ಭಟ್ಕಳ: ತಾಲೂಕಿನ ಮಾವಿನಕುರ್ವೆ ಕೊಂಕಣಿ ಖಾರ್ವಿ ಸಮಾಜದ ವತಿಯಿಂದ ಸಮಾಜದ ಬಾಂಧವರಿಗೆ ಬುಧವಾರ ಸಮಾಜ ಬಾಂಧವರಿಗೆ ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಆಹಾರದ ಕಿಟ್ಗಳನ್ನು ವಿತರಿಸಲಾಯಿತು.
ಸಾಂಕೇತಿಕವಾಗಿ ಕೆಲವರಿಗೆ ಕಿಟ್ ಹಸ್ತಾಂತರಿಸಿ ಮಾತನಾಡಿದ ಸಹಾಯಕ ಆಯುಕ್ತೆ ಮಮತಾದೇವಿ ಜಿ.ಎಸ್. ಅವರು ಮಾತನಾಡಿ ಸಮಾಜದ ವತಿಯಿಂದ ಸಮಾಜ ಬಾಂಧವರಿಗೆ ಆಹಾರದ ಕಿಟ್ ವಿತರಣೆ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಮಳೆಗಾಲದಲ್ಲಿ ಮೀನುಗಾರಿಕೆ ನಿಷೇಧ ಇರುವುದರಿಂದ ಮೀನುಗಾರರು ಆರ್ಥಿಕವಾಗಿ ತೊಂದರೆಯಲ್ಲಿರುತ್ತಾರೆ. ಅಲ್ಲದೇ ಕೊರೊನಾದ ಎರಡನೇ ಅಲೆಯಿಂದಾಗಿ ಮೀನುಗಾರರು ಆದಾಯ ವಂಚಿತರಾಗಿದದು ಇನ್ನಷ್ಟು ಪರಿಣಾಮ ಉಂಟಾಗಿದೆ. ಇಂತಹ ಸಂದರ್ಭದಲ್ಲಿ ಸಮಾಜದ ವತಿಯಿಂದ ಕಲ್ಪಿಸುವ ನೆರವಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದೂ ಅವರು ಹೇಳಿದರು.
ಸಮಾಜದ ಹಿರಿಯ ಮುಖಂಡ ವಸಂತ ಖಾರ್ವಿ ಮಾತನಾಡಿ ಗ್ರಾಮದಲ್ಲಿ ಸಮಾಜದ ಅಂದಾಜು 500 ಮನೆಗಳಿವೆ. ಮನೆಯ ಒಬ್ಬ ಸದಸ್ಯರಿಗೆ 10 ಕೆಜಿ ಅಕ್ಕಿ ಮತ್ತು ದಿನಸಿ ಕಿಟ್ ಅನ್ನು ಸಿದ್ಧಪಡಿಸಿ ವಿತರಣೆ ಮಾಡಲಾಗುತ್ತಿದೆ. ಕೊರೊನಾದ ಮೊದಲ ಅಲೆ ಬಂದ ಸಂದರ್ಭದಲ್ಲೂ ಸಮಾಜದ ವತಿಯಿಂದ ಸಮಾಜದ ಬಾಂಧವರಿಗೆ ಅಷ್ಟೇ ಅಲ್ಲ. ಬೇರೆ ಸಮಾಜದ ಬಡವರಿಗೂ ಆಹಾರದ ಕಿಟ್ ವಿತರಣೆ ಮಾಡಲಾಗಿತ್ತು ಎಂದೂ ಅವರು ಹೇಳಿದರು.
ಇದೇ ರೀತಿಯ ಸಹಾಯ ಸಹಕಾರದ ಮನೋಭಾವ ಎಲ್ಲರಲ್ಲೂ ಬೆಳೆಯಲಿ. ಸಮಾಜದಲ್ಲಿ ಈ ರೀತಿಯ ನೆರವಿನ ಕಾರ್ಯ ನಿರಂತರವಾಗಿ ನಡೆಯಲಿ ಎನ್ನುವುದು ನಮ್ಮ ಹಾರೈಕೆಯಾಗಿದೆ ಎಂದು ವಸಂತ ಖಾರ್ವಿ ತಿಳಿಸಿದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ರವಿಚಂದ್ರ ಎಸ್.ಕೊಂಕಣಿ ಖಾರ್ವಿ ಸಮಾಜದ ಅಧ್ಯಕ್ಷ ಸುಬ್ರಾಯ ಖಾರ್ವಿ,ಉಪಾಧ್ಯಕ್ಷ ಕೇಶವ ಖಾರ್ವಿ,ಕಾರ್ಯದರ್ಶಿ ನಾರಾಯಣ ಖಾರ್ವಿ, ಹಿರಿಯರಾದ ಎನ್. ಡಿ. ಖಾರ್ವಿ, ತಿಮ್ಮಪ್ಪ ಖಾರ್ವಿ, ರತ್ನಾಕರ್ ಖಾರ್ವಿ, ರಮೇಶ್ ಖಾರ್ವಿ, ಶ್ರೀನಿವಾಸ್ ಖಾರ್ವಿ, ರಾಜೇಂದ್ರ ಖಾರ್ವಿ, ನಾಗಪ್ಪ ಖಾರ್ವಿ ಮುಂತಾದವರು ಉಪಸ್ಥಿತರಿದ್ದರು.