ದುಬೈ: ಮುರ್ಡೇಶ್ವರ ಎಜುಕೇಶನ್ ಸೊಸೈಟಿ - 2017 ಸಭೆ

Source: Arshad Hussain | By Arshad Koppa | Published on 3rd March 2017, 5:35 PM | Gulf News | Editorial |

ದುಬೈ, ಮಾ ೨: ಮುರ್ಡೇಶ್ವರದಲ್ಲಿ ಹಿಂದುಳಿದ ವರ್ಗದವರಿಗೆ, ವಿಶೇಷವಾಗಿ ಹೆಣ್ಣುಮಕ್ಕಳಿಗೆ ಶಿಕ್ಷಣವನ್ನು ನೀಡಲು ನೆರವಾಗಲು ಸ್ಥಾಪಿಸಲಾದ ಎಂಇಎಸ್ ಅಥವಾ ಮುರ್ಡೇಶ್ವರ ಎಜುಕೇಶನ್ ಸೊಸೈಟಿಯ ವಾರ್ಷಿಕ ಸಭೆಯನ್ನು ಕಳೆದ ವಾರ ದುಬೈಯಲ್ಲಿ ನಡೆಸಲಾಯಿತು.

ಹಾಫಿ ಮಾಆವಿಯಾರವರು ಪವಿತ್ರ ಕುರಾನ್ ನ ಕೆಲವು ವಾಕ್ಯಗಳನ್ನು ವಾಚಿಸುವ ಮೂಲಕ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಕೋಟೇಶ್ವರ್ ಅಬ್ಧುಲ್ ಘನಿಯವರು ಕಾರ್ಯಕ್ರಮವನ್ನು ನಿರೂಪಿಸಿದರು. 

ವೇದಿಕೆಯಲ್ಲಿ ಮುರ್ಡೇಶ್ವರ ನಯಾವತ್ ಕಮ್ಯೂನಿಟಿ ಅಧ್ಯಕ್ಷರಾದ ಮೌಲಾನಾ ಅಬ್ದುಲ್ ಖಾಲಿಖ್, ಎಂಇಎಸ್ ಅಧ್ಯಕ್ಷರಾದ ಜಾಹಿದ್ ಅಹ್ಮದ್ ಹಾಗಲವಾಡಿ, ಉಪಾಧ್ಯಕ್ಷರಾದ ಅಬ್ದುಲ್ ಮತೀನ್ ಹಾಗಲವಾಡಿ, ಮುರ್ಡೇಶ್ವರ ನಯಾವತ್ ಕಮ್ಯೂನಿಟಿ ನಿಕಟಪೂರ್ವ ಅಧ್ಯಕ್ಷರಾದ ಜಿದ್ದಾ ಅಬ್ದುಲ್ ರಹಮಾನ್, ಡಾ. ಎಜಾಜ್ ಹಾಗೂ ಡಾ. ಹಾಜಿಅಮೀನ್ ಸಾಅದುಲ್ಲಾ ರವರು ಉಪಸ್ಥಿತರಿದ್ದರು.

ಅತೀಕ್ ಕೊಚೆಬಾಪುರವರ ಉರ್ದು ಕವನದೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು.

ಮುರ್ಡೇಶ್ವರ ನಯಾವತ್ ಕಮ್ಯೂನಿಟಿಯ ಪ್ರಧಾನ ಕಾರ್ಯದರ್ಶಿಯಾದ ಶಿಂಗಟಿ ನದೀಂ ರವರು ಅತಿಥಿಗಳನ್ನು ಹಾಗೂ ಸಭಿಕರನ್ನು ಸ್ವಾಗತಿಸಿದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಮಾತನಾಡಿದ ಮನ್ನಾ ಜಿಯಾವುಲ್ ಹಖ್ ರವರು ಇಂದು ನಮ್ಮಲ್ಲಿ ಹೆಚ್ಚು ವಿದ್ಯಾವಂತರಿದ್ದೇವೆ. ಆದರೆ ಊರಿನಲ್ಲಿ ಇಂದಿಗೂ ಶಿಕ್ಷಣವಂಚಿತರು ಇದ್ದು ಅವರಿಗೆ ಹೆಚ್ಚಿನ ನೆರವು ನೀಡುವಲ್ಲಿ ನಾವೆಲ್ಲಾ ಒಂದಾಗಿ ಸಮಾಲೋಚಿಸಿ ಸೂಕ್ತ ನಿರ್ಧಾರಗಳ ಮೂಲಕ ನೆರವನ್ನು ಒದಗಿಸಬೇಕು ಎಂದು ಕರೆ ನೀಡಿದರು.

