ದಿಲ್ಲಿ ಹಿಂಸಾಚಾರ: ಅಮಿತ್ ಶಾಗೆ ಸಲ್ಲಿಸಲಾದ ‘ಸತ್ಯಶೋಧನಾ ವರದಿ’ಯಲ್ಲಿ ಹಲವು ಸುಳ್ಳುಗಳು!

Source: sonews | Published on 14th June 2020, 8:56 PM | National News | Special Report | Don't Miss |

ಗೃಹಸಚಿವ ಅಮಿತ್ ಶಾ ಮೇ 29ರಂದು ದೆಹಲಿಯ ಎನ್ ಜಿಒ ‘ಕಾಲ್ ಫಾರ್ ಜಸ್ಟೀಸ್‍’ನ ‘ಸತ್ಯಶೋಧನಾ ವರದಿ’ಯನ್ನು ಸ್ವೀಕರಿಸಿದ್ದಾರೆ. ಹಲವು ಮಾಧ್ಯಮಗಳು ಇದನ್ನು ವರದಿ ಮಾಡಿವೆ. ನ್ಯಾಯಮೂರ್ತಿ ಅಂಬಾದಾಸ್ ಜೋಶಿ (ಮುಂಬೈ ಹೈಕೋರ್ಟ್ ನ ನಿವೃತ್ತ ನ್ಯಾಯಾಧೀಶ) ಅಧ್ಯಕ್ಷತೆಯ ಸತ್ಯಶೋಧನಾ ಸಮಿತಿಯಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಎಂ.ಎಲ್.ಮೀನಾ, ನಿವೃತ್ತ ಐಪಿಎಸ್ ಅಧಿಕಾರಿ ವಿವೇಕ್ ದುಬೆ, ಎಐಐಎಂಎಸ್ ಮಾಜಿ ನಿರ್ದೇಶಕ ಡಾ.ಟಿ.ಡಿ.ಡೋಗ್ರಾ, ಸಾಮಾಜಿಕ ಉದ್ಯಮಿ ನೀರಾ ಮಿಶ್ರಾ ಮತ್ತು ವಕೀಲ ನೀರಜ್ ಅರೋರಾ ಇದ್ದಾರೆ.

altnews.in ಈ ವರದಿಯ ಪರಾಮರ್ಶೆ ನಡೆಸಿದ್ದು, ಇದರಲ್ಲಿರುವ ತಪ್ಪು ಮಾಹಿತಿಯನ್ನು ನೋಡಿದಾಗ ಇದನ್ನು ಸತ್ಯಶೋಧನಾ ವರದಿ ಎಂಬ ವರ್ಗಕ್ಕೆ ಸೇರಿಸಲು ಸಾಧ್ಯವಿಲ್ಲ ಎನ್ನುವುದು ತಿಳಿದುಬಂದಿದೆ. ಇದನ್ನು ಈ ಕೆಳಗಿನಂತೆ ವರ್ಗೀಕರಿಸಬಹುದು:

1.ಈಗಾಗಲೇ ಫ್ಯಾಕ್ಟ್ ಚೆಕ್ ಮಾಡಲ್ಪಟ್ಟ ಸುಳ್ಳುಗಳನ್ನು ಆಧರಿಸಿದ ವರದಿ

2.ತಪ್ಪುದಾರಿಗೆಳೆಯುವ ಘಟನಾವಳಿ ಹಾಗೂ ಅನುಕ್ರಮಣಿಕೆ

3.ಏಕಪಕ್ಷೀಯ ಸತ್ಯಶೋಧನೆ

4.ಸುಳ್ಳು ಹರಡುವ ವೆಬ್‍ಸೈಟ್ ಮೂಲದಿಂದ ಪಡೆದ ಮಾಹಿತಿ

ಫ್ಯಾಕ್ಟ್ ಚೆಕ್

ಈಗಾಗಲೇ ಸತ್ಯಶೋಧನೆ ಮಾಡಿದ ಬಗ್ಗೆ ತಪ್ಪುಮಾಹಿತಿ

ವರದಿ ಹೇಳಿದ್ದೇನು?: ಸಿಎಎ ವಿರೋಧಿ ಪ್ರತಿಭಟನಾಕಾರರ ತೀವ್ರ ಲಾಬಿಯ ನಡುವೆಯೂ, ಅಂತರರಾಷ್ಟ್ರೀಯ ಸಮುದಾಯ ಪ್ರತಿಭಟನಕಾರರಿಗೆ ಸಾಮಾಜಿಕ, ನೈತಿಕ ಅಥವಾ ರಾಜಕೀಯ ಬೆಂಬಲ ನೀಡಿಲ್ಲ.

