ಶಿವಮೊಗ್ಗ : ಶಿವಮೊಗ್ಗ ನಗರವನ್ನು ಮಹಾನಗರಪಾಲಿಕೆ ಸೇರಿದಂತೆ ಸ್ಥಳೀಯ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಹಾಗೂ ಜನರ ಆಸೆ-ನಿರೀಕ್ಷೆಗಳಿಗೆ ತಕ್ಕಂತೆ ಪರಿಸರ ಸ್ನೇಹಿ ಹಸಿರು ಶಿವಮೊಗ್ಗವನ್ನು ನಿರ್ಮಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುವುದಾಗಿ ಗ್ರಾಮೀಣಾಭಿವೃದ್ಧಿ, ಪಂಚಾಯತ್ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಹೇಳಿದರು.
ಅವರು ಮಂಗಳವಾರ ನಗರದ ಹೊರವಲಯದಲ್ಲಿರುವ ಈಶ್ವರವನಕ್ಕೆ ಭೇಟಿ ನೀಡಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಶಿವಮೊಗ್ಗ ಮಹಾನಗರಪಾಲಿಕೆ ವ್ಯಾಪ್ತಿಯ 7-8ಸ್ಥಳಗಳಲ್ಲಿ 8600ಗಿಡಗಳನ್ನು ನೆಡಲು ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ. ಇನ್ನೂ ಕೆಲವೇ ದಿನಗಳಲ್ಲಿ ಕಾಮಗಾರಿ ಆರಂಭಗೊಳ್ಳಲಿದೆ ಎಂದವರು ನುಡಿದರು.
13ಕಿ.ಮೀ. ಕರ್ನಾಟಕ ನೀರಾವರಿ ನಿಗಮದ ವ್ಯಾಪ್ತಿಗೊಳಪಡುವ ತುಂಗಾ ಚಾನಲ್ನ 13ಕಿ.ಮೀ. ಪ್ರದೇಶದಲ್ಲಿ ಚಾನಲ್ನ ಇಕ್ಕೆಲಗಳಲ್ಲಿ ಗಿಡಗಳನ್ನು ನೆಟ್ಟು ಹಸಿರು ಪರಿಸರ ನಿರ್ಮಾಣ, ಭೂ ಒತ್ತುವರಿ ನಿಯಂತ್ರಣ, ಪ್ರದೇಶ ವ್ಯರ್ಥವಾಗದೇ ಸದ್ಭಳಕೆಯಾಗುವಂತೆ ನೋಡಿಕೊಳ್ಳಲಾಗುವುದು ಎಂದ ಅವರು ಈ ಸಂಬಂಧ ಉನ್ನತ ಮಟ್ಟದ ಅಧಿಕಾರಿಗಳು ಹಾಗೂ ನಗರಾಭಿವೃದ್ಧಿ ಸಚಿವರೊಂದಿಗೆ ಸಮಾಲೋಚನೆ ನಡೆಸಿರುವುದಾಗಿ ತಿಳಿಸಿದರು.
ಈ ಯೋಜನೆಯ ವ್ಯವಸ್ಥಿತ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಮಹಾನಗರಪಾಲಿಕೆಯ ಆಯುಕ್ತ ಇಲಾಖೆಯ ಮುಖ್ಯಸ್ಥರನ್ನು ಬೆಂಗಳೂರಿನಲ್ಲಿ ಸಂಪರ್ಕಿಸಿ ಮಾಹಿತಿ ಒದಗಿಸಿದ್ದಾರೆ. ರೂ.12.50ಕೋಟಿ ವೆಚ್ಚದಲ್ಲಿ ಕ್ರಿಯಾಯೋಜನೆಯನ್ನು ಸಿದ್ಧಪಡಿಸಿ, ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ 70,000ಗಿಡಗಳನ್ನು ನೆಡುವ ಉದ್ಧೇಶ ಹೊಂದಲಾಗಿದೆ. ಮುಂದಿನ ದಿನಗಳಲ್ಲಿ ಮಲೆನಾಡನ್ನು ಮರುಸ್ಥಾಪಿಸಲು ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆಯೂ ಯೋಜನೆ ರೂಪಿಸಿ ಅನುಷ್ಠಾನಗೊಳಿಸಲಾಗುವುದು ಎಂದವರು ನುಡಿದರು.