ಬಳಿಕ ಮಾತನಾಡಿದ ಅರ್ಶದ್ ಹುಸೇನ್ ರವರು ಮಕ್ಕಳಿಗೆ ಯಾವ ವಿಷಯ ಇಷ್ಟವೋ ಅದೇ ವಿಷಯದಲ್ಲಿ ಪರಿಣಿತಿ ಸಾಧಿಸಲು ಪಾಲಕರು ನೆರವು ನೀಡಬೇಕೇ ವಿನಃ ತಮ್ಮ ಆಯ್ಕೆಯ ವಿಷಯವನ್ನೇ ತಮ್ಮ ಮಕ್ಕಳು ಕಲಿಯಬೇಕೆಂಬ ಒತ್ತಡ ಹೇರಬಾರದು ಎಂದು ಸಲಹೆ ನೀಡಿದರು. 

ನಂತರ ಮಾತನಾಡಿದ ಡಾ. ಎಜಾಜ್ ಇಂದಿನ ಶಿಕ್ಷಣ ವ್ಯಾಪಾರವಾಗಿದ್ದು ವಿವೇಕವನ್ನು ಕಲಿಸುವುದಿಲ್ಲ. ಆದ್ದರಿಂದ ಶಿಕ್ಷಣದೊಂದಿಗೆ ಲೌಕಿಕ ಜ್ಞಾನವನ್ನೂ ಮಕ್ಕಳು ಪಡೆಯುವುದು ಅವಶ್ಯಕ. ಇಂದಿನ ಮಕ್ಕಳಿಗೆ ಅಪಾರವಾದ ಆಯ್ಕೆಗಳಿದ್ದು ಇದರಲ್ಲಿ ಸರಿಯಾದುದನ್ನು ಆಯ್ಕೆ ಮಾಡಿಕೊಳ್ಳಲು ಪೋಷಕರು ನೆರವಾಗಬೇಕು ಎಂದು ತಿಳಿಸಿದರು.

ನಂತರ ಮಾತನಾಡಿದ ಹಾಗಲವಾಡಿ ಮತೀನ್ ರವರು ಶಿಕ್ಷಣ ನಿಟ್ಟಿನಲ್ಲಿ ದಿವಂಗತ ಮನ್ನಾ ಮೊಹಮ್ಮದ್ ಗೌಸ್ ರವರ ಕೊಡುಗೆಯನ್ನು ಪ್ರಸ್ತಾಪಿಸಿ ಯು.ಎಇ.ಇಂದ ಪ್ರಾರಂಭವಾದ ಈ ಅಭಿಯಾನಕ್ಕೆ ಬಳಿಕ ಸೌದಿ ಬಹರೇನ್ ಕುವೈಟ್ ಗಳಿಂದಲೂ ಬೆಂಬಲ ವ್ಯಕ್ತವಾಗಿದ್ದ ಇತಿಹಾಸವನ್ನು ವಿವರಿಸಿದರು. ಪ್ರಸ್ತುತ ಎಲ್ಲೆಡೆಯಿಂದಲೂ ನೆರವು ಹರಿದುಬರುತ್ತಿದ್ದು ಈ ನೆರವು ಧಾರ್ಮಿಕ ಶಿಕ್ಷಣಕ್ಕೂ ಸಿಗುವಂತಾಗಬೇಕು ಎಂದು ತಿಳಿಸಿದರು.