ಫ್ಯಾಕ್ಟ್ ಚೆಕ್: ಸಿಎಎ ವಿರೋಧಿ ಪ್ರತಿಭಟನೆ ಕೇವಲ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ

ವರದಿಯ ಮೊದಲ ಪ್ಯಾರಾದಲ್ಲಿ, “ಸಿಎಎ ವಿರೋಧಿ ಪ್ರತಿಭಟನಾಕಾರರ ತೀವ್ರ ಲಾಬಿಯ ನಡುವೆಯೂ, ಅಂತರರಾಷ್ಟ್ರೀಯ ಸಮುದಾಯ ಸಾಮಾಜಿಕ, ನೈತಿಕ ಅಥವಾ ರಾಜಕೀಯ ಬೆಂಬಲ ನೀಡಿಲ್ಲ” ಎಂದು ಹೇಳಿದೆ.

ಆದರೆ ಈ ಪ್ರತಿಪಾದನೆ ಆಧಾರರಹಿತ; ಏಕೆಂದರೆ ಸಿಎಎ ವಿರೋಧಿ ಪ್ರತಿಭಟನೆ ಭಾರತದಾಚೆ ಹಲವು ದೇಶಗಳಲ್ಲಿ ನಡೆದಿವೆ. ಎನ್‍ಡಿಟಿವಿ, ದ ಹಿಂದೂ ಹಾಗೂ ಡೆಕ್ಕನ್ ಹೆರಾಲ್ಡ್ ಸೇರಿದಂತೆ ಹಲವು ಮಾಧ್ಯಮಗಳು ಇದನ್ನು ವರದಿ ಮಾಡಿವೆ.

ಫೆಬ್ರವರಿ 6ರಂದು ಆಲ್ಟ್ ನ್ಯೂಸ್ ಪ್ರಕಟಿಸಿದ ಮಾಧ್ಯಮ ವಿಶ್ಲೇಷಣೆ ವರದಿಯಲ್ಲಿ, ಇತರ ದೇಶಗಳಲ್ಲಿ ನಡೆದ ಹಲವು ಸಿಎಎ ವಿರೋಧಿ ಪ್ರತಿಭಟನೆಗಳನ್ನು ದಾಖಲಿಸಲಾಗಿದೆ.

ವರದಿ ಹೇಳಿದ್ದೇನು?: ಸಿಎಎ ವಿರೋಧಿ ಹೋರಾಟಗಾರರಿಗೆ ಪ್ರತಿಭಟನೆಗೆ ಹಣ ಪಾವತಿಸಲಾಗುತ್ತಿದೆ ಎಂಬುದಕ್ಕೆ ಪುರಾವೆಯಾಗಿ ನೀಡಿದ ವಿಡಿಯೊ ತುಣುಕು

ಫ್ಯಾಕ್ಟ್ ಚೆಕ್: ಈ ವಿಡಿಯೊ ತುಣುಕಿನಲ್ಲಿ ವ್ಯಕ್ತಿಯೊಬ್ಬರು ದೆಹಲಿ ಗಲಭೆ ಸಂತ್ರಸ್ತರಿಗೆ ದಾನ ರೂಪದಲ್ಲಿ ನೆರವು ನೀಡುತ್ತಿದ್ದಾರೆ. ‘ಇದನ್ನು ಪ್ರತಿಭಟನಕಾರರಿಗೆ ಹಣ ನೀಡುತ್ತಿರುವುದು’ ಎಂದು ಸುಳ್ಳು ಹರಡಿದ ಬಗ್ಗೆ ಈಗಾಗಲೇ ಫ್ಯಾಕ್ಟ್ ಚೆಕ್ ನಡೆಸಲಾಗಿದೆ.

