ಹಾಸನ: ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಅಕ್ರಂ ಪಾಷ ಅವರು ಇಂದು ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆ ನಡೆಸಿ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿ ಹಾಗೂ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮನವರಿಕೆ ಮಾಡಿಕೊಟ್ಟರು.
ರಾಜಕೀಯ ಪಕ್ಷಗಳು ಪ್ರಚಾರ ಕಾರ್ಯದ ವೇಳೆ ಅನುಸರಿಸಬೇಕಾದ ವಿಷಯಗಳು - ಪ್ರಚಾರ ಸಾಮಾಗ್ರಿಗಳ ಮುದ್ರಣ ಮಾಡುವ ಮುನ್ನ ಹಾಗೂ ಸಭೆ, ಸಮಾರಂಭಗಳ ದಿನಾಂಕ ಸಮಯದ ಬಗ್ಗೆ ಅನುಮತಿ ಪಡೆಯುವ ಕುರಿತು ಜಿಲ್ಲಾ ಚುನಾವಣಾಧಿಕಾರಿ ಹೇಳಿದರು.
ಹಾಸನ ಲೋಕಸಭಾ ಚುನಾವಣೆಯಲ್ಲಿ ಹಾಸನ ಜಿಲ್ಲಾಧಿಕಾರಿಯವರು ಚುನಾವಣಾಧಿಕಾರಿಯಾಗಿದ್ದು 9 ಸಹಾಯಕ ಚುನಾವಣಾಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. 2235 ಮತಗಟ್ಟೆಗಳಿದ್ದು 16,29,000 ಮತದಾರರಿದ್ದಾರೆ. ಹೊಸದಾಗಿ ನೊಂದಾಯಿಸಿಕೊಳ್ಳುವ ಮತದಾರರು ಇದಕ್ಕೆ ಹೆಚ್ಚುವರಿಯಾಗಿ ಸೇರ್ಪಡೆಗೊಳ್ಳಲಿದ್ದಾರೆ ಎಂದು ಅಕ್ರಂ ಪಾಷ ತಿಳಿಸಿದರು.
ರಾಜಕೀಯ ಪಕ್ಷಗಳು ಜಿಲ್ಲಾ ಚುನಾವಣಾಧಿಕಾರಿ ನೀಡುವ ಅಂತಿಮ ಮತದಾರರ ಪಟ್ಟಿಯನ್ನು ಮಾತ್ರ ಇರಿಸಿಕೊಳ್ಳುವುದರಿಂದ ಅನಗತ್ಯ ಗೊಂದಲ ತಪ್ಪುತ್ತದೆ. ಮತದಾರರು ಆದಷ್ಟು ತಮ್ಮ ಬಳಿ ಇರುವ ಚುನಾವಣಾ ಆಯೋಗ ವಿತರಿಸಿರುವ ಭಾವಚಿತ್ರ ಇರುವ ಗುರುತಿನ ಚೀಟಿಯನ್ನೇ ಬಳಸುವುದು ಉತ್ತಮ ಎಂದು ಜಿಲ್ಲಾ ಚುನಾವಣಾಧಿಕಾರಿ ಹೇಳಿದರು.
ಎಲ್ಲಾ ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷಗಳು ಮಾದರಿ ನೀತಿ ಸಂಹಿತೆಯನ್ನು ಅರಿತು ಪಾಲನೆ ಮಾಡಬೇಕು. ಯಾವುದಾದರೂ ಗೊಂದಲ ಅಥವಾ ಅನುಮಾನಗಳಿದ್ದಲ್ಲಿ ಅಧಿಕಾರಿಗಳನ್ನು ಭೇಟಿಯಾಗಿ ಪರಿಶೀಲಿಸಬಹುದು ಅಥವಾ ಚುನಾವಣಾ ಆಯೋಗದ ಅಥವಾ ಸ್ಥಳೀಯ ಚುನಾವಣಾ ವಿಭಾಗದ ವೆಬ್ಸೈಟ್ ನಿಂದಲೂ ಮಾಹಿತಿಯನ್ನು ಪಡೆಯಬಹುದು ಎಂದು ಅವರು ತಿಳಿಸಿದರು.
ವಾಹನ ಹಾಗೂ ಹೆಲಿಕಾಪ್ಟರ್ ಲ್ಯಾಂಡಿಂಗ್ ಅನುಮತಿಗೆ ಸುವಿಧಾ ಆ್ಯಫ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಇದಲ್ಲದೆ ಚುನಾವಣಾ ದೂರುಗಳ ಬಗ್ಗೆ ನಿಗಾವಹಿಸಲು ಸಿ-ವಿಜóನ್ ಕಾರ್ಯ ನಿರ್ವಹಿಸುತ್ತಿದೆ ಎಂದು ಅವರು ವಿವರಿಸಿದರು.
ಚುನಾವಣಾ ಸಹಾಯವಾಣಿ: ಚುನಾವಣಾ ವಿಷಯಗಳಿಗೆ ಸಂಬಂಧಿಸಿದಂತೆ 1950 ಸಹಾಯವಾಣಿಗೆ ಕರೆಮಾಡಬಹುದಾಗಿದೆ. ಇದಲ್ಲದೆ 261111 ದೂರವಾಣಿ ಸಂಖ್ಯೆಗೂ ಕರೆಮಾಡಿ ಮಾಹಿತಿ ನೀಡಬಹುದಾಗಿದೆ ಎಂದು ಅಕ್ರಂ ಪಾಷ ತಿಳಿಸಿದರು.
ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರೂ ಆಗಿರುವ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ.ಎನ್.ವಿಜಯ್ಪ್ರಕಾಶ್, ಅಪರ ಜಿಲ್ಲಾಧಿಕಾರಿ ಎಂ.ಎಲ್.ವೈಶಾಲಿ, ಚುನಾವಣಾ ತಹಸೀಲ್ದಾರ್ ನಾಗಭೂಷಣ್ ಹಾಗೂ ವಿವಿಧ ರಾಜಕೀಯ ಪಕ್ಷದ ಪ್ರತಿನಿಧಿಗಳು ಸೇರಿದಂತೆ ಮತ್ತಿತರರು ಹಾಜರಿದ್ದರು.