ಭಟ್ಕಳ: ಸ್ನೇಹ ವಿಶೇಷ ಶಾಲೆಯಲ್ಲಿ ಸ್ಕೌಟ್ಸ್ ಎಂಡ್ ಗೈಡ್ಸ್ ಘಟಕ ಉದ್ಘಾಟನೆ

Source: S O News | By I.G. Bhatkali | Published on 6th July 2022, 12:49 PM | Coastal News |

ಭಟ್ಕಳ: ಭಾರತ್ ಸ್ಕೌಟ್ಸ್ ಎಂಡ್ ಗೈಡ್ಸ್ ಕರ್ನಾಟಕ ಸಂಸ್ಥೆಯ ಕಬ್ ಖುಲ್ ಬುಲ್ ರೋವರ್ಸ್ ರೇಂಜರ್ಸ್ ಸಮಾವೇಶ ಹಾಗೂ ಸ್ನೇಹ ವಿಶೇಷ ಶಾಲೆ ಸ್ಕೌಟ್ಸ್ ಎಂಡ್ ಗೈಡ್ಸ್ ಘಟಕ ಉದ್ಘಾಟನೆ ಹಾಗೂ ದೀಕ್ಷಾ ಸಮಾರಂಭ ಇಲ್ಲಿನ ಕಮಲಾವತಿ ರಾಮನಾಥ ಸಭಾಗ್ರಹದಲ್ಲಿ ನಡೆಯಿತು. 

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ದೇವಿದಾಸ ಮೊಗೇರ ಅವರು ಇದೊಂದು ಅಪೂರ್ವ ಕಾರ್ಯಕ್ರಮವಾಗಿದ್ದು ಸ್ನೇಹ ವಿಶೇಷ ಶಾಲೆಯಲ್ಲಿ ಸ್ಕೌಟ್ಸ್ ಎಂಡ್ ಗೈಡ್ಸ್  ಘಟಕ ಆರಂಭವಾಗಿರುವುದು ಅತ್ಯಂತ ಹೆಮ್ಮೆಯ ಸಂಗತಿ ಎಂದರು. ವಿಶೇಷ ಮಕ್ಕಳು ಮನೆಯ ಒಂದು ಕೋಣೆಯಲ್ಲಿ ಇಲ್ಲವೇ ಒಂದು ಮೂಲೆಯಲ್ಲಿರಬೇಕಾದವರು ಸ್ನೇಹ ವಿಶೇಷ ಶಾಲೆಯಿಂದಾಗಿ ತಮ್ಮ ಪ್ರತಿಭೆಯನ್ನು ನಾಡಿಗೇ ಪರಿಚಯಿಸುವಂತಾಗಿದೆ. ಇಂದು ಸ್ಕೌಟ್ಸ್ ಎಂಡ್ ಗೈಡ್ಸ್ ಶಾಖೆಯ ಉದ್ಘಾಟನೆಯೊಂದಿಗೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರತಿಭೆಯನ್ನು ಹೊರ ಹಾಕುವಂತಾಲಿ ಎಂದು ಹಾರೈಸಿದರು. ಕಾರ್ಯಕ್ರಮದಲ್ಲಿ ಡ್ರಮ್ ನುಡಿಸಿದ್ದನ್ನು ಉಲ್ಲೇಖಿಸಿದ ಅವರು ಡ್ರಮ್ ನುಡಿಸುವಾಗಿನ ಮಕ್ಕಳ ಸಂತಸಕ್ಕೆ ಬೆಲೆ ಕಟ್ಟಲಾಗದು ಎಂದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನ ನ್ಯೂ ಇಂಗ್ಲೀಷ್ ಪಿ.ಯು. ಕಾಲೇಜಿನ ಪ್ರಾಂಶುಪಾಲ ವೀರೇಂದ್ರ ಶ್ಯಾನಭಾಗ ವಹಿಸಿದ್ದರು. 

ಮುಖ್ಯ ಅತಿಥಿ ಜ್ಯೂಲಿಯಸ್ ರಾಕ್ ಮಾತನಾಡಿ ಈ ಕರಾವಳಿಯ ಭಾಗದಲ್ಲಿ ಗ್ರೀನ ವ್ಯಾಲಿ ಶಾಲೆಯಲ್ಲಿ ಸೇವೆ ಸಲ್ಲಿದ್ದನ್ನು ಸ್ಮರಿಸುತ್ತಾ, ಮತ್ತೊಮ್ಮೆ ಈ ಭಾಗಕ್ಕೆ ಬರಲು ಅವಕಾಶವಾಯಿತು. ಸ್ನೇಹ ವಿಶೇಷ ಶಾಲೆಯು ಉತ್ತಮವಾಗಿ ನಡೆಯುತ್ತಿದ್ದು ವಿದ್ಯಾರ್ಥಿಗಳು ಡ್ರಮ್ ಭಾರಿಸುವದರ ಮೂಲಕ ತಾವು ಯಾವುದಕ್ಕೂ ಕಡಿಮೆ ಇಲ್ಲ ಎಂದು ತೊರಿಸಿಕೊಟ್ಟಿದ್ದಾರೆ ಎಂದರು. 
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅಳ್ವೇಕೋಡಿ ದೇವಸ್ಥಾನದ ಧರ್ಮದರ್ಶಿ ನಾರಾಯಣ ಜಿ.ದೈಮನೆ, ವಿದ್ಯಾ ಭಾರತಿ ಶಾಲೆಯ ಮುಖ್ಯೋಪಾಧ್ಯಾಯಿನಿ ರೂಪಾ ಖಾರ್ವಿ ಮಾತನಾಡಿದರು. 

ವೇದಿಕೆಯಲ್ಲಿ ರಾಜ್ಯ ಸಂಘಟನಾ ಆಯುಕ್ತ ಬಿ. ಕರಿಸಿದ್ಧಪ್ಪ, ಶಿಕ್ಷಕ ಪ್ರಕಾಶ ಶಿರಾಲಿ, ಸ್ನೇಹ ಶಾಲೆಯ ಮುಖ್ಯಸ್ಥೆ ಮಾಲತಿ ಉದ್ಯಾವರ್, ತಾಲೂಕಾ ಕಾರ್ಯದರ್ಶಿ ವೆಂಕಟೇಶ ಗುಬ್ಬಿ, ಅಂಜುಮಾನ್ ಸಂಸ್ಥೆಯ ಖಲೀಮುಲ್ಲಾ, ಸಮಾಜ ಸೇವಕ ನಜೀರ್ ಕಾಶಿಮಜಿ ಮುಂತಾದವರು ಉಪಸ್ಥಿತರಿದ್ದರು. 
ಜಿಲ್ಲಾ ಕಾರ್ಯದರ್ಶಿ ಬಿ.ಡಿ. ಫೆರ್ನಾಂಡೀಸ್ ಸ್ವಾಗತಿಸಿದರು. ರಾಜ್ಯ ಸಂಘಟನಾ ಆಯುಕ್ತ ಬಿ. ಕರಿಸಿದ್ದಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.  ಗೌತಮಿ ಶೇಟ್ ಮುರ್ಡೇಶ್ವರ, ಚೆನ್ನವೀರಪ್ಪ ಹೊಸ್ಮನಿ ನಿರ್ವಹಿಸಿದರು. ಶಿವಾನಂದ ಭಟ್ಟ ವಂದಿಸಿದರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...