ಶಿರಸಿ : ಉತ್ತರಕನ್ನಡ ಜಿಲ್ಲೆಯ ರಂಗನಟ, ನಿರ್ದೇಶಕ ಶಿರಸಿಯ ಕೆ.ಆರ್.ಪ್ರಕಾಶ ಬುಧವಾರ ರಾತ್ರಿ ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಅವರು ಪ್ರಸ್ತುತ ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯರಾಗಿದ್ದರು.
ಚಿಕ್ಕ ವಯಸ್ಸಿನಲ್ಲಿ ರಂಗಭೂಮಿಯ ಗೀಳು ಹತ್ತಿಸಿಕೊಂಡಿದ್ದ ಪ್ರಕಾಶ ಉತ್ತಮ ನಟರಾಗಿದ್ದರು. ಅವರು ತಮ್ಮದೇ ಆದ ವಿಶಿಷ್ಠ ಶೈಲಿಯಲ್ಲಿ ನಾಟಕಗಳನ್ನ ರಚಿಸಿ ಮನೆಮಾತಾದವರು.
ಹಳ್ಳಿಗಳ ತಂಡಗಳ ಜೊತೆ ನಾಟಕವಾಡುತ್ತ ಶಿರಸಿಯ ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ರಂಗಾಸಕ್ತಿ ಬೆಳೆಯಲು ಪ್ರಮುಖ ಕಾರಣರಾಗಿದ್ದರು.
'ಪ್ರಕೃತಿ ರಂಗಭೂಮಿ' ಯಲ್ಲಿ ಹಲವಾರು ಸಾಹಸಗಳನ್ನ ಮಾಡಿದ ಪ್ರಕಾಶ್ ನಿಸರ್ಗ ಮತ್ತು ರಂಗಭೂಮಿಗಳು ಲೀನವಾಗಬಹುದಾದ ಸಾಧ್ಯತೆಗಳ ಕುರಿತು ಯೋಚಿಸುತ್ತಿದ್ದರು. ಹಾಗೆಯೇ ಸಮುದ್ರ ದಡದಲ್ಲಿ, ಜಲಪಾತದೆದುರು, ಪ್ರಪಾತದಲ್ಲಿ ಹೀಗೆ ಹಲವಾರು ಪ್ರಯೋಗಗಳನ್ನು ಮಾಡಿದ್ದರು.
ಮತ್ತಿಘಟ್ಟದ ಗೆಳೆಯರೊಡನೆ ಅವರು ಅನೇಕ ಪ್ರಯೋಗಗಳನ್ನ ಮಾಡಿದ್ದರು. ಅವರ ಹೆಸರಿನ ಪ್ರಶಸ್ತಿಯನ್ನು ರಂಗಭೂಮಿಯ ಅನೇಕ ಹಿರಿಯರು ಸ್ವೀಕರಿಸಿದ್ದರು.
ಶಿರಸಿಯ 'ರಂಗಸಂಗ' ಕ್ಕಾಗಿಯೂ ಮಕ್ಕಳ ನಾಟಕಗಳನ್ನು ನಿರ್ದೇಶಿಸಿದ್ದರು. ಇನ್ನೂ ಹಲವು ವರ್ಷ ರಂಗಕಾಯಕ ಮಾಡಬಹುದಾಗಿದ್ದ ಪ್ರಕಾಶ್ ಅನಾರೋಗ್ಯ ದಿಂದ ನಿಧನರಾಗಿದ್ದಾರೆ. ಅವರ ನಿಧನಕ್ಕೆ
ಚಿಂತನ ರಂಗ ಅಧ್ಯಯನ ಕೇಂದ್ರ ಮತ್ತು ಚಿಂತನ ಉತ್ತರ ಕನ್ನಡ ಸಂತಾಪ ಸೂಚಿಸಿದೆ.