ಮಂಗಳೂರು : ದೇವಸ್ಥಾನಗಳಿಗೆ ಭಕ್ತರ ಪ್ರವೇಶ ನಿರ್ಬಂಧಿಸಿ ಸರ್ಕಾರದ ಆದೇಶ ಹೊರಡಿಸಿದ ಹಿನ್ನಲೆಯಲ್ಲಿ ಸರ್ಪ ಸಂಸ್ಕಾರ ಸೇವೆಗೆ ಕುಕ್ಕೆಗೆ ಆಗಮಿಸಿದ ಭಕ್ತರು ಗೊಂದಲಕ್ಕೀಡಾದ ಘಟನೆ ಬುಧವಾರ ನಡೆಯಿತು.
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ಇಂದಿನಿಂದಲೇ ಸರ್ಪ ಸಂಸ್ಕಾರ ಸೇರಿ ಎಲ್ಲ ಸೇವೆಗಳು ಬಂದ್ ಆಗಿವೆ. ಹೀಗಾಗಿ ಕ್ಷೇತ್ರದಲ್ಲಿ ಸರ್ಪಸಂಸ್ಕಾರ ಪೂಜೆ ಬುಕ್ ಮಾಡಿ ದೇವಸ್ಥಾನಕ್ಕೆ ಆಗಮಿಸಿರುವ ಭಕ್ತಾಧಿಗಳು ನಿರಾಶೆ ಅನುಭವಿಸುವಂತಾಯಿತು.
ದೂರದ ಊರುಗಳಿಂದ ಸರ್ಪಸಂಸ್ಕಾರ ಪೂಜೆ ನೆರವೇರಿಸಲು ಆಗಮಿಸಿದ್ದ ಭಕ್ತಾದಿಗಳು ಸರಕಾರದ ಆದೇಶದ ಹಿನ್ನಲೆಯಲ್ಲಿ ಸಿಬ್ಬಂದಿ ಹಾಗೂ ಆಡಳಿತ ಮಂಡಳಿಯವರನ್ನು ತರಾಟೆಗೆ ತೆಗೆದುಕೊಂಡರು. ಕೊನೆಗೆ ಭಕ್ತರ ಮನವೊಲಿಸಿ ಹಣ ಮರುಪಾವತಿ ಮತ್ತು ಮುಂದಿನ ದಿನಾಂಕದಂದು ಬರಲು ದೇವರ ಪ್ರಸಾದ ನೀಡಿ ಆಡಳಿತ ಮಂಡಳಿಯವರು ಕಳುಹಿಸಿದರು