ಕಾರವಾರ : ಕರಾವಳಿಯಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಉತ್ತರಕನ್ನಡ ಜಿಲ್ಲಾ ಸಹಕಾರ ಮೀನು ಮಾರಾಟ ಫೆಡರೇಶನ್ ಚುನಾವಣೆಯಲ್ಲಿ ಮೀನುಗಾರ ಮುಖಂಡರಾದ ರಾಜು ತಾಂಡೇಲ ಅವರ ಬಣ ಭರ್ಜರಿ ಗೆಲುವು ಸಾಧಿಸಿದೆ
15 ನಿರ್ದೇಶಕ ಸ್ಥಾನಗಳಲ್ಲಿ ಈಗಾಗಲೇ ಆರು ಮಂದಿ ಅವಿರೋಧ ಆಯ್ಕೆಯಾಗಿದ್ದರು. ಒಟ್ಟು ಎರಡು ಸ್ಥಾನಕ್ಕೆ ನಾಮಪತ್ರ ಸಲ್ಲಿಕೆಯಾಗಿರಲಿಲ್ಲ. ಹಾಗಾಗಿ ಏಳು ಸ್ಥಾನಗಳಿಗೆ ಮತದಾನ ನಡೆದಿತ್ತು. ಫೆಡರೇಶನ್ ಹಾಲಿ ಅಧ್ಯಕ್ಷ ಗಣಪತಿ ಮಾಂಗ್ರೆ ಅವರಿಗೆ ಇದು ಪ್ರತಿಷ್ಠೆಯ ಚುನಾವಣೆಯಾಗಿತ್ತು.
ಗಣಪತಿ ಮಾಂಗ್ರೆ ಮತ್ತು ಚಿತ್ತಾಕುಲಾ ಗ್ರಾಮ ಪಂಚಾಯ್ತಿಯ ಮಾಜಿ ಅಧ್ಯಕ್ಷ ರಾಜು ತಾಂಡೇಲ ನಡುವೆ ಭಾರಿ ಪೈಪೋಟಿ ಕೂಡ ನಡೆದಿತ್ತು. ಆದರೆ ರಾಜು ತಾಂಡೇಲ ಬಣಕ್ಕೆ ಭರ್ಜರಿ ಜಯಭೇರಿ ಬಾರಿಸಿದೆ.
‘ಕ’ ವರ್ಗದ ಸಾಮಾನ್ಯ ವಿಭಾಗದಿಂದ ಚಿತ್ತಾಕುಲಾ ಸೀಬರ್ಡ್ ಕಾಲೊನಿಯ ರಾಜು ತಾಂಡೇಲ, ಬಿಣಗಾದ ವೆಂಕಟೇಶ ಈರಾ ಹರಿಕಂತ್ರ, ಕುಮಟಾದ ಬೀರಪ್ಪ ಈರಾ ಹರಿಕಂತ್ರ ಗೆಲುವು ಸಾಧಿಸಿದ್ದಾರೆ. ‘ಕ’ ವರ್ಗದ ಹಿಂದುಳಿದ ವರ್ಗ ‘ಅ’ ವಿಭಾಗದಿಂದ ಚಿತ್ತಾಕುಲಾದ ಸುಧಾಕರ ಚಾರಾ ಹರಿಕಂತ್ರ ಆಯ್ಕೆಯಾಗಿದ್ದಾರೆ.
ಕಾರವಾರ ತಾಲ್ಲೂಕಿನ ‘ಬ’ ವರ್ಗದ ಪ್ರತಿನಿಧಿಗಳಾಗಿ ದಿಲೀಪ ಹರಿಶ್ಚಂದ್ರ ಚಂಡೇಕರ್, ಶ್ರೀಧರ ಮಹಾಬಲೇಶ್ವರ ಹರಿಕಂತ್ರ ಹಾಗೂ ಕುಮಟಾ ತಾಲ್ಲೂಕಿನ ‘ಬ’ ವರ್ಗದ ಪ್ರತಿನಿಧಿಯಾಗಿ ಮಹೇಶ ನಾರಾಯಣ ಮೂಡಂಗಿ ಜಯ ಸಾಧಿಸಿದ್ದಾರೆ.
ಪರಿಶಿಷ್ಟ ಜಾತಿ ಕ್ಷೇತ್ರದಿಂದ ಭಟ್ಕಳ ಬೆಳ್ಕೆಯ ದಿವಾಕರ ದಾಸಿ ಮೊಗೇರ, ‘ಕ’ ವರ್ಗದ ಮಹಿಳಾ ಕ್ಷೇತ್ರದಿಂದ ಕಾರವಾರದ ಸವಿತಾ ನಿತಿನ್ ಗಾಂವ್ಕರ್ ಮತ್ತು ಆಶಾ ಶ್ರೀಧರ ಹರಿಕಂತ್ರ ಅವಿರೋಧವಾಗಿ ಆಯ್ಕೆಯಾಗಿದ್ದರು.
ಅಂಕೋಲಾ ಬ ವರ್ಗದ ಮೀನುಗಾರ ಸಹಕಾರ ಕ್ಷೇತ್ರದಿಂದ ರಾಜು ತಿಮ್ಮಣ್ಣ ಹರಿಕಂತ್ರ, ‘ಬ’ ವರ್ಗದ ಮೀನುಗಾರ ಸಹಕಾರ ಸಂಘದ ಮತದಾರರ ಕ್ಷೇತ್ರದಿಂದ ಅಳ್ವೆಕೋಡಿಯ ವಿಠ್ಠಲ ಶನಿಯಾರ ದೈಮನೆ, ಹೊನ್ನಾವರ ‘ಬ’ ವರ್ಗದ ಮೀನುಗಾರ ಸಹಕಾರ ಕ್ಷೇತ್ರದಿಂದ ಹೊನ್ನಾವರ ತಾಲ್ಲೂಕಿನ ಮಂಕಿಯ ಉಮೇಶ ಅಣ್ಣಪ್ಪ ಖಾರ್ವಿ ಆಯ್ಕೆಯಾಗಿದ್ದಾರೆ