ಉಡುಪಿ:ಸರಕಾರ ಜಾರಿಗೆ ತರುವ ವಿವಿಧ ನೂತನ ಯೋಜನೆಗಳು, ನಿಯಮಗಳು ಮತ್ತು ಅವುಗಳ ಅನುಷ್ಠಾನ ಕುರಿತಂತೆ ಸರಕಾರಿ ನೌಕರರಿಗೆ ನಿರಂತರ ತರಬೇತಿಗಳ ಅಗತ್ಯವಿದೆ. ಈ ತರಬೇತಿ ನೀಡಲು ನೌಕರರಿಗೆ ಅಗತ್ಯ ತರಬೇತಿ ಕೇಂದ್ರ ಉಡುಪಿ ಜಿಲ್ಲೆಯಲ್ಲಿ ಇದುವರೆಗೆ ಇಲ್ಲವಾಗಿದ್ದು, ಪ್ರಸ್ತುತ ಮಣಿಪಾಲ ರಜತಾದ್ರಿಯಲ್ಲಿ ನಿರ್ಮಾಣಗೊಂಡಿರುವ ಜಿಲ್ಲಾ ಪಂಚಾಯತ್ ಸಂಪನ್ಮೂಲ ಕೇಂದ್ರ ಈ ಕೊರತೆಯನ್ನು ನೀಗಿಸಿದೆ.
ಕೆ.ಆರ್.ಐ.ಡಿ.ಎಲ್ ಇಲಾಖೆ ವತಿಯಿಂದ ೧೭೫ ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಕೇಂದ್ರದಲ್ಲಿ ನೌಕರರಿಗೆ ತರಬೇತಿ ನೀಡಲು ಅಗತ್ಯವಿರುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದೆ.
ತರಬೇತಿ ಕೇಂದ್ರದಲ್ಲಿ, ಕಂಪ್ಯೂಟರ್ ಕೊಠಡಿ, ಸಭಾಂಗಣ, ಪ್ರೊಜೆಕ್ಟರ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಎರಡು ಅಥವಾ ಮೂರು ದಿನಗಳ ತರಬೇತಿ ಆಯೋಜಿಸಿದಲ್ಲಿ ನೌಕರರು ತಂಗಲು ಅಗತ್ಯವಿರುವ ಬೆಡ್ಗಳು, ಸ್ನಾನಗೃಹ, ಶೌಚಾಲಯ ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ಸಹ ಮಾಡಿದ್ದು, ಸುಮಾರು ೩೦ ಮಂದಿ ತರಬೇತಿ ನಿರತ ಸಿಬ್ಬಂದಿ ತಂಗಲು ಅವಕಾಶವಿದೆ. ಅಲ್ಲದೇ ೨ ಗೆಸ್ಟ್ ರೂಂ ವ್ಯವಸ್ಥೆ ಸಹ ಇದ್ದು, ಇದು ಸಂಪೂರ್ಣ ಹವಾನಿಯಂತ್ರಿತವಾಗಿದೆ.
ಮುಂದಿನ ದಿನಗಳಲ್ಲಿ ಈ ಕಟ್ಟಡದ ಮುಂಭಾಗದಲ್ಲಿ ಉದ್ಯಾನವನ, ವಾಕಿಂಗ್ ಪಾಥ್ ಹಾಗೂ ನೀರಿನ ಕಾರಂಜಿ ನಿರ್ಮಿಸುವ ಮೂಲಕ ರಾಜ್ಯದಲ್ಲೇ ಅತ್ಯಂತ ಆಕರ್ಷಕ ತರಬೇತಿ ಕೇಂದ್ರವನ್ನಾಗಿ ಅಭಿವೃದ್ದಿಗೊಳಿಸುವ ಯೋಜನೆಯೂ ಇದೆ ಎನ್ನುತ್ತಾರೆ ಕೆ.ಆರ್.ಐ.ಡಿ.ಎಲ್ ನ ಯೋಜನಾ ನಿರ್ದೇಶಕ ಕೃಷ್ಣ ಹೆಪ್ಸೂರ್.
ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಇಂತಹ ಕೇಂದ್ರ ನಿರ್ಮಿಸಲು ಅನುದಾನ ಬಿಡುಗಡೆಯಾಗಿದ್ದು, ಉಡುಪಿ ಜಿಲ್ಲೆಯಲ್ಲಿ ಅತ್ಯಂತ ಶೀಘ್ರದಲ್ಲಿ, ಸುಸುಜ್ಜಿತ ರೀತಿಯಲ್ಲಿ ತರಬೇತಿ ಕೇಂದ್ರದ ಕಟ್ಟಡ ನಿರ್ಮಾಣಗೊಂಡಿದ್ದು, ಬುಧವಾರ ಗ್ರಾಮ ಪಂಚಾಯತ್ ಸಿಬ್ಬಂದಿಗಳಿಗೆ ನಡೆದ ತ್ಯಾಜ್ಯ ಸಂಗ್ರಹಣೆ ಮತ್ತು ನಿರ್ವಹಣೆ ಕುರಿತ ತರಬೇತಿ ಕಾರ್ಯಗಾರದ ಮೂಲಕ ಆರಂಭಗೊಡಿದೆ.