ಬಳಿಕ ಮಾತನಾಡಿದ ಡಾ. ಸಾಅದುಲ್ಲಾರವರು ಇದುವರೆಗಿನ ಸಮಿತಿಯ ಸದಸ್ಯರ ಕಾರ್ಯವೈಖರಿಯನ್ನು ಶ್ಲಾಘಿಸಿ ಇದುವರೆಗೆ ಸಂಗ್ರಹಿಸಿದ್ದ ಮೊತ್ತವನ್ನು ನ್ಯಾಯಯುತವಾಗಿ ಪಾವತಿಸಿದ ಬಗ್ಗೆ ವಿವರ ನೀಡಿದರು. ಆದರೆ ಶಿಕ್ಷಣಕ್ಕಾಗಿ ನಿರ್ಮಿಸಲಾಗುತ್ತಿರುವ ಕಟ್ಟಡ ಮುಕ್ಕಾಲು ವಾಸಿ ಮುಗಿದು ಈಗ ಹಣದ ಕೊರತೆಯಿಂದ ನಿಂತಿದ್ದು ಈ ಬಗ್ಗೆ ಗಮನ ಹರಿಸಲು ವಿನಂತಿಸಿಕೊಂಡರು. ಊರಿನಲ್ಲಿ ನವಾಯತಿ ಸಮುದಾಯದ ಮಕ್ಕಳು ಕಡಿಮೆಯಾಗಿರುವುದು ಚಿಂತಾಜನಕ ವಿಷಯ, ಈ ಬಗ್ಗೆ ವಿಮರ್ಶೆ ನಡೆಸಬೇಕು ಎಂದು ಕರೆ ನೀಡಿದರು.

 

ನಂತರ ಮಾತನಾಡಿದ ಮನ್ನಾ ಮೊಹಮ್ಮದ್ ಸಾಬಿರ್ ರವರು ಎಂಇಎಸ್ ಪ್ರಾರಂಭವಾಗಿ ಎಂಭತ್ತೈದು ವರ್ಷಗಳು ಕಳೆದಿವೆ. ಈಗ ಪ್ರಸ್ತುತ ಸಮಯದಲ್ಲಿ ಶಿಕ್ಷಣದಲ್ಲಿ ಅಪಾರವಾದ ಆಯ್ಕೆ ಲಭ್ಯವಿದ್ದು ಈ ಮಾಹಿತಿಗಳನ್ನು ನೀಡಿ ಮಾರ್ಗದರ್ಶನ ನೀಡುವ ಬಗ್ಗೆ ಎರಡು ದಿನಗಳ ವಿಚಾರಸಂಕಿರಣ ಕಾರ್ಯಕ್ರಮವನ್ನು ಆಯೋಜಿಸಬೇಕು ಎಂದು ಕರೆ ನೀಡಿದರು. ಇಂದು ಯು.ಎಇ.ಗೆ ಬರುತ್ತಿರುವ ಉದ್ಯೋಗಾಕಾಂಕ್ಷಿಗಳಿಗೆ ಕಿವಿಮಾತನ್ನು ಹೇಳಿದ ಅವರು ಇಲ್ಲಿಯೂ ನೂರಾರು ಉದ್ಯೋಗಗಳಿದ್ದರೂ ಕೇವಲ ಪದವಿ ಸಾಕಾಗುವುದಿಲ್ಲ, ಬದಲಿಗೆ ಒಂದು ವಿಷಯದಲ್ಲಿ ಹೆಚ್ಚಿನ ತರಬೇತಿ ಮತ್ತು ಅನುಭವವನ್ನು ಪಡೆದುಕೊಂಡು ಬಂದರೆ ಉತ್ತಮ ಎಂದು ಸಲಹೆ ನೀಡಿದರು. 
 