ವರದಿಯ 21ನೇ ಪುಟದಲ್ಲಿ ಅಂದರೆ 5ನೇ ಅಧ್ಯಾಯದಲ್ಲಿ “ಸಮಿತಿ ನಡೆಸಿದ ವಿಚಾರಣೆ”ಶೀರ್ಷಿಕೆಯಡಿ ಹಲವು ಸಾಕ್ಷಿಗಳನ್ನು ಪುರಾವೆಯಾಗಿ ನೀಡಲಾಗಿದೆ. ಇದು ಹೇಳುವಂತೆ, “ಪ್ರತಿ ಪಾಳಿಗೆ 500 ರೂಪಾಯಿಗಳಂತೆ ಮಹಿಳೆಯರಿಗೆ ಹಾಗೂ 700-800 ರೂಪಾಯಿವರೆಗೆ ಪುರುಷರಿಗೆ, ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಕ್ಕಾಗಿ ನೀಡಲಾಗಿದೆ. ಸಿಎಎ ವಿರೋಧಿ ಪ್ರತಿಭಟನೆ ಒಂದೂವರೆ ತಿಂಗಳಿನಿಂದ 8 ಗಂಟೆ ಅವಧಿಯ ಎರಡು ಪಾಳಿಗಳಲ್ಲಿ ನಡೆಯುತ್ತಿದೆ”ಇದನ್ನು ದೃಢಪಡಿಸುವ ಸಲುವಾಗಿ ಪಾಕಿಸ್ತಾನಿ-ಕೆನಡಿಯನ್ ಅಂಕಣಕಾರ ತಾರೇಕ್ ಫತಾಹ್ ಮಾಡಿದ ಟ್ವೀಟ್‍ನ ಸ್ಕ್ರೀನ್‍ಶಾಟ್ ನೀಡಲಾಗಿದೆ.

ಮಾರ್ಚ್ 2ರಂದು ಆಲ್ಟ್ ನ್ಯೂಸ್ ಫ್ಯಾಕ್ಟ್ ಚೆಕ್ ಪತ್ತೆ ಮಾಡಿದಂತೆ, ವೈರಲ್ ವಿಡಿಯೊದಲ್ಲಿರುವ ವ್ಯಕ್ತಿ ವಾಸ್ತವವಾಗಿ ದೆಹಲಿ ಗಲಭೆಯ ಸಂತ್ರಸ್ತರಿಗೆ ನಗದು ರೂಪದ ನೆರವು ನೀಡುತ್ತಿದ್ದಾರೆ. ಫತಾಹ್ ಟ್ವಿಟರ್‍ನಲ್ಲಿ ಈ ಹಿಂದೆಯೂ ತಪ್ಪು ಮಾಹಿತಿ ನೀಡಿದ ಹಲವು ನಿದರ್ಶನಗಳನ್ನು ಕೂಡಾ ಆಲ್ಟ್ ನ್ಯೂಸ್ ವರದಿ ಮಾಡಿತ್ತು.

ವರದಿ ಹೇಳಿದ್ದೇನು?: ಅಮಾನತ್ತುಲ್ಲಾ ಖಾನ್ ಜಾಮಿಯಾನಗರದಲ್ಲಿ ದೊಂಬಿಯ ನೇತೃತ್ವ ವಹಿಸಿದ್ದರು.

ಫ್ಯಾಕ್ಟ್ ಚೆಕ್: ಗಲಭೆ ವೇಳೆ ಅಮಾನತ್ತುಲ್ಲಾ ಖಾನ್ ಶಾಹೀನ್‍ ಭಾಗ್‍ನಲ್ಲಿದ್ದರು

ವರದಿಯ ಅಧ್ಯಾಯ 5ರ ‘ಚಟುವಟಿಕೆಗಳ ಟೈಮ್‍ಲೈನ್’ ಭಾಗದಲ್ಲಿ “15.12.2019ರಂದು ಎಎಪಿ ಶಾಸಕ ಹಾಗೂ ದೆಹಲಿ ಸುನ್ನಿ ವಕ್ಫ್ ಮಂಡಳಿ ಅಧ್ಯಕ್ಷ ಅಮಾನತುಲ್ಲಾ ಖಾನ್ ಅವರು ಜಾಮಿಯಾನಗರದ ದೊಂಬಿಯ ನೇತೃತ್ವ ವಹಿಸಿದ್ದು ಕಂಡುಬರುತ್ತದೆ. ಬಸ್ಸುಗಳಿಗೆ ಬೆಂಕಿ ಹಚ್ಚಿ, ‘ಹಿಂದುವೋಂಸೇ ಅಜಾದಿ’ ಎಂಬ ಘೋಷಣೆ ಈ ಪ್ರದೇಶದಲ್ಲಿ ಕೂಗಲಾಗಿದೆ” ಎಂದು ಉಲ್ಲೇಖಿಸಲಾಗಿದೆ.

ಡಿಸೆಂಬರ್ 19ರಂದು ಮಧ್ಯಾಹ್ನ 2ರಿಂದ ಸಂಜೆ 6ರವರೆಗೆ ಅಮಾನತುಲ್ಲಾ ಖಾನ್ ಶಾಹೀನ್‍ ಭಾಗ್ ‍ನಲ್ಲಿ ಇದ್ದರು ಎನ್ನುವುದು ಹಲವು ಸಾಕ್ಷಿಗಳ ಜತೆ ಮಾತನಾಡಿದ ಬಳಿಕ ಆಲ್ಟ್ ನ್ಯೂಸ್ ಫ್ಯಾಕ್ಟ್ ಚೆಕ್‍ ಖಾತರಿ ಪಡಿಸಿದೆ. ಶಾಹೀನ್‍ ಭಾಗ್ ‍ನಲ್ಲಿ ಯಾವುದೇ ಬಸ್ಸಿಗೆ ಬೆಂಕಿ ಹಚ್ಚಿದ್ದು ಮಾಧ್ಯಮಗಳಲ್ಲಿ ವರದಿಯಾಗಿಲ್ಲ.

ವರದಿ ಹೇಳಿದ್ದೇನು?: ಹರ್ಷ ಮಂದರ್ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾದಲ್ಲಿ ಮಾಡಿದ ಭಾಷಣದಲ್ಲಿ ಹಿಂಸೆಗೆ ಕುಮ್ಮಕ್ಕು ನೀಡಿದ್ದರು.

‘ಸಂಬಂಧಿತ ಮತ್ತು ಸಾಂದರ್ಭಿಕ ಘಟನೆ’ ಎಂಬ ಆರನೇ ಅಧ್ಯಾಯದಲ್ಲಿ, “ಸುಪ್ರೀಂಕೋರ್ಟ್‍ನಲ್ಲಿ ನನಗೆ ನಂಬಿಕೆ ಇಲ್ಲ. ಇದು ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಜನ್ಸ್ (NRC), ಅಯೋಧ್ಯೆ ತೀರ್ಪು ಮತ್ತು ಕಾಶ್ಮೀರ ಪ್ರಕರಣಗಳಲ್ಲಿ ಮಾನವೀಯತೆ, ಜಾತ್ಯತೀತತೆ ಮತ್ತು ಸಮಾನತೆಯನ್ನು ರಕ್ಷಿಸಿಲ್ಲ... ಅಂತಿಮ ನ್ಯಾಯ ಬೀದಿಗಳಲ್ಲೇ ಸಿಗಬೇಕು”ಎಂದು ಹರ್ಷ ಮಂದರ್ ಹೇಳಿದ್ದಾಗಿ ವಿವರಿಸಲಾಗಿದೆ.

ಮಾರ್ಚ್ 4ರಂದು ಆಲ್ಟ್ ನ್ಯೂಸ್ ಫ್ಯಾಕ್ಟ್ ಚೆಕ್ ವರದಿ ಮಾಡಿದಂತೆ, ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಲಾದ, ಹರ್ಷ ಮಂದರ್ ಅವರು ಜಾಮಿಯಾ ಭಾಷಣದಲ್ಲಿ ಹಿಂಸೆಗೆ ಕುಮ್ಮಕ್ಕು ನೀಡಿದ್ದಾರೆ ಎನ್ನಲಾದ ವಿಡಿಯೊವನ್ನು ಬಿಜೆಪಿ ಬೆಂಬಲಿಗರು ವೈರಲ್ ಮಾಡಿದ್ದು, ಇದನ್ನು ಮಾಧ್ಯಮದ ಒಂದು ವರ್ಗ ವೈಭವೀಕರಿಸಿದೆ. ಬೀದಿಗೆ ಬಂದು ಹೋರಾಡಿ ಎಂದು ಹರ್ಷ ಮಂದರ್ ನೀಡಿದ ಕರೆ ಹಿಂಸೆಗೆ ಕಾರಣವಾಗಿದೆ ಎಂದು ಈ ಮಾಧ್ಯಮವರ್ಗ ಬಿಂಬಿಸಿತ್ತು. ಆದರೆ ಹರ್ಷ ಮಂದರ್ ಹೇಳಿದ್ದು, ಪ್ರೀತಿಯ ಆದರ್ಶಗಳನ್ನು ಆಧರಿಸಿರುವ ಸಂವಿಧಾನದ ಆತ್ಮವನ್ನು ರಕ್ಷಿಸಲು ಜನ ಬೀದಿಗೆ ಬರುವ ಅಗತ್ಯವಿದೆ ಎಂದು. ಈ ಪ್ರತಿಪಾದನೆಯನ್ನು thequint.com ಮತ್ತು boom ಕೂಡಾ ಪರಾಮರ್ಶಿಸಿತ್ತು.

