ಶ್ರೀನಿವಾಸಪುರ: ಹಾಲು ಉತ್ಪಾದಕರ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಕಾನೂನು ತಿದ್ದುಪಡಿ ಅರಿತು ಸಹಕಾರ ಸಂಘಗಳ ಚುನಾವಣೆ ನಡೆಸಬೇಕು ಎಂದು ಕೋಮುಲ್ ನಿರ್ದೇಶಕ ಬೈರಾರೆಡ್ಡಿ ಹೇಳಿದರು.
ಪಟ್ಟಣದ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಉಪ ಕಚೇರಿಯ ಸಭಾಂಗಣದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಬುಧವಾರ ಏರ್ಪಡಿಸಿದ್ದ ಚುನಾವಣೆ ಹಾಗೂ ಕಾನೂನು ತಿದ್ದುಪಡಿ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಯಾವುದೇ ಗೊಂದಲಕ್ಕೆ ಅವಕಾಶ ನೀಡದಂತೆ ಸಹಕಾರ ಸಂಘಗಳ ಚುನಾವಣೆ ನಡೆಸಬೇಕು ಎಂದು ಹೇಳಿದರು.
ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಂ.ವೆಂಕಟಸ್ವಾಮಿ ಮಾತನಾಡಿ, ಸಹಕಾರ ಕ್ಷೇತ್ರದಲ್ಲಿ ನಡೆಯುವ ಚುನಾವಣೆಯಲ್ಲಿ ರಾಜಕೀಯ ಬೆರೆಸಬಾರದು. ವಿದ್ಯಾವಂತರು ಈ ಬಗ್ಗೆ ಜನರಿಗೆ ತಿಳುವಳಿಕೆ ನೀಡಬೇಕು. ಶಾಂತಿಯುತವಾಗಿ ಚುನಾವಣೆ ನಡೆಯಲು ಸಹಕರಿಸಬೇಕು. ಸಹಕಾರ ಕ್ಷೇತ್ರದ ಮಹತ್ವ ದೊಡ್ಡದು. ಅದು ಹಾಗೆಯೇ ಮುಂದುವರಿಯಬೇಕು. ಯಾವುದೇ ಕಾರಣಕ್ಕೂ ಘನತೆ ಗೌರವಕ್ಕೆ ಧಕ್ಕೆ ಉಂಟಾಗದಂತೆ ಎಚ್ಚರವಹಿಸಬೇಕು ಎಂದು ಹೇಳಿದರು.
ಬಂಗಾರಪೇಟೆ ಟಿಎಪಿಸಿಎಎಸ್್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಜಗದೀಶ್ ಸಹಕಾರ ಸಂಘಗಳಲ್ಲಿ ಚುನಾವಣೆ ನಡೆಸುವ ಬಗ್ಗೆ ಹಾಗೂ ಇತ್ತೀಚಿನ ಕಾನೂನು ತಿದ್ದುಪಡಿಗಳ ಬಗ್ಗೆ ಮಾತನಾಡಿದರು.
ಕ್ಯಾಂಪ್ ಕಚೇರಿ ಉಪ ವ್ಯವಸ್ಥಾಪಕ ಬಿ.ಶಿವರಾಜ್ ರಾಸುಗಳ ನಿರ್ವಹಣೆ ಹಾಗೂ ಶುದ್ಧ ಹಾಲು ಉತ್ಪಾದನೆ ಕುರಿತು ಉಪನ್ಯಾಸ ನೀಡಿದರು.
ಸಹಕಾರ ಕ್ಷೇತ್ರದ ಮುಖಂಡರಾದ ಕೆ.ಎಂ.ನಾಗರಾಜ್, ಬಿ.ವಿ.ವೆಂಕಟರೆಡ್ಡಿ, ಡಿ.ವಿ.ಅಶೋಕ್, ಎಸ್.ವೈ.ಮುನಿಸ್ವಾಮಿ, ಎನ್.ವೆಂಕಟೇಶ್, ಸಿ.ವಿ.ನಾಗರಾಜಗೌಡ, ಬಿ.ಆರ್.ನಾಗೇಶಗೌಡ, ಬಿ.ಆರ್.ಶಿವಶಂಕರ್, ನಾರಾಯಣಪ್ಪ, ನರಸಿಂಹಯ್ಯ ಇದ್ದರು.