ಕಾರವಾರ : ಜಿಲ್ಲಾ ಪ್ರವಾಸೋದ್ಯಮ ಸಮಿತಿಯಿಂದ ಪ್ರವಾಸಿ ತಾಣಗಳಿಗೆ ಮೂಲಭೂತ ಸೌಕರ್ಯಗಳು ಹಾಗೂ ರಸ್ತೆಗಳನ್ನು ಅಭಿವೃದ್ಧಿ ಪಡಿಸುವ ಮೂಲಕ ಪ್ರವಾಸೋದ್ಯಮಕ್ಕೆ ಆಧ್ಯತೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ ಅವರು ತಿಳಿಸಿದರು.
ಜಿಲ್ಲೆಯ ಸದಾಶಿವಗಡದ ಕೋಟೆಯ ರೆಸಾರ್ಟ್ನಲ್ಲಿ ರವಿವಾರ ವಿಶ್ವ ಪ್ರವಾಸೋದ್ಯಮ ದಿನಾಚರಣೆಯನ್ನು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸುಸ್ಥಿರ ಪ್ರವಾಸೋದ್ಯಮಕ್ಕೆ ಒತ್ತು ಕೊಡಬೇಕಾಗಿದೆ ಹಾಗೂ ಅರಣ್ಯ ಚಾರಣ ಮಾಡಬೇಕಾದರೆ ಎಲ್ಲವನ್ನೂ ಸರ್ಕಾರವೇ ಮಾಡುವುದಕ್ಕಿಂತ ಅಲ್ಲಿನ ಜನರೇ ಹೆಚ್ಚಿನ ಕಾಳಜಿ ತೆಗೆದುಕೊಂಡಲ್ಲಿ ವಾತಾವರಣ ಸ್ವಚ್ಛವಿಡಲು ಸಾಧ್ಯ ಮತ್ತು ಬರುವ ಪ್ರವಾಸಿಗರಿಗೆ ಆತಿಥ್ಯ ಕೊಡುವಂತಾದರೆ ಪ್ರವಾಸೋದ್ಯಮ ಅಭಿವೃದ್ಧಿ ಆಗುತ್ತದೆ.
ಜಿಲ್ಲೆಯಲ್ಲಿನ ಪ್ರವಾಸೋದ್ಯಮದ ರೂಪರೇಷೆಗಳನ್ನು ಬೇರೆಯವರು ಅನುಸರಿಸುವಂತಾಗಬೇಕು.
ಪ್ರತಿ ತಾಲೂಕುಗಳಲ್ಲಿ ಪ್ರವಾಸೋದ್ಯಮ ಯಾವ ರೀತಿ ಇರಬೇಕು ಎಂಬುವುದನ್ನಾ ಸಮಗ್ರವಾಗಿ ಚರ್ಚಿಸಬೇಕು ಎಂದರು.
ಪ್ರವಾಸೋದ್ಯಮದ ಸಮಗ್ರ ಚಿತ್ರಣ ಬೇಕಾದರೆ ಮೊದಲಿಗೆ ನೀಲ ನಕ್ಷೆ ತಯಾರಾಗಬೇಕು ಅಂದಾಗ ಮಾತ್ರ ಅಭಿವೃದ್ಧಿಯತ್ತ ಸಾಗುತ್ತದೆ.
ಮುಂದಿನ ದಿನಮಾನಗಳಲ್ಲಿ ಜಿಲ್ಲೆಯಲ್ಲಿ ಹೊಸ ವಾತಾವರಣ ಸೃಷ್ಟಿ ಆಗಲಿದೆ ಎಂದರು.
ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕರಾದ ಪುರುಷೋತ್ತಮ ಎಸ್ ಅವರು ಮಾತನಾಡಿ,
ದೇಶ ಸುತ್ತಿ ನೋಡು ಕೋಶ ಓದಿ ನೋಡು ಎಂಬಂತೆ ಎಲ್ಲರೂ ಓದುವುದರ ಜೊತೆಗೆ ಹಲವಾರು ಕಡೆಗಳಲ್ಲಿ ಸುತ್ತಿ ಹಲವಾರು ಉತ್ತಮ ವಿಷಯಗಳನ್ನು ತಿಳಿದುಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹೋಮ್ ಸ್ಟೇ ಮಾಲೀಕಾರದ ರವೀಂದ್ರ ಪಂಡಿತ, ಕರಾವಳಿ ಇನ್ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್ ಮೆಂಟ್ ನ ಸತೀಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.