ಭಟ್ಕಳ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಸರಕಾರಿ ಫ್ರೌಢ ಶಾಲೆ, ಮುಂಡಳ್ಳಿಯಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ನಾರಾಯಣ ನಾಯ್ಕ ಪರಿಸರದ ಕುರಿತು ನಮ್ಮಲ್ಲಿರಬೇಕಾದ ಜಾಗೃತಿ, ಕಾಳಜಿಯ ಕುರಿತು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಂಡಳ್ಳಿ ಸರಕಾರಿ ಫ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಡಿ.ಟಿ.ಗೌಡ ವಹಿಸಿದ್ದರು.
ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಸಾಹಿತಿ ಉಮೇಶ ಮುಂಡಳ್ಳಿ ಮಾತನಾಡಿ ಪರಿಸರದ ಬಗ್ಗೆ ಮೊದಲು ಪ್ರೀತಿ ಹುಟ್ಟಬೇಕು, ಅದು ಮೊಗ್ಗಾಗಿ ಅರಳಿದಾಗ ಮಾತ್ರ ಪರಿಸರ ಪ್ರೇಮ ಬೆಳೆಸಿಕೊಳ್ಳಬಹುದು. ಅದನ್ನು ಮೊಗ್ಗಾಗಿರುವಾಗಲೇ ಚಿವುಟಿ ಹಾಕಿದರೆ ಪರಿಸರದ ಕುರಿತು ಕಾಳಜಿ ಬರಲು ಸಾಧ್ಯವಿಲ್ಲ. ಚಿಕ್ಕ ಮಕ್ಕಳಿರುವಾಗಲೇ ದೇಶ, ರಾಜ್ಯ, ನಮ್ಮೂರು, ನಮ್ಮ ಜನ, ನನ್ನ ಪರಿಸರ ಎನ್ನುವ ಪ್ರೀತಿ ಮಕ್ಕಳಲ್ಲಿ ಹುಟ್ಟಬೇಕಾದರೆ ಸಂಸ್ಕಾರಯುತ ಶಿಕ್ಷಣ ಕೂಡ ಅಗತ್ಯ ಎಂದರು.
ಇನ್ನೋರ್ವ ಅತಿಥಿ ಶಿಕ್ಷಕ ಗಣೇಶ ಹೆಗಡೆ ಮಾತನಾಡಿ ಪರಿಸದ ಮಹತ್ವ ಅರಿತು, ಅವುಗಳಿಗೆ ತಕ್ಕಂತೆ ನಾವು ಬದಲಾಗಬೇಕೆ ಹೊರತು. ನಾವು ನಮಗೆ ಬೇಕಾದ ಹಾಗೆ ಪರಿಸರವನ್ನು ಬದಲಾಯಿಸಿದರೆ ವಿಪತ್ತು ಮೈಮೇಲೆ ಎಳೆದುಕೊಂಡಂತೆಯೇ ಎಂದರು.
ವೇದಿಕೆಯಲ್ಲಿ ಯೋಜನೆಯ ಮುಂಡಳ್ಳಿ ಒಕ್ಕೂಟದ ಅಧ್ಯಕ್ಷೆ ರಾಧಾ ಮೊಗೇರ, ಪಂಚಾಯತ್ ಸದಸ್ಯೆ ಮಂಜಮ್ಮ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.
ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ವಲಯ ಮೇಲ್ವಿಚಾರಕ ಭರತ್ ಸ್ವಾಗತಿಸಿ, ಪ್ರಾಸ್ತಾವಿಕವಾಗ ಮಾತನಾಡಿದರು. ಶಿಕ್ಷಕ ಚೆನ್ನವೀರಪ್ಪ ಹೊಸ್ಮನಿ ನಿರ್ವಹಿಸಿದರು. ಮಾಲತಿ ನಾಯ್ಕ ವಂದಿಸಿದರು.
ಕಾರ್ಯಕ್ರಮಕ್ಕೂ ಮೊದಲು ಶಾಲಾ ಆವರಣದಲ್ಲಿ ಹಲವು ಜಾತಿಯ ಗಿಡಗಳನ್ನು ನೆಡುವ ಮೂಲಕ ವನಮಹೋತ್ಸವ ಆಚರಿಸಲಾಯಿತು.