ಕಾರವಾರ: ಮಳೆ ಅನಾಹುತ ತಡೆಯಲು ಎಲ್ಲಾ ರೀತಿಯ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳುವುದು ಅತ್ಯವಶ್ಯಕವಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಹರೀಶಕುಮಾರ ಕೆ. ಅವರು ವಿವಿಧ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮುಂಗಾರು ಮಳೆ ಹಾನಿ ಎದುರಿಸುವ ಕುರಿತು ಕರೆಯಲಾಗಿದ್ದ ವಿವಿಧ ಇಲಾಖೆಗಳ ಸಭೆಯಲ್ಲಿ ಈ ಕುರಿತು ಸಮಾಲೋಚನೆ ನಡೆಸಿದರು.
ಎಲ್ಲಾ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಿದರೆ ಮಾತ್ರ ಮಳೆಯಿಂದ ಎದುರಾಗುವ ಅಪಾಯವನ್ನು ಸಮರ್ಪಕವಾಗಿ ನಿಭಾಯಿಸಲು ಸಾಧ್ಯವಾಗುತ್ತದೆ, ಆಯಾ ಉಪ ಉಪವಿಭಾಗದ ಸಹಾಯಕ ಆಯುಕ್ತರಿಗೆ ವಿಪತ್ತು ನಿರ್ವಹಿಸುವ ಎಲ್ಲ ಅಧಿಕಾರಗಳನ್ನು ನೀಡಲಾಗಿದ್ದು, ಎಸಿ ಉತ್ತರದಾಯಿ ವ್ಯಕ್ತಿಯಾಗಿರುತ್ತಾರೆ, ಒಂದು ವಾರದೊಳಗೆ ಎಲ್ಲಾ ಇಲಾಖೆಗಳು ಒಂದು ಕ್ರೀಯಾ ಯೋಜನೆ ತಯಾರಿಸಿ ಸಲ್ಲಿಸಬೇಕು ಎಂದರು.
ಕ್ರೀಯಾ ಯೋಜನೆಯಲ್ಲಿ ಜನ-ಜಾನುವಾರು ರಕ್ಷಿಸುವಂತಹ ಕಾರ್ಯಕ್ಕೆ ಮೊದಲ ಆಧ್ಯತೆ ನೀಡಬೇಕು, ಆಸ್ತಿ-ಪಾಸ್ತಿ ಹಾನಿಯಾಗುವ ಸಂಭನಿಯಗಳತ್ತ ಕೂಡಾ ಗಮನ ಹರಿಸಿ, ತುರ್ತು ಪರಸ್ಥಿತಿಯಲ್ಲಿ ಸಂಪರ್ಕಿಸಲು ಸಹಾಯವಾಣಿ ಕೇಂದ್ರಗಳ ವ್ಯವಸ್ಥೆ ಮಾಡಿಕೊಳ್ಳಿ, ಅಧಿಕಾರಿಗಳ ಸಂವಹನ ಸಂಪರ್ಕ ಕೂಡಾ ವ್ಯವಸ್ಥಿತವಾಗಿರಲಿ ಎಂದು ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿ: ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿಯಿಂದ ನೈಸರ್ಗಿಕ ಚರಂಡಿಗಳ ಮೂಲಕ ನೀರು ಹರಿದು ಹೋಗಲು ಅಡ್ಡಿಯಾಗುರುವ ಸಾಧ್ಯತೆಯಿದೆ. ರಾಷ್ಟ್ರೀಯ ಹೆದ್ದಾರಿಯ ಉದ್ದಕ್ಕೂ ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ, ಎಲ್ಲಿಯೂ ನೀರು ನಿಂತು ಕೃತಕ ನೆರೆ ಉಂಟಾಗದಂತೆ ಕ್ರಮ ಕೈಗೊಳ್ಳಬೇಕು. ಹೆದ್ದಾರಿ ಅಗಲೀಕರಣಕ್ಕೆ ಹಲವು ಕಡೆಗಳಲ್ಲಿ ಗುಡ್ಡಗಳನ್ನು ಕಡಿಯಲಾಗಿದ್ದು, ಮಳೆಯಿಂದ ಕುಸಿತವಾಗದಂತೆ ಈಗಲೇ ಸೂಕ್ತ ರಕ್ಷಣಾ ಕ್ರಮ ಕೈಗೊಳ್ಳಬೇಕು ಎಂದರು.
ಇಲಾಖೆಗಳ ಮಧ್ಯ ಸಮನ್ವಯ : ಮಳೆಗಾಳಿಯಿಂದ ಮರಗಳು, ವಿದ್ಯುತ್ ಕಂಬಗಳು ಬಿದ್ದು ರಸ್ತೆ ಸಂಪರ್ಕ ಅಡ್ಡಿಯಂತಹ ಸಂದರ್ಭಗಳಲ್ಲಿ ಸಂಬಂಧಪಟ್ಟ ಇಲಾಖೆಗಳು ತಕ್ಷಣ ಕಾರ್ಯಪ್ರವೃತ್ತರಾಗಬೇಕು. ಇಲಾಖೆಗಳು ಮತ್ತು ಅಧಿಕಾರಿಗಳ ಸಮನ್ವಯವಿರಬೇಕು ಎಂದು ತಿಳಿಸಿದರು.
ದೂರುಗಳು ಮರುಕಳಿಸದಿರಲಿ : ಕಳೆದ ಮಳೆಗಾಲ ಸಂಧರ್ಭದಲ್ಲಿ ಜಾನುವಾರುಗಳನ್ನು ಬೇರೆ ಸ್ಥಳಗಳಿಗೆ ಸ್ಥಳಾಂತರಿಸಲಿಲ್ಲ ಸೂಕ್ತ ಲಸಿಕೆ ನೀಡಿಲ್ಲ, ಎಂಬ ದೂರುಗಳಿವೆ ಇದಕ್ಕೆ ಆಸ್ಪದೆ ನೀಡದಂತೆ ಪಶು ಸಂಗೋಪನಾ ಇಲಾಖೆ ಗಮನ ಹರಿಸಬೇಕು ಎಂದು ಹೇಳಿದರು
ಈ ವೇಳೆ ಉಪಸ್ಥಿತರಿದ್ದ ಜಿ.ಪಂ. ಸಿಇಒ ಎಮ್ ರೋಶನ ಅವರು ಮಾತನಾಡಿ ಎಲ್ಲಾ ನಗರ, ಗ್ರಾಮೀಣ ವ್ಯಾಪ್ತಿಯಲ್ಲಿ ಚರಂಡಿ ಸ್ವಚ್ಛತಾ ಕಾರ್ಯ ಹಾಗೂ ಗಟಾರ ಹೂಳು ತೆಗೆಯುವ ಕಾರ್ಯವನ್ನು ಈಗಿನಿಂದಲೇ ಆರಂಬಿಸಿ, ಮತ್ತು ವಿಪತ್ತು ನಿರ್ವಹಣೆಯ ಕ್ರೀಯಾ ಯೋಜನೆ ಮಾಡಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಪೊಲೀಸ್ವರಿಷ್ಠಾಧಿಕಾರಿ ವಿನಾಯಕ ಪಾಟೀಲ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡ, ಅಪರ ಜಿಲ್ಲಾಧಿಕಾರಿ ನಾಗರಾಜ ಸಿಂಗ್ರೇರ್ ಉಪಸ್ಥಿತರಿದ್ದರು.