ಬೆಂಗಳೂರು: ರಾಜ್ಯ ವ್ಯಾಪಿ ಮಸೀದಿಗಳಲ್ಲಿನ ಧ್ವನಿವರ್ಧಕ ತೆರವುಗೊಳಿಸುವ ಸಂಬಂಧ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರು ಯಾವುದೇ ರೀತಿಯ ಆದೇಶ ಹೊರಡಿಸಿಲ್ಲ ಎನ್ನುವ ಅಂಶ ಬೆಳಕಿಗೆ ಬಂದಿದೆ.
ಧ್ವನಿವರ್ಧಕಗಳ ಕುರಿತಾದ ಆಕ್ಷೇಪದ ಬಗ್ಗೆ ನಗರ ಪೊಲೀಸ್ ಆಯುಕ್ತ ಮತ್ತು ಆಯಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮಾಹಿತಿ ನೀಡುವಂತೆ ಕೋರಿರುವ ಪ್ರವೀಣ್ ಸೂದ್ ಅವರ ಪತ್ರವೊಂದು ಚರ್ಚೆಗೆ ಗ್ರಾಸವಾಗಿತ್ತು.
ಆದರೆ, ಈ ಬಗ್ಗೆ ರಾಜ್ಯ ಪೊಲೀಸ್ ಇಲಾಖೆಯ ಫ್ಯಾಕ್ಟ್ ಚೆಕ್ ವೆಬ್ ಸೈಟ್ ನಲ್ಲಿ ಅಧಿಕೃತ ಮಾಹಿತಿ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣ ಮತ್ತು ಕೆಲ ಪ್ರಮುಖ ಮಾಧ್ಯಮಗಳಲ್ಲಿ ಮಸೀದಿ ಧ್ವನಿವರ್ಧಕ ತೆರವುಗೊಳಿಸಲು ಆದೇಶಿಸಿರುವ ಸುದ್ದಿ ಹಬ್ಬಿರುವುದು ಸುಳ್ಳು. ಇಂತಹ ವಂದತಿಗಳಿಗೆ ಕಿವಿಗೊಡದಂತೆ ವಿನಂತಿಸಲಾಗಿದೆ.
ಮುಂದುವರಿದು, ಪೊಲೀಸ್ ಇಲಾಖೆಯ ಯಾವುದೋ ಗುಮಾಸ್ತ ಹಿರಿಯ ಅಧಿಕಾರಿಗಳ ಸೂಕ್ತ ಅನುಮತಿ ಪಡೆಯದೆ ಈ ರೀತಿಯ ಪತ್ರವೊಂದನ್ನು ರವಾನಿಸಿರುವ ಮಾಹಿತಿ ಇದೆ. ಆದರೆ, ಇದು ಡಿಜಿಪಿ ಗಮನಕ್ಕೂ ಬಂದಿಲ್ಲ ಎಂದು ಮೂಲಗಳು ತಿಳಿಸಿವೆ.
ಏನಿದು ಪತ್ರ?: ಮಸೀದಿಗಳ ಧ್ವನಿವರ್ಧಕಗಳಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸ ಹಾಗೂ ವಯೋವೃದ್ಧರಿಗೆ ಆರೋಗ್ಯದ ಸಮಸ್ಯೆ ಆಗುತ್ತದೆ ಎಂದು ಆರೋಪಿಸಿ, ಮಸೀದಿಗಳಿಗೆ ಧ್ವನಿವರ್ಧಕಗಳ ನಿರ್ಬಂಧ ಹೇರಿ ಅವುಗಳನ್ನು ತೆರವುಗೊಳಿಸಬೇಕೆಂದು ವಕೀಲ ಹರ್ಷ ಮುತಾಲಿಕ್ ಎಂಬವರು ಪೊಲೀಸ್ ಮಹಾ ನಿರ್ದೇಶಕರಿಗೆ ಮನವಿ ಪತ್ರ ರವಾನಿಸಿದ್ದರು.