ಬಳಿಕ ಮಾತನಾಡಿದ ಧಿಂಡಾ ಅಹ್ಮದ್ ಆಲಿಯವರು 1962ರಲ್ಲಿ ಜನತಾ ವಿದ್ಯಾಲಯ ಪ್ರಾರಂಭವಾದಂದಿನಿಂದ ಇಂದಿನವರೆಗೆ ಮುರ್ಡೇಶ್ವರದಲ್ಲಿ ಶಿಕ್ಷಣದ ಪ್ರಗತಿಯಾದ ಬಗ್ಗೆ ವಿವರ ನೀಡಿದರು. ಪ್ರಸ್ತುತ ಜಿಲ್ಲೆಯಲ್ಲಿಯೇ ಪ್ರಾರಂಭವಾದ ಮೊದಲ ಹೆಣ್ಣುಮಕ್ಕಳ ಪ್ರಥಮದರ್ಜೆ ಕಾಲೇಜು ಉತ್ತಮವಾಗಿ ನಡೆಯುತ್ತಿದ್ದು ಜಿಲ್ಲೆಯ ವಿವಿಧ ಕಡೆಗಳಿಂದ ವಿದ್ಯಾರ್ಥಿನಿಯರು ಶಿಕ್ಷಣ ಪಡೆಯುತ್ತಿದ್ದಾರೆ. ಇದಕ್ಕಾಗಿ ಕಟ್ಟಲಾಗುತ್ತಿರುವ ಕಟ್ಟಡ ಅಪೂರ್ಣವಾಗಿದ್ದು ಇದನ್ನು ಪೂರ್ಣಗೊಳಿಸಲು ನೆರವಾಗಬೇಕು ಎಂದು ಮನವಿ ಮಾಡಿಕೊಂಡರು. 

ನಂತರ ಮಾತನಾಡಿದ ಜಿದ್ದಾ ಅಬ್ದುಲ್ ರಹಮಾನ್ ರವರು ಈ ಜಗತ್ತಿನಲ್ಲಿ ಯಶಸ್ಸು ಬೇಕೆಂದರೆ ಶಿಕ್ಷಣ ಅಗತ್ಯವಾಗಿ ಬೇಕು. ಅಲ್ಲದೇ ನಮ್ಮ ಮರಣಾನಂತರದ ಜೀವನಕ್ಕಾಗಿ ಇಂದಿನಿಂದಲೇ ತಯಾರಿ ಮಾಡಬೇಕು, ಪ್ರವಾದಿ ಮೊಹಮ್ಮದ್ ರವರು ಜಗತ್ತಿನ ಅತ್ಯುತ್ತಮ ಮತ್ತು ಅಂತಿಮ ನಾಯಕರಾಗಿದ್ದು ಅವರ ಆದರ್ಶಗಳನ್ನು ಪಾಲಿಸಬೇಕು ಎಂದು ಕರೆ ನೀಡಿದರು. ಮಕ್ಕಳಿಗೆ ಶಾಲಾ ಶಿಕ್ಷಣದ ಜೊತೆಗೇ ದೀನೀ ಶಿಕ್ಷಣವೂ ಅಗತ್ಯವಾಗಿದ್ದು ಜೀವನದ ನಾಗಾಲೋಟದಲ್ಲಿ ಮಕ್ಕಳು ಧಾರ್ಮಿಕ ಶಿಕ್ಷಣದಿಂದ ಹಿಂದುಳಿಯುತ್ತಾರೆ. ಇದಕ್ಕೆ ಪಾಲಕರೇ ಹೊಣೆಯಾಗುತ್ತಾರೆ. ಮಕ್ಕಳಿಗೆ ಚಿಕ್ಕಂದಿನಲ್ಲಿಯೇ ಧಾರ್ಮಿಕ ಶಿಕ್ಷಣ ನೀಡುವ ಮೂಲಕ ಇಡಿಯ ಜೀವಮಾನ ಈ ಶಿಕ್ಷಣವನ್ನು ಅವರು ಪಾಲಿಸುತ್ತಾರೆ ಎಂದು ತಿಳಿಸಿದರು.

ಬಳಿಕ ಎಂಎನ್ ಸಿ ವತಿಯಿಂದ ಶಿಕ್ಷಣಕ್ಕಾಗಿ ನೆರವು ನೀಡುವಲ್ಲಿ ಹೊಸ ವಾಟ್ಸಪ್ ಗುಂಪಿನ ರಚನೆಯ ಬಗ್ಗೆ ಅತ್ಹರ್ ರಯ್ಯಾನ್ ವಲ್ಕಿಯವರು ಮಾಹಿತಿ ನೀಡಿ ಐವರು ಸದಸ್ಯರ ಸಮಿತಿಯನ್ನು ರಚಿಸಿ ಉದ್ಯೋಗಾಂಕಾಕ್ಷಿಗಳಿಗೆ ಅಗತ್ಯವಿರುವ ನೆರವನ್ನು ನೀಡುವುದಾಗಿ ಘೋಷಿಸಿದರು. 

