ಮುರ್ಡೇಶ್ವರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಆಗ್ರಹ
ಕಾರವಾರ: ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಭಟ್ಕಳ ತಾಲ್ಲೂಕಿನ ಮುರ್ಡೇಶ್ವರದಲ್ಲಿ ಮೂಲ ಸೌಕರ್ಯಗಳನ್ನು ಒದಗಿಸುವಂತೆ ಮುರ್ಡೇಶ್ವರದ ನಿವಾಸಿ ವೆಂಕಟೇಶ ಪ್ರಭು ಅವರು ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕರಿಗೆ ಮನವಿ ಸಲ್ಲಿಸಿದ್ದಾರೆ.
‘ಮುರ್ಡೇಶ್ವರ ಕ್ಷೇತ್ರವು ಪ್ರಸಿದ್ಧ ಪ್ರವಾಸಿ ತಾಣವಾಗಿರುವುದರಿಂದ ದಿನನಿತ್ಯ ಸಾವಿರಾರು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಿರುತರ್ತಾರೆ. ಹೀಗಿರುವಾಗ ಇಲ್ಲಿ ಪ್ರವಾಸಿಗರಿಗೆ ಯಾವುದೇ ಸೌಲಭ್ಯ ಇರುವುದಿಲ್ಲ. ರಾಷ್ಟ್ರೀಯ ಹೆದ್ದಾರಿ 66ರಿಂದ ಮುರ್ಡೇಶ್ವರ ದೇವಸ್ಥಾನದವರೆಗೆ ಚತುಷ್ಪಥ ರಸ್ತೆ ಕಾಮಗಾರಿ ಮಾಡಿಸಬೇಕು. ಇದರೊಂದಿಗೆ, ಚರಂಡಿ ವ್ಯವಸ್ಥೆಯೂ ಸಮರ್ಪವಾಗಿ ಆಗಬೇಕಿದೆ. ಪಾರ್ಕಿಂಗ್, ಪಟ್ಟಣ ಪ್ರದೇಶದಲ್ಲಿ ಶೌಚಾಲಯ ವ್ಯವಸ್ಥೆ ಮಾಡಿಸಬೇಕು. ಪ್ರವಾಸಿಗರಿಗೆ ಉಳಿಯಲು ಕಾನೂನಿನಂತೆ ಬೆಲೆಯಲ್ಲಿ ಸಿಗುವಂತ ವಸತಿ ಸೌಕರ್ಯ ಒದಗಿಸಿಕೊಡಬೇಕು’ ಎಂದು ಒತ್ತಾಯಿಸಿದ್ದಾರೆ.
‘ವಾರದ ಸಂತೆ ನಡೆಸಲು ನಿಗದಿತ ಸ್ಥಳವೊಂದನ್ನು ಸೂಚಿಸಿಕೊಡಬೇಕು. ವರ್ಷಂಪ್ರತಿ ಇಲ್ಲಿ ಗಣೇಶೋತ್ಸವ ಹಾಗೂ ಮುರ್ಡೇಶ್ವರನ ಮಹಾರಥೋತ್ಸವವು ನಡೆಯುವಾಗ ರಥ ಎಳೆಯಲು ಕಿರಿದಾದ ದಾರಿಯಿಂದಾಗಿ ಅಡಚಣೆ ಉಂಟಾಗುತ್ತಿದ್ದು, ಅದನ್ನು ಸರಿಪಡಿಸಿಕೊಡಬೇಕು. ಹೊಟೆಲಿನವರು ಮಲೀನ ನೀರು ಹಾಗೂ ತ್ಯಾಜ್ಯ ವಸ್ತುಗಳನ್ನು ಚರಂಡಿಗೆ ಪೈಪ್ ಮೂಲಕ ಬಿಡುತ್ತಿದ್ದು, ಚರಂಡಿ ನೀರು ನೇರವಾಗಿ ಸಮುದ್ರಕ್ಕೆ ಹೋಗುತ್ತಿರುವುದರಿಂದ ಮೀನಿನ ಸಂತತಿ ಕಡಿಮೆಯಾಗುತ್ತಿದೆ. ಹೀಗಾಗಿ ಈ ಚರಂಡಿ ನೀರನ್ನು ಶುದ್ಧೀಕರಿಸಿ ಸಮುದ್ರಕ್ಕೆ ಬಿಡುವ ವ್ಯವಸ್ಥೆಯಾಗಬೇಕು’ ಎಂದು ಆಗ್ರಹಿಸಿದರು.
‘ಈ ಎಲ್ಲಾ ಅವ್ಯವಸ್ಥೆಯಿಂದ ಮುರ್ಡೇಶ್ವರದಲ್ಲಿ ಸಾರ್ವಜನಿಕರಿಗೂ ಹಾಗೂ ಪ್ರವಾಸಿಗರಿಗೆ ತೊಂದರೆಯಾಗುತ್ತಿದೆ. ಸ್ಥಳೀಯ ಗ್ರಾಮ ಪಂಚಾಯತಿ ಹಾಗೂ ಇತರ ಇಲಾಖೆಯಿಂದ ಯಾವುದೇ ಅಭಿವೃದ್ಧಿ ಕಾರ್ಯಗಳು ಇಲ್ಲಿ ಆಗದೇ, ಸರ್ಕಾರದಿಂದ ಬರುವ ಹಣ ಪೋಲಾಗುತ್ತಿದೆ. ಇಲ್ಲಿ ಗ್ರಾಮ ಪಂಚಾಯತಿ ಆಡಳಿತದ ಬದಲು ಪುರಸಭೆ ಆಡಳಿತ ತಂದು, ಕ್ಷೇತ್ರದ ಅಭಿವೃದ್ಧಿ ಆಗಬೇಕಿದೆ. ಸರ್ಕಾರದಿಂದ ಕ್ಷೇತ್ರಕ್ಕೆ ಬರುವ ಅನುದಾನದಿಂದ ಯಾವುದೇ ಕಾಮಗಾರಿಗಳು ಇಲ್ಲಿ ನಡೆಯುತ್ತಿಲ್ಲ. ಒಟ್ಟಾರೆಯಾಗಿ, ಇಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಸುವ್ಯವಸ್ಥಿತವಾಗಿ ಕೈಗೊಂಡು, ಪ್ರವಾಸಿಗರಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಅವರು ಮನವಿ ಸಲ್ಲಿಸಿ ಒತ್ತಾಯಿಸಿದರು.