ಧಾರವಾಡ: ಕೃಷಿಕ್ಷೇತ್ರದ ಬಿಕ್ಕಟ್ಟುಗಳನ್ನು ಪರಿಹರಿಸಲು ಸರ್ಕಾರ ಬದ್ಧವಾಗಿದೆ. ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ದೇಶದ ಜಿಡಿಪಿ ಕೃಷಿಕ್ಷೇತ್ರದ ಕೊಡುಗೆ ಶೇ.60 ರಷ್ಟಿತ್ತು.ಈಗ ಶೇ.18 ಕ್ಕೆ ಇಳಿದಿದೆ.ಇದರ ಅರ್ಥ ಕೃಷಿ ಉತ್ಪಾದನೆ ಕುಸಿದಿದೆ ಎಂದಲ್ಲ.ಇತರ ವಲಯಗಳ ಉತ್ಪಾದನೆ ಹೆಚ್ಚಾಗಿದೆ. ಜನಸಂಖ್ಯೆ ಹೆಚ್ಚಳ ಮತ್ತು ಕೃಷಿಭೂಮಿ ಪ್ರಮಾಣದ ಇಳಿಕೆ ಇದಕ್ಕೆ ಪ್ರಮುಖ ಕಾರಣವಾಗಿದೆ. ಇದನ್ನು ಸರಿದೂಗಿಸಲು ಜೇನುಸಾಗಣೆ,ಹೈನುಗಾರಿಕೆ ಸೇರಿದಂತೆ ಇತರ ಗ್ರಾಮೀಣಾಭಿವೃದ್ಧಿ ಚಟುವಟಿಕೆಗಳನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಆದ್ಯತೆ ನೀಡಿದೆ.ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಮೂಲಕ ಕೇಂದ್ರ ಸರ್ಕಾರ ದೇಶದ 6 ಕೋಟಿ ರೈತರಿಗೆ ನೆರವು ನೀಡುತ್ತಿದೆ. ಹಂತ ಹಂತವಾಗಿ ಡಾ.ಸ್ವಾಮಿನಾಥನ್ ವರದಿ ಜಾರಿಗೆ ತರುವ ಮೂಲಕ ರೈತರಿಗೆ ಬೆಂಬಲ ಬೆಲೆ ಯೋಜನೆಯಲ್ಲಿ ಹೆಚ್ಚಳ ಮಾಡಲಾಗುತ್ತಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳು, ಗಣಿ ಮತ್ತು ಕಲ್ಲಿದ್ದಲು ಸಚಿವರಾದ ಪ್ರಲ್ಹಾದ ಜೋಶಿ ಹೇಳಿದರು.
ಕೃಷಿಮೇಳ 2019-20 ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಧಾರವಾಡ ಕೃಷಿಮೇಳ ಈ ಭಾಗದ ಮಹತ್ವದ ಕಾರ್ಯಕ್ರಮವಾಗಿದೆ.ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳ ಮಾಹಿತಿ ಇಲ್ಲಿ ದೊರೆಯುತ್ತಿದೆ.ಒಟ್ಟಾರೆ ಕೃಷಿ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆ ತರಲು ರಿಯಾಯಿತಿ ದರದ ಕಳ್ಳಸಾಗಣೆ ತಡೆದು, ಬೇವು ಲೇಪಿತ ಯೂರಿಯಾ ಉತ್ಪಾದನೆ ಮಾಡುವ ಮೂಲಕ ಕಳ್ಳಸಾಗಣೆಗೆ ಕಡಿವಾಣ ಹಾಕಲಾಗಿದೆ.ಇದರಿಂದ 80 ಸಾವಿರ ಕೋಟಿ ರೂ.ಉಳಿತಾಯವಾಗಿದೆ.ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಧಾರವಾಡ ಜಿಲ್ಲೆಯ 1400 ಎಕರೆಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ಸಣ್ಣ ಸಣ್ಣ ಯೋಜನೆಗಳ ಮೂಲಕ ರೈತರ ಆದಾಯ ದ್ವಿಗುಣಗೊಳಿಸಲು ಕೃಷಿ ಕುಟುಂಬಗಳು ಕೃಷಿಯೇತರ ಚಟುವಟಿಕೆಗಳನ್ನು ಕೈಗೊಳ್ಳಲು ಉತ್ತೇಜಿಸುವ ಯೋಜನೆಗಳನ್ನು ಭಾರತ ಸರ್ಕಾರ ರೂಪಿಸುತ್ತಿದೆ ಎಂದರು.
ಶಾಸಕರಾದ ಅಮೃತ ದೇಸಾಯಿ, ಶಂಕರ ಪಾಟೀಲ ಮುನೇನಕೊಪ್ಪ,ಸಿ.ಎಂ.ನಿಂಬಣ್ಣವರ, ಎಸ್.ವಿ.ಸಂಕನೂರ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಮೋಹನ ಲಿಂಬಿಕಾಯಿ, ಜಿಪಂ ಅಧ್ಯಕ್ಷೆ ವಿಜಯಲಕ್ಷ್ಮಿ ಕೆಂಪೇಗೌಡ, ವಾಕರಸಾಸಂ ಅಧ್ಯಕ್ಷ ವಿ.ಎಸ್.ಪಾಟೀಲ, ಮಾಜಿ ಶಾಸಕಿ ಸೀಮಾ ಮಸೂತಿ, ಸಾವಯವ ಕೃಷಿ ಮಿಷನ್ ಅಧ್ಯಕ್ಷ ಎ.ಎಸ್.ಆನಂದ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಎಸ್.ಎನ್.ಸಿದ್ದರಾಮಪ್ಪ, ಬೆಂಗಳೂರು ಕೃಷಿ ವಿವಿ ಕುಲಪತಿ , ಬಾಗಲಕೋಟ ತೋಟಗಾರಿಕೆ ವಿವಿ ಕುಲಪತಿ ಸೇರಿದಂತೆ ಕೃಷಿ ವಿವಿ ಆಡಳಿತ ಮಂಡಳಿ ಸದಸ್ಯರು, ಹಿರಿಯ ಅಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಕೃಷಿ ವಿವಿ ಕುಲಪತಿ ಡಾ ಮಹದೇವ ಬ.ಚೆಟ್ಟಿ ಸ್ವಾಗತಿಸಿದರು.