳಲ್ಲಿ ಮೊಬೈಲ್ಗಳಿಲ್ಲದ ಮನೆಗಳಿಲ್ಲ, ವ್ಯಕ್ತಿಗಳಿಲ್ಲ ಪ್ರತಿಯೊಬ್ಬರೂ ಮೊಬೈಲ್ ಬಳಕೆ ಮಾಡುತ್ತಿದ್ದಾರೆ, ಸರ್ಕಾರದಿಂದ 30 ದಿನಗಳ ಮೊಬೈಲ್ ಹ್ಯಾಂಡ್ಸೆಟ್ ರಿಪೇರಿ ತರಬೇತಿ ನೀಡುತ್ತಿದೆ. ಇದರ ಸದುಪಯೋಗ ಪ್ರತಿಯೊಬ್ಬರೂ ತೆಗೆದುಕೊಂಡು ಕುಟುಂಬ ನಿರ್ವಹಣೆಗೆ ಸ್ವಾವಲಂಬನೆಯ ಹಾದಿ ಕಂಡುಕೊಳ್ಳಬಹುದು ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಎನ್.ಆರ್.ಪುರುಷೋತ್ತಮ ಹೇಳಿದರು.
ಅವರು ಬುಧವಾರ ಬೆಳಿಗ್ಗೆ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಹಾಗೂ ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್) ಸಹಯೋಗದಲ್ಲಿ ಮಾಳಮಡ್ಡಿಯ ಲಿಂಗರಾಜ ಭವನ ಪ್ರೆಸ್ ಆವರಣದ ಭವಾನಿ ನೃತ್ಯ ಶಾಲೆಯಲ್ಲಿ ಏರ್ಪಡಿಸಿರುವ 30 ದಿನಗಳ ಮೊಬೈಲ್ ಹ್ಯಾಂಡ್ಸೆಟ್ ರಿಪೇರಿ ಮತ್ತು ಸೇವಾ ಕೌಶಲ್ಯ ಆಧಾರಿತ ತರಬೇತಿಯಲ್ಲಿ ಭಾಗವಹಿಸಿ ಮಾತನಾಡಿದರು.
ಈ ತರಬೇತಿ ಕಾರ್ಯಾಗಾರ ಕೇವಲ ಪ್ರಮಾಣ ಪತ್ರ ಹಾಗೂ ಪ್ರೋತ್ಸಾಹಕ್ಕೆ ಮಾತ್ರ ಸೀಮಿತವಾಗಬಾರದು. ಪ್ರತಿಯೊಬ್ಬರೂ ತರಬೇತಿ ಸದುಪಯೋಗ ಪಡೆದುಕೊಂಡು ಕುಟುಂಬ ನಿರ್ವಹಣೆ ಜವಾಬ್ದಾರಿ ಪಡೆದುಕೊಂಡು ಉದ್ಯಮ ಶೀಲರಾಗಿ ಹೊರಹೊಮ್ಮಬೇಕು. 30 ದಿನಗಳ ಮೊಬೈಲ್ ತರಬೇತಿ ಪಡೆದು, ಮುಂದಿನ ದಿನಗಳಲ್ಲಿ ಸ್ವತಃ ನೀವೆ ಕಂಪನಿ ಮಾಲೀಕರಾಗಬಹುದು ಆ ನಿಟ್ಟಿನಲ್ಲಿ ಎಲ್ಲರೂ ತರಬೇತಿ ಪಡೆದುಕೊಳ್ಳಬೇಕು ಎಂದರು.
ಮೊಬೈಲ್ ರಿಪೇರಿ ಕೇವಲ ಸಣ್ಣ ಉದ್ಯಮವೆಂದು ತಿಳಿದುಕೊಳ್ಳುತ್ತೇವೆ, ಆದರೆ ಮೊಬೈಲ್ ರಿಪೇರಿ ತರಬೇತಿ ಪಡೆದು ನೀವೆ ಹೊಸದಾಗಿ ಮೊಬೈಲ್ ಆವಿಷ್ಕಾರ ಮಾಡುವ ಶಕ್ತಿ ನಿಮ್ಮದಾಗಲಿ, ಸಿಡಾಕ್ ಸಂಸ್ಥೆಯಲ್ಲಿ ನುರಿತ ತರಬೇತುದಾರರು ಅಚ್ಚುಕಟ್ಟಾಗಿ ತರಬೇತಿ ನೀಡುತ್ತಾರೆ. ಅದನ್ನು ಪ್ರತಿಯೊಬ್ಬರೂ ಸದುಪಯೋಗ ಪಡೆದುಕೊಂಡು ಉದ್ಯೋಗ ಆಕಾಂಕ್ಷಿಗಳಿಗೆ ತರಬೇತಿ ನೀಡಬಹುದು ಎಂದರು.
ಪದವಿ ಪಡೆದುಕೊಂಡಿರುವ ವಿದ್ಯಾರ್ಥಿಗಳು ಸಮಾಜ ಕಲ್ಯಾಣ ಇಲಾಖೆಯಿಂದ ವಿದ್ಯಾರ್ಥಿವೇತನವನ್ನು ಪಡೆದುಕೊಂಡಿರುತ್ತಿರಿ, ಅದನ್ನು ಮರಳಿ ಸಮಾಜಕ್ಕೆ ನೀಡಬೇಕಾದರೆ ನೀವೆಲ್ಲ ಉದ್ಯೋಗಿಗಳಾಗಿ ಹಲವು ಜನರಿಗೆ ಅನುಕೂಲವಾಗುವಂತೆ ಮಾಡಿದಾಗ ಮಾತ್ರ ಸರ್ಕಾರ ನೀಡಿದ ವಿದ್ಯಾರ್ಥಿವೇತನ ಸದುಪಯೋಗಪಡಿಸಿಕೊಂಡಂತಾಗುತ್ತದೆ.
ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಮತ್ತು ಆದಿಜಾಂಭವ ಅಭಿವೃದ್ಧಿ ನಿಗಮದಿಂದ ಗಂಗಾ ಕಲ್ಯಾಣ ಯೋಜನೆಯಡಿ ಬೊರವೇಲ್ ನೀಡಲಾಗಿದೆ. ಅದರ ಜೊತೆಗೆ ಭೂಮಿ ಖರೀದಿ ಮಾಡಿಸಿಕೊಟ್ಟಿದೆ. ಅಂತಹ ಕುಟುಂಬದಿಂದ ಬಂದವರು ಸರ್ಕಾರಕ್ಕೆ ಸಮುದಾಯಕ್ಕೆ ನಾವು ಏನು ನೀಡುತ್ತೇವೆಂಬದು ಅರಿತು ಉದ್ಯಮಶೀಲರಾಗಬೇಕು ಎಂದು ಅವರು ಹೇಳಿದರು.
ಸಿಡಾಕ್ ಜಂಟಿ ನಿರ್ದೇಶಕ ಚಂದ್ರಶೇಖರ ಅಂಗಡಿ, ತರಬೇತಿದಾರರಾದ ಮೌನೇಶ ಬಡಿಗೇರ, ರೋಹಿಣಿ ಘಂಟಿ, ರಂಜನಾ ಪೇಟೆ ಮತ್ತಿತರರು ಉಪಸ್ಥಿತರಿದ್ದರು.