ವರದಿಯಲ್ಲಿ ಮಂದರ್ ಅವರ ಹೇಳಿಕೆಯನ್ನು ತಪ್ಪಾಗಿ ಉಲ್ಲೇಖಿಸಿದ್ದು, ಇದು ತಪ್ಪುದಾರಿಗೆ ಎಳೆಯುವಂತಿದೆ. ಮಂದರ್ ಅವರ ಹೇಳಿಕೆಯ ಭಾಷಾಂತರವನ್ನು ಆಲ್ಟ್ ನ್ಯೂಸ್‍ ನ  ಫ್ಯಾಕ್ಟ್ ಚೆಕ್‍ ನಲ್ಲಿ ಉಲ್ಲೇಖಿಸಲಾಗಿತ್ತು.

ವರದಿ ಹೇಳಿದ್ದೇನು?: ಡೊನಾಲ್ಡ್ ಟ್ರಂಪ್ ಭೇಟಿಗೆ ಮುನ್ನ ದೊಂಬಿಗೆ ಉಮರ್ ಖಾಲಿದ್ ಕರೆ ನೀಡಿದ್ದರು

ಸತ್ಯಾಂಶ: ಖಾಲಿದ್ ಅವರ ಭಾಷಣದ ದೃಶ್ಯ ತುಣುಕನ್ನು ತಪ್ಪುದಾರಿಗೆ ಎಳೆಯುವ ರೀತಿಯ ಪ್ರತಿಪಾದನೆಯೊಂದಿಗೆ ವೈರಲ್ ಮಾಡಲಾಗಿದೆ.

ನಾಲ್ಕು ಕಡೆಗಳಲ್ಲಿ (ಪುಟ 3, 9, 13 ಮತ್ತು 43) ಉಮರ್ ಖಾಲಿದ್ ಅವರು ಫೆಬ್ರವರಿ 17ರಂದು ಮಾಡಿದ ಭಾಷಣದಲ್ಲಿ ಟ್ರಂಪ್ ಭೇಟಿಗೆ ಮುನ್ನ ಗಲಭೆ ನಡೆಸುವಂತೆ ಕರೆ ನೀಡಲಾಗಿದೆ ಎಂದು ವಿವರಿಸಲಾಗಿದೆ. ವರದಿಯ 3ನೇ ಪುಟದಲ್ಲಿ ಹೇಳಿದಂತೆ “ಉಮರ್ ಖಾಲಿದ್ ಅವರು, ಅಮೆರಿಕ ಅಧ್ಯಕ್ಷರ ಭೇಟಿ ವೇಳೆ ಗಲಭೆ ನಡೆಯಲಿದೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ”. ಇದನ್ನು ನಾಲ್ಕು ಕಡೆಗಳಲ್ಲಿ ಉಲ್ಲೇಖಿಸಲಾಗಿದ್ದರೂ, 3ನೇ ಪುಟ ಹಾಗೂ 48ನೇ ಪುಟದ ಅಡಿಟಿಪ್ಪಣಿಯಲ್ಲಿ ಒಪಿ ಇಂಡಿಯಾ ಮತ್ತು ದ ರಿಪಬ್ಲಿಕ್‍ನ ಉಲ್ಲೇಖವನ್ನು ನೀಡಲಾಗಿದೆ.

ಖಾಲಿದ್ ಮಹಾರಾಷ್ಟ್ರದ ಅಮರಾವತಿಯಲ್ಲಿ ಫೆಬ್ರವರಿ 17ರಂದು ಮಾಡಿದ ಭಾಷಣವೇ ಸಂದೇಹಾಸ್ಪದ. ಆ ಭಾಷಣದ್ದು ಎನ್ನಲಾದ 40 ಸೆಕೆಂಡ್‍ಗಳ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು ಎಂದು thewire.in ವರದಿ ಮಾಡಿದೆ.