ಬಳಿಕ ಮಾತನಾಡಿದ ಶಿಂಗಟಿ ನದೀಂ ಹಾಗೂ ಅರ್ಮಾರ್ ಇಮ್ತಿಯಾಜ್ ರವರು ಈ ವಾಟ್ಸಪ್ ಗ್ರೂಪ್ ಬಗ್ಗೆ ಸಲಹೆಗಳನ್ನು ಆಹ್ವಾನಿಸಿದರು. ಇದಕ್ಕೆ ಉತ್ತರವಾಗಿ ಸದಸ್ಯರು ಕೆಲವು ಸಲಹೆಗಳನ್ನು ನೀಡಿದರು
* ಊರಿನಲ್ಲಿ ಉದ್ಯೋಗಕ್ಕೆ ಪೂರಕವಾಗಿ ಅಗತ್ಯವಿರುವ ಕೋರ್ಸುಗಳು ಅಥವಾ ಹೆಚ್ಚಿನ ವಿದ್ಯಾರ್ಹತೆಯ ಬಗ್ಗೆ ವಿವರ ನೀಡುವುದು
* ಅಂಗವಿಕಲ ಮಕ್ಕಳಿಗೂ ಶಿಕ್ಷಣ ನೀಡುವ ನಿಟ್ಟಿನಲ್ಲಿ ಪ್ರಯತ್ನ
* ಧಾರ್ಮಿಕ ಶಿಕ್ಷಣ ಕಾರ್ಯಾಗಾರ
* ಅಲ್ಪವೇತನದ ಅರ್ಹ ಜನರಿಗೆ ಉಮ್ರಾ ಭಾಗ್ಯ ಒದಗಿಸುವುದು
* ವರ್ಷಕ್ಕೊಂದು ಬಾರಿ ಧಾರ್ಮಿಕ ಮಾಹಿತಿ ಕಾರ್ಯಕ್ರಮವನ್ನು ಏರ್ಪಡಿಸುವುದು

 

ಬಳಿಕ ಈ ಸಲಹೆಗಳಿಗೆ ಉತ್ತರಿಸಿದ ಹಾಗಲವಾಡಿ ಮತೀನ್ ರವರು ತಮ್ಮ ಕಡೆಯಿಂದ ಹಲವು ಸಲಹೆಗಳನ್ನು ನೀಡಿದರು
* ಊರಿಗೆ ಬಂದಾಗ ಶಿಕ್ಷಣ ಸಂಸ್ಥೆಗಳನ್ನು ಸಂದರ್ಶಿಸಿ ಪ್ರತ್ಯಕ್ಷವಾಗಿ ಮಾಹಿತಿಗಳನ್ನು ಪಡೆಯಿರಿ
* ಅಪೂರ್ಣವಾದ ಕಟ್ಟಡವನ್ನು ಸಂದರ್ಶಿಸಿ ನೆರವು ನೀಡಲು ಯತ್ನಿಸಿ
* ಎಂಇಎಸ್ ನಲ್ಲಿ ನವಾಯತ್ ಸಮುದಾಯದ ಮಕ್ಕಳ ಕೊರತೆ. ಈ ಕೊರತೆಗೆ ಶಿಕ್ಷಣದಲ್ಲಿ ಸವಲತ್ತುಗಳ ಕೊರತೆಯನ್ನು ಪಾಲಕರು ಬೊಟ್ಟು ಮಾಡುತ್ತಿದ್ದು ಈ ಬಗ್ಗೆ ನೆರವು ನೀಡಲು ಯತ್ನಿಸಿ
* ತಾಂತ್ರಿಕ ಶಿಕ್ಷಣ ಕೇಂದ್ರದಲ್ಲಿ ಸೇವೆ ಸಲ್ಲಿಸುವವರ ಅಗತ್ಯತೆ
*ಅಂಗವಿಕಲ ಮಕ್ಕಳಿಗೆ ಶಿಕ್ಷಣಕ್ಕಾಗಿ ವಿಚಾರ ವಿಮರ್ಶೆ ನಡೆಸಲಾಗುವುದು

 

