ಭಟ್ಕಳ: ಮುರುಡೇಶ್ವರ ಸಮುದ್ರದಲ್ಲಿ ನೀರುಪಾಲಾಗುವ ಯುವಕನ ರಕ್ಷಣೆ
ಭಟ್ಕಳ: ಪ್ರವಾಸಕ್ಕೆಂದು ಕುಟುಂಬ ಸದಸ್ಯರೊಂದಿಗೆ ಮುರುಡೇಶ್ವರಕ್ಕೆ ಬಂದು, ಸಮುದ್ರದಲ್ಲಿ ಈಜಲು ತೆರಳಿದ್ದ ಯುವಕನೋರ್ವ ನೀರಿನ ಸೆಳೆತಕ್ಕೆ ಸಿಲುಕಿ ನೀರುಪಾಲಾಗುವ ಹಂತದಲ್ಲಿರುವಾಗಲೇ ಮುರುಡೇಶ್ವರ ಲೈಫ್ಗಾರ್ಡ ಸಿಬ್ಬಂದಿಗಳು ಆತನನ್ನು ರಕ್ಷಿಸಿ ದಡಕ್ಕೆ ತಂದಿರುವ ಘಟನೆ ಮಂಗಳವಾರ ನಡೆದಿದೆ.
ಪ್ರಾಣಾಪಾಯದಿಂದ ಪಾರಾದ ಯುವಕನನ್ನು ಮಂಡ್ಯ ಮದ್ದೂರಿನ ನಿವಾಸಿ ವಿಶಾಲ್ ತಂದೆ ಚೆನ್ನಯ್ಯ (17) ಎಂದು ಗುರುತಿಸಲಾಗಿದೆ. ಈತ ಪ್ರಥಮ ಪಿಯುಸಿ ವಿದ್ಯಾರ್ಥಿಯಾಗಿದ್ದಾನೆ. ನೀರಿನ ಸೆಳೆತಕ್ಕೆ ಸಿಲುಕಿ ತೀವೃ ಅಸ್ವಸ್ಥಗೊಂಡಿದ್ದ ಈತನನ್ನು ಮುರುಡೇಶ್ವರ ಆರ್ಎನ್ ಎಸ್ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಯಿತು.
ಸದ್ಯ ಯುವಕ ಚೇತರಿಸಿಕೊಂಡಿದ್ದು, ಲೈಫ್ಗಾರ್ಡ ಸಿಬ್ಬಂದಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಪಾಯದಿಂದ ಪಾರಾದ ವಿಶಾಲ್, ಕುಟುಂಬದ ಇತರೇ ನಾಲ್ವರೊಂದಿಗೆ ಮುರುಡೇಶ್ವರಕ್ಕೆ ಬಂದಿದ್ದು, ದೇವರ ದರ್ಶನ ಮುಗಿಸಿ ಈಜಾಡಲು ತೆರಳಿದ್ದರು ಎಂದು ತಿಳಿದು ಬಂದಿದೆ.
ಲೈಫ್ ಗಾರ್ಡ ಸಿಬ್ಬಂದಿ ಚಂದ್ರಶೇಖರ ದೇವಡಿಗ, ಬೀಚ್ ಸೂಪರ್ವೈಸರ್ ನರಸಿಂಹ ಮೊಗೇರ, ಕರಾವಳಿ ಕಾವಲು ಪಡೆಯ ಸಿಬ್ಬಂದಿ ಯೊಗೇಶ ಹರಿಕಾಂತ ರಕ್ಷಣಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.