ಆದರೆ, ಖಾಲಿದ್ ಅವರು ದೊಂಬಿಗೆ ಕರೆ ನೀಡಿದ್ದಾರೆ ಎನ್ನುವ ಪ್ರತಿಪಾದನೆ ಸುಳ್ಳು. ಮೊದಲ ಕೆಲ ನಿಮಿಷಗಳಲ್ಲಿ ಅವರು, “ಐಪಿಎಸ್ ಅಬ್ದುರ್ರಹ್ಮಾನ್ ಮಾತನಾಡುತ್ತಿರುವಾಗ ಅವರು ಗಾಂಧೀಜಿಯ ಬಗ್ಗೆ ಹೇಳಿದ್ದಾರೆ. ಅಹಿಂಸೆ ಮತ್ತು ಸತ್ಯಾಗ್ರಹದ ಅಸ್ತ್ರವನ್ನು ನಮಗೆ ಹೋರಾಟಕ್ಕಾಗಿ ಮಹಾತ್ಮಾಗಾಂಧಿ ನೀಡಿದ್ದಾರೆ” ಎಂದು ವಿವರಿಸಿದ್ದರು.

ಬಳಿಕ “ನಾವು ಹಿಂಸೆಗೆ ಹಿಂಸೆಯ ಉತ್ತರ ನೀಡಬಾರದು; ದ್ವೇಷಕ್ಕೆ ದ್ವೇಷದ ಉತ್ತರ ನೀಡಬಾರದು; ಅವರು ದ್ವೇಷ ಹರಡಿದರೆ, ನಾವು ಪ್ರೀತಿಯಿಂದ ಸ್ಪಂದಿಸಬೇಕು. ಅವರು ನಮಗೆ ಲಾಠಿಯಿಂದ ಹೊಡೆದರೆ, ನಾವು ತ್ರಿವರ್ಣವನ್ನು ಎತ್ತಿಹಿಡಿಯಬೇಕು. ಅವರು ಗುಂಡು ಹಾರಿಸಿದರೆ, ನಾವು ಸಂವಿಧಾನವನ್ನು ಎತ್ತಿಹಿಡಿಯಬೇಕು. ಅವರು ಜೈಲಿಗೆ ತಳ್ಳಿದರೆ, ಸಾರೇ ಜಹಾಂಸೆ ಅಚ್ಚಾ ಹಿಂದೂಸ್ತಾನ್ ಹಮಾರಾ ಎನ್ನುತ್ತಾ ಜೈಲಿಗೆ ಹೋಗಬೇಕು” ಎಂದು ಹೇಳಿದ್ದನ್ನು thequint.com ವರದಿ ಮಾಡಿದೆ. ಖಾಲಿದ್ ಭಾಷಣದ ಇಂಗ್ಲಿಷ್ ಅವತರಣಿಕೆ ಆನ್‍ಲೈನ್‍ ನಲ್ಲಿ ಲಭ್ಯ.

2. ತಪ್ಪುದಾರಿಗೆಳೆಯುವ ಘಟನಾವಳಿಗಳು

ಐದು ಕಡೆಗಳಲ್ಲಿ (ಪುಟ 3, 10, 11, 30 ಮತ್ತು 60), ದೆಹಲಿ ಗಲಭೆಯ ಹಿಂದಿನ ದಿನ (ಫೆಬ್ರವರಿ 23ರಂದು) ವಿಧ್ವಂಸಕ ಕೃತ್ಯಗಳಲ್ಲಿ ತರಬೇತಿ ಪಡೆದ 15-35 ವರ್ಷ ವಯಸ್ಸಿನ ಸುಮಾರು 7000 ಮಂದಿ ಈದ್ಗಾದಲ್ಲಿ ಸಭೆ ಸೇರಿದ್ದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಸದರ್ ಬಜಾರ್‍ನಲ್ಲಿ ಸೇರಿದ ಶಾಹಿ ಈದ್ಗಾ ಮಸೀದಿಯಲ್ಲಿ 7000 ಮಂದಿಯ ಧರ್ಮವನ್ನು ವರದಿ ಉಲ್ಲೇಖಿಸಿಲ್ಲ. ಆದರೆ 3ನೇ ಪುಟದಲ್ಲಿ ನೀಡಿದ ಸಾರಾಂಶದಲ್ಲಿ ಉಲ್ಲೇಖಿಸಿರುವ ಹೇಳಿಕೆಗಳಂತೆ ಈ 7000 ಮಂದಿ ಮುಸ್ಲಿಂ ಸಮುದಾಯಕ್ಕೆ ಸೇರಿದವರು ಎನ್ನುವುದು ಸ್ಪಷ್ಟವಾಗಿ ತಿಳಿಯುತ್ತದೆ.