ಬಳಿಕ ಮಾತನಾಡಿದ ಜಾಹಿದ್ ಹಾಗಲವಾಡಿಯವರು ಇನ್ನೂ ಹಲವಾರು ಮಾಹಿತಿಗಳನ್ನು ನೀಡಿದರು. ಈ ಬಗ್ಗೆ ಸಾರಸ್ವತ ಸಮುದಾಯದ ಒಗ್ಗಟ್ಟನ್ನು ಉಲ್ಲೇಖಿಸಿದ ಅವರು ನಾಲ್ಕು ಜನರಿದ್ದಲ್ಲಿ ಬರುವ ಭಿನ್ನಾಭಿಪ್ರಾಯಗಳನ್ನು ಚರ್ಚಿಸಿ ಒಬ್ಬರಿಗೊಬ್ಬರು ಸಹಕಾರ ನೀಡಿ ಬಾಂಧವ್ಯ ಹೆಚ್ಚಿಸಬೇಕು ಎಂದು ಕರೆ ನೀಡಿದರು.
* ಮಕ್ಕಳಿಗೆ ಉತ್ತಮ ಮಾರ್ಗದರ್ಶನ ನೀಡಲು ಮೊದಲು ಪಾಲಕರು ಶಿಕ್ಷಿತರಾಗಬೇಕು
* ಯಾವುದೇ ಕ್ಷೇತ್ರದಲ್ಲಿ ಅದರದ್ದೇ ಆಗ ಮಹತ್ವವಿದೆ. ಒಂದು ಕ್ಷೇತ್ರದಲ್ಲಿ ಪರಿಣಿತಿ ಸಾಧಿಸಬೇಕು.
* ಹೊಸ ಉದ್ಯೋಗಾಂಕಾಕ್ಷಿಗಳಿಗೆ ನೆರವು ನೀಡುವಲ್ಲಿ ಮಾಹಿತಿ ನೀಡಬೇಕು
* ಎಂಇಎಸ್ ನ ನಿಧಿ ಸಂಗ್ರಹದಲ್ಲಿ ಕಳೆದ ಮೂರು ವರ್ಷಗಳಿಂದ ಸತತವಾಗಿ ಇಳಿಕೆ ಕಂಡುಬರುತ್ತಿದೆ. ಇದು ಹಾಗಾದಂತೆ ಕ್ರಮ ಕೈಗೊಳ್ಳಬೇಕು

ಕಾರ್ಯಕ್ರಮದ ಕಡೆಯಲ್ಲಿ ಮೌಲಾನಾ ಅಬ್ದುಲ್ ಖಾಲಿಖ್ ರವರು ಅತಿಥಿಗಳಿಗೆ ಹಾಗೂ ಸಭಿಕರಿಗೆ ವಂದನಾರ್ಪಣೆ ಸಲ್ಲಿಸಿದರು.


ಮೌಲಾನಾ ಮುದಸ್ಸಿರ್ ರವರ ದುವಾದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

 

Read These Next

ದುಬಾಯಿಯಲ್ಲಿ "ಗಲ್ಫ್ ಕರ್ನಾಟಕೊತ್ಸವ" ಯಶಸ್ವಿ; ಐತಿಹಾಸಿಕ ದಾಖಲೆಗೆ ಸಾಕ್ಷಿಯಾದ ಅನಿವಾಸಿ ಕನ್ನಡಿಗರು

ಕರ್ನಾಟಕದ 21 ಅತ್ಯಂತ್ ಪ್ರಭಾವಶಾಲಿ ವ್ಯಾಪಾರ  ಐಕಾನ್ ಗಳು ಗಲ್ಫ್ ಕರ್ನಾಟಕ ರತ್ನ ಪ್ರಶಸ್ತಿಗಳೊಂದಿಗೆ ಗೌರವಿಸಲಿಟ್ಟರು.

ಮತ್ತೆ ಶರಣರ ತಲೆದಂಡವಾಗದಿರಲಿ

‘‘ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳನಿಕ್ಕುವೆ ತರ್ಕದ ಬೆನ್ನ ಬಾರನೆತ್ತುವೆ, ಆಗಮದ ಮೂಗ ಕುಯ್ಯುವೆ, ನೋಡಯ್ಯ ಮಹಾದಾನಿ ...