ಈಗಾಗಲೇ ಪಾಲಿಕೆ ವತಿಯಿಂದ ಸಾರ್ವಜನಿಕ ಸಹಭಾಗಿತ್ವದಲ್ಲಿ 25ಮೆ.ವ್ಯಾಟ್ ಸಾಮಥ್ರ್ಯದ ಸೋಲಾರ್ಪಾರ್ಕ್ ನಿರ್ಮಿಸಲು ಉದ್ದೇಶಿಸಲಾಗಿದ್ದು, ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದ ಅವರು ಗ್ರಾಮೀಣ ಪ್ರದೇಶಗಳಲ್ಲಿನ ಗ್ರಾಮ ಪಂಚಾಯಿತಿ ಕಾರ್ಯಾಲಯಗಳಿಗೆ ಸೋಲಾರ್ ವಿದ್ಯುತ್ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ಇದರಿಂದಾಗಿ ದಿನದ 24ಗಂಟೆಯೂ ವಿದ್ಯುತ್ ಸೌಲಭ್ಯ ದೊರೆತು ಅಲ್ಲಿನ ಜನರ ಅಗತ್ಯಗಳಿಗೆ, ದಾಖಲೆಗಳನ್ನು ತ್ವರಿತಗತಿಯಲ್ಲಿ ಪಡೆದುಕೊಳ್ಳಲು ಅನುಕೂಲವಾಗಲಿದೆ. ಗ್ರಾಮೀಣ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸುವ ಬಗ್ಗೆ ಈಗಾಗಲೆ ಕ್ರಮ ವಹಿಸಲಾಗಿದೆ ಎಂದವರು ನುಡಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ನಿವೃತ್ತ ಉಪನ್ಯಾಸಕ ಬಿ.ಎಂ.ಕುಮಾರಸ್ವಾಮಿ ಅವರು ಮಾತನಾಡಿ, ಮಲೆನಾಡಿನ ಹೆಬ್ಬಾಗಿಲೆನಿಸಿಕೊಂಡಿದ್ದ ಶಿವಮೊಗ್ಗ ತನ್ನ ನೈಜತೆಯನ್ನು ಕಳೆದುಕೊಂಡು ಬಯಲುಸೀಮೆಯಾಗಿ ಪರಿವರ್ತನೆಗೊಳ್ಳುತ್ತಿದೆ. ತಾಪಮಾನ ನಿರೀಕ್ಷೆಗೆ ಮೀರಿರುವುದು ಇದಕ್ಕೆ ಉದಾಹರಣೆಯಾಗಿದೆ. ಈ ಶಿವಮೊಗ್ಗವನ್ನು ಮೊದಲಿನಂತೆ ಪರಿಸರ ಸ್ನೇಹಿ ಶಿವಮೊಗ್ಗ ನಿರ್ಮಾಣಕ್ಕೆ ಯತ್ನಿಸುವ ತುರ್ತು ಅಗತ್ಯವಿದೆ ಎಂದವರು ನುಡಿದರು.
ನಗರದ ರಾಗಿಗುಡ್ಡವನ್ನು ಜೈವಿಕ ವನವನ್ನಾಗಿ ನಿರ್ಮಿಸಿ ನಗರವಾಸಿಗಳಿಗೆ ಪ್ರವಾಸಿ ತಾಣವನ್ನಾಗಿ ರೂಪಿಸುವ ಅಗತ್ಯವಿದೆ. ಇಲ್ಲಿನ ಪರಿಸರದಲ್ಲಿ ಬೀಳುವ ಮಳೆಯಿಂದ ಅಂತರ್ಜಲ ಹೆಚ್ಚಿಸಬೇಕು. ಅಲ್ಲದೆ ಪಶುಪಕ್ಷಿಗಳ ತಾಣವಾಗಿ ಅಭಿವೃದ್ದಿಪಡಿಸಬೇಕು ಎಂದವರು ನುಡಿದರು.
ಈ ಸಂದರ್ಭದಲ್ಲಿ ಮಹಾನಗರಪಾಲಿಕೆ ಆಯುಕ್ತ ಚಿದಾನಂದ ವಟಾರೆ, ಈಶ್ವರವನ ನಿರ್ಮಾತೃ ಅಶೋಕ್ಕುಮಾರ್, ಶಿವಮೊಗ್ಗನಂದನ್ ಸೇರಿದಂತೆ ಅನೇಕ ಪರಿಸರಾಸಕ್ತರು ಉಪಸ್ಥಿತರಿದ್ದರು.