ಭಟ್ಕಳ: ಇಲ್ಲಿನ ಪುರಸಭೆ ವ್ಯಾಪ್ತಿಯಲ್ಲಿನ ಸಂತೆ ಮಾರುಕಟ್ಟೆಯ ಆವರಣದೊಳಗೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅನುದಾನದಡಿಯಲ್ಲಿ 1.30 ಕೋಟಿ ವೆಚ್ಚದಲ್ಲಿ ಜುಲೈ 17 2016 ರಂದು ಸುಸಜ್ಜಿತ ಮೀನು ಮಾರುಕಟ್ಟೆ ಕಟ್ಟಡ ನಿರ್ಮಾಣ ಕಾಮಗಾರಿಯ ಶಿಲಾನ್ಯಾಸವನ್ನು ಅಂದಿನ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅಡಿಗಲ್ಲನ್ನು ಹಾಕಿದ್ದರು. ಈಗ ಹೈಟೆಕ್ ಮೀನು ಮಾರುಕಟ್ಟೆಯ ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು ಸದ್ಯ ಇದು ಕುಡುಕರ ಅಡ್ಡವಾಗಿದ್ದು. ಕಟ್ಟಡವನ್ನು ಇನ್ನು ವ್ಯಾಪಾರಿಗಳಿಗೆ ನೀಡದೇ ಮೀನಾಮೇಷ ಎಣಿಸುತ್ತಿದ್ದಾರೆ.
ತಾಲೂಕಿನ ಜನರ ಬಹುದಿನದ ಬೇಡಿಕೆಯಾದ ಹೈಟೆಕ್ ಮೀನು ಮಾರುಕಟ್ಟೆಯ ಕಟ್ಟಡವೂ ರಾತ್ರಿ ವೇಳೆ ಕುಡುಕರಿಗೆ ಸುಂದರ ತಾಣವಾಗಿದ್ದು, ಸುಸಜ್ಜಿತ ಕಟ್ಟಡವೂ ಈ ರೀತಿ ಬದಲಾಗಿರುವದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಅಂದಿನ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಿವೇದಿತ ಆಳ್ವಾ ಅವರು ಹೈಟೆಕ್ ಮೀನು ಮಾರುಕಟ್ಟೆಯನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇಲ್ಲಿನ ಹಳೆ ಬಸ್ ನಿಲ್ದಾಣದ ಸಮೀಪದ ಸದ್ಯ ಮೀನು ಮಾರುಕಟ್ಟೆ ಇದ್ದು ಶಿಥಿಲಾವಸ್ಥೆಗೆ ಬಂದು ತಲುಪಿದ್ದವು. ಸದ್ಯ ನಿರ್ಮಾಣ ಕಾರ್ಯ ಪೂರ್ಣಗೊಂಡ ಹೈಟೆಕ ಮೀನು ಮಾರುಕಟ್ಟೆಯನ್ನು ಹಾಲಿ ಹಳೆಯ ಮೀನು ಮಾರುಕಟ್ಟೆಯ ಮಹಿಳಾ ಮೀನು ವ್ಯಾಪಾರಿಗಳಿಗೆ ಬಿಟ್ಟು ಕೊಡದೇ ಕಟ್ಟಡ ಪಾಳುಬೀಳುವಂತೆ ಮಾಡಿದ್ದಾರೆ. ಈ ಹಿಂದೆ ಭಟ್ಕಳ ತಾಲೂಕಿನ ಶಿರಾಲಿ ಹಾಗು ಜಾಲಿಯಲ್ಲಿ ಸುಸಜ್ಜಿತ ಮೀನು ಮಾರುಕಟ್ಟೆ ನಿರ್ಮಾಣವಾಗಿ ಮೀನು ವ್ಯಾಪಾರಸ್ಥರಿಗೆ ಅನೂಕೂಲ ಮಾಡಿಕೊಡಲಾಗಿತ್ತು. ಆದರೆ ಇವೆಲ್ಲಾವನ್ನು ನೋಡುತ್ತಿದ್ದ ಭಟ್ಕಳದ ಮೀನು ವ್ಯಾಪಾರಸ್ಥರಿಗೆ ನಮಗು ಅದೇ ರೀತಿಯ ಸುಸಜ್ಜಿತ ಮೀನು ಮಾರುಕಟ್ಟೆ ನಿರ್ಮಾಣವಾಗುತ್ತದೆ ಎಂದು ಕಾಯುತ್ತಿದ್ದವರಿಗೆ ಈಗ ಹೈಟೆಕ್ ಟಚ್ನ ಮಾರುಕಟ್ಟೆ ನಿರ್ಮಾಣವೇನೋ ಆಗಿದೆ ಕಟ್ಟಡ ಮಾತ್ರ ವ್ಯಾಪಾರಿಗಳ ಬಳಕೆ ಸಿಕ್ಕಿಲ್ಲವಾಗಿರುವುದು ವ್ಯಾಪಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರತಿ ರವಿವಾರದಂದು ಈ ಸ್ಥಳದಲ್ಲಿ ಸಂತೆ ನಡೆಯಲಿದ್ದು, ಅದೊಂದು ದಿನ ಜನಸಂಚಾರವಿರುತ್ತದೆ. ಉಳಿದೆಲ್ಲ ದಿನದಂದು ಹಗಲು ವೇಳೆ ಭಿಕ್ಷುಕರಿಗೆ, ನಿರಾಶ್ರಿತರಿಗೆ ವಿಶ್ರಾಂತಿ ಸ್ಥಳವಾಗಿದ್ದು, ರಾತ್ರಿ ವೇಳೆ ಸಂಪೂರ್ಣವಾಗಿ ಕುಡುಕರಿಗೆ ಸೂಕ್ತ ಜಾಗವಾಗಿದೆ. ಮೀನು ಮಾರುಕಟ್ಟೆ ಕಟ್ಟಡದ ಸುತ್ತಲು ರಾಶಿ ರಾಶಿ ಬಿಯರ ಬಾಟಲಿಗಳು ಬಿದ್ದಿದ್ದು, ಕಟ್ಟಡದ ಸುತ್ತಮುತ್ತಲಿನ ಪರಿಸರ ಗಲೀಜು ಮಾಡಲಾಗಿರುವದು ವಿಪರ್ಯಾಸವಾಗಿದೆ.
ಧೂಳು ಹಿಡಿದ ಕಟ್ಟಡದ ಒಳಾಂಗಣ: ಇಲ್ಲಿನ ಸುಸಜ್ಜಿತ ಮೀನು ಮಾರುಕಟ್ಟೆಯ ಕಟ್ಟಡದ ಜೊತೆಗೆ ಒಳಾಂಗಣದಲ್ಲಿ ಮಹಿಳೆಯರಿಗೆ ಕುಳಿತುಕೊಳ್ಳಲು ಸುಸಜ್ಜಿತ ಆಸನ, ಮೀನು ಕೆಡದಂತೆ ಇಟ್ಟುಕೊಳ್ಳಲು ಸಮರ್ಪಕ ವ್ಯವಸ್ಥೆ, ಸ್ನಾನ ಮತ್ತು ಶೌಚಾಲಯ, ವಿಶ್ರಾಂತಿ ಕೊಠಡಿ, ಊಟದ ಕೋಣೆ, ಪಾರ್ಕಿಂಗ್ ವ್ಯವಸ್ಥೆಯನ್ನು ನೂತನ ಮೀನು ಮಾರುಕಟ್ಟೆಯು ಒಳಗೊಂಡಿದ್ದು 1.30 ಕೋಟಿ ರೂಪಾಯಿಗಳನ್ನು ವ್ಯಯಿಸಿ ಮೀನು ಮಾರುಕಟ್ಟೆ ನಿರ್ಮಿತವಾಗುತ್ತಿದೆ. ಆದರೆ ಮಾರುಕಟ್ಟೆಯ ಒಳಾಂಗಣವೂ ಧೂಳು ಹಿಡಿದಿದ್ದು, ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಹಾಗೂ ಅಧಿಕಾರಿಗಳು ಜವಾಬ್ದಾರಿ ವಹಿಸಿ ಕಟ್ಟಡವನ್ನು ಶೀಘ್ರದಲ್ಲಿ ಮಹಿಳಾ ಮೀನು ವ್ಯಾಪಾರಿಗೆ ಬಿಟ್ಟುಕೊಟ್ಟು ವ್ಯಾಪಾರಕ್ಕೆ ಅನೂಕೂಲಮಾಡಿಕೊಡಬೇಕಾಗಿದೆ.