ದುಬೈ, ನ ೫: ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಹಾಗೂ ಭಾರತೀಯ ದೂತಾವಾಸದ ಸಹಯೋಗದಲ್ಲಿ ಭಾರತೀಯ ದೂತಾವಾಸ ಕಟ್ಟಡದಲ್ಲಿ ಗಾಂಧಿ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು.
ಭಾರತದ ರಾಯಭಾರಿ ಶ್ರೀ ಎಚ್ ಇ ಅನುರಾಗ್ ಭೂಷಣ್ ರೊಂದಿಗೆ ಹಲವಾರು ಗಣ್ಯರು ಮತ್ತು ಗಾಂಧಿ ಅನುಯಾಯಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು.
ಈ ಸಂದರ್ಭದಲ್ಲಿ ರಾಯಭಾರಿಗಳೊಂದಿಗೆ NMC ಆಸ್ಪತ್ರೆಗಳ ಮುಖ್ಯಸ್ಥ ಡಾ ಬಿಆರ್ ಶೆಟ್ಟಿ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಬೆಂಗಳೂರಿನ ಕಾರ್ಯದರ್ಶಿ ಶ್ರೀ ಶಿವರಾಜ್, ಇತಿಹಾಸಕಾರ ಮತ್ತು ಗಾಂಧಿವಾದಿ ವೇಮಗಲ್ ಸೋಮಶೇಖರ ಸಹಿತ ಹಲವು ಗಣ್ಯರು ಉಪಸ್ಥಿತರಿದ್ದರು.
ಸಾಂಪ್ರದಾಯಿಕ ದೀಪ ಬೆಳಗಿಸುವಿಕೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ರಾಯಭಾರಿಗಳು ಇಂದಿನ ದಿನಗಳಲ್ಲಿ ಗಾಂಧೀಜಿಯವರ ತತ್ವಗಳು ಹಿಂದೆಂದಿಗಿಂತಲೂ ಹೆಚ್ಚು ಅಗತ್ಯವಿದೆ. ಇಂದಿನ ದಿನಗಳಲ್ಲಿ ಮಾನವೀಯತೆ ಮತ್ತು ಭ್ರಾತೃತ್ವದ ಅಸಹನೆ ಹೆಚ್ಚು ಕಂಡುಬರುತ್ತಿದೆ. ವಿಶ್ವದಲ್ಲಿ ತ್ಯಾಗ ಮತ್ತು ಶಾಂತಿಯ ಮೂಲಕ ಕ್ರೌರ್ಯವನ್ನು ಮೆಟ್ಟಿನಿಂತ ರಾಷ್ಟ್ರ ಭಾರತವೊಂದೇ ಆಗಿದೆ. ಸರ್ದಾರ್ ಪಟೇಲ್ ಮತ್ತು ಗಾಂಧೀಜಿಯವರು ಭಾರತೀಯರಲ್ಲಿ ಒಗ್ಗಟ್ಟು ಹಾಗೂ ಸೌಹಾರ್ದತೆಯನ್ನು ಮೂಡಿಸಲು ಪ್ರೇರಣೆ ನೀಡಿದ್ದಾರೆ. ಗಾಂಧೀಜಿಯವರ ಜೀವನ ಪ್ರತಿ ಮನುಷ್ಯನಿಗೂ ಒಂದು ಮಾದರಿಯಾಗಿದ್ದು ಇಡಿಯ ವಿಶ್ವದ ಜನರು ಅನುಸರಿಸಬೇಕಾಗಿದೆ. ಇಂತಹ ಧೀಮಂತ ವ್ಯಕ್ತಿತ್ವವನ್ನು ಬಿಂಬಿಸುವ ಪ್ರತಿಮೆಯನ್ನು ವಿದೇಶದ ನೆಲದಲ್ಲಿ ಸ್ಥಾಪಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಅವರು ದುಬೈಯಲ್ಲಿರುವ ಭಾರತೀಯ ದೂತಾವಾಸದಲ್ಲಿ ಒಂದು ಗಾಂಧಿ ಕೇಂದ್ರವನ್ನು ಸ್ಥಾಪಿಸಲಾಗುವುದು ಇದರಿಂದ ದೂತಾವಾಸಕ್ಕೆ ಭೇಟಿ ನೀಡುವ ಸಂದರ್ಶಕರಿಗೆ ಗಾಂಧಿಯವರ ಮತ್ತು ಅವರ ಮೌಲ್ಯಗಳ ಬಗ್ಗೆ ಅರಿವು ಮೂಡಿಸಲು ಸಾಧ್ಯವಾಗುವುದು ಎಂದು ತಿಳಿಸಿದರು.
ಬಳಿಕ ಮಾತನಾಡಿ ಪದ್ಮಶ್ರೀ ಡಾ ಬಿಆರ್ ಶೆಟ್ಟಿ ಯವರು ದುಬೈ ದೂತಾವಾಸದಲ್ಲಿ ಮಹಾತ್ಮ ಗಾಂಧಿ ಪ್ರತಿಮೆಯ ಅನಾವರಣದ ಬಗ್ಗೆ ತನ್ನ ಸಂತೋಷವನ್ನು ವ್ಯಕ್ತಪಡಿಸಿದರು. ನಮ್ಮ ಪ್ರಧಾನಿಯವರಾದ ಶ್ರೀ ಮೋದಿಯವರು ಜಾಗತಿಕ ದೇಶಗಳಿಗೆ ಭೇಟಿ ಕೊಡುತ್ತಿದ್ದ ಸಮಯದಲ್ಲಿ ಜಗತ್ತಿಗೇ ಗಾಂಧಿಯವರ ಮೌಲ್ಯವನ್ನು ಪಸರಿಸುತ್ತಿದ್ದಾರೆ ಎಂದು ತಿಳಿಸಿದರು ಇದೇ ಸಂದರ್ಭದಲ್ಲಿ ಅವರು ಅಬುಧಾಬಿಯ ಭಾರತೀಯ ಶಾಲೆಯಲ್ಲಿ ಮತ್ತು ಇಂಡಿಯನ್ ಮತ್ತು ಸೋಶಿಯಲ್ ಸೆಂಟರ್ ಕೇಂದ್ರದಲ್ಲಿಯೂ ಗಾಂಧಿ ಪ್ರತಿಮೆಗಳನ್ನು ಸ್ಥಾಪಿಸಲು ಚಿಂತನೆ ನಡೆಸಲಾಗುವುದು ಎಂದು ತಿಳಿಸಿದರು.
ದೀಪಕ್ ಸೋಮಶೇಖರ ವಂದನಾರ್ಪಣೆ ಸಲ್ಲಿಸಿದರು. ವಂದೇ ಮಾತರಂ ಹಾಡುವ ಮೂಲಕ ಕಾರ್ಯಕ್ರಮ ಮುಕ್ತಾಯಗೊಂಡಿತು.