ವರದಿ ಒಬ್ಬ ಹಣ್ಣಿನ ವ್ಯಾಪಾರಿಯ ಹೇಳಿಕೆಯನ್ನು ಒಳಗೊಂಡಿದ್ದು, ‘7000 ಮಂದಿ ಅಂತಿಮ ಕದನಕ್ಕಾಗಿ ಬಂದಿದ್ದಾರೆ’ ಎಂದು ಆತ ಹೇಳಿದ್ದಾನೆ ಎಂದು ಆರೋಪಿಸಲಾಗಿದೆ.

ಗೂಗಲ್‍ ನಲ್ಲಿ ಮತ್ತು ಟ್ವಿಟ್ಟರ್‍ ನಲ್ಲಿ ‘7000 ಮತ್ತು ಈದ್ಗಾ’ ಎಂದು ಹುಡುಕಿದಾಗ ಯಾವ ಮುಖ್ಯವಾಹಿನಿ ಮಾಧ್ಯಮ ಕೂಡಾ ಈ ಬಗ್ಗೆ ವರದಿ ಮಾಡಿರುವುದು ಕಾಣಿಸುವುದಿಲ್ಲ. ಈದ್ಗಾದಲ್ಲಿ ನಿಜವಾಗಿಯೂ, ವಿಧ್ವಂಸಕ ಕೃತ್ಯಗಳಲ್ಲಿ ತರಬೇತಿ ಪಡೆದ 7000 ಮಂದಿ  ಸೇರಿದ್ದರೆ, ಅದು ದೊಡ್ಡ ಸುದ್ದಿಯಾಗುತ್ತಿತ್ತು. ಸಂಬಂಧಪಟ್ಟ ಠಾಣಾಧಿಕಾರಿಯ ಬಗ್ಗೆ ಕೂಡಾ ಈ ಬಗ್ಗೆ ಕೇಳಿದಾಗ ಇಂಥ ಯಾವ ಘಟನೆಯೂ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಫೆಬ್ರವರಿ 23ರಂದು ಯುದ್ಧ ಸಾರುವ ಸಲುವಾಗಿ 7000 ಮಂದಿ ಜಮಾಯಿಸಿದ್ದಾರೆ ಎಂದು ಸತ್ಯಶೋಧನಾ ವರದಿಯಲ್ಲಿ ಯಾವ ವಿಶ್ವಾಸಾರ್ಹ ಮೂಲವನ್ನೂ ಉಲ್ಲೇಖಿಸದೇ ಹೇಳಿರುವುದನ್ನು ನೋಡಿದರೆ, ಮುಸ್ಲಿಂ ಸಮುದಾಯದಿಂದಲೇ ದೆಹಲಿ ಗಲಭೆ ಆರಂಭವಾಗಿದೆ ಎಂದು ನಿರೂಪಿಸಲು ವರದಿ ಹೊರಟದ್ದು ಸ್ಪಷ್ಟವಾಗುತ್ತದೆ.

ಮೀರ್ ಫೈಸಲ್ ಅವರ ಪೋಸ್ಟ್

‘ದಾಳಿಯ ಸಕಾಲಿಕ ಜಾರಿ’ ಎಂಬ ಶೀರ್ಷಿಕೆಯ ಸೆಕ್ಷನ್ 8.1ರಲ್ಲಿ ಅಂದರೆ ವರದಿಯ 41ನೇ ಪುಟದಲ್ಲಿ ಜಾಮಿಯಾ ಟೈಮ್ಸ್ ಬಾತ್ಮೀದಾರ ಮೀರ್ ಫೈಸಲ್ ಅವರ ಫೇಸ್‍ ಬುಕ್ ಪೋಸ್ಟ್ ‍ನ ಸ್ಕ್ರೀನ್‍ ಶಾಟ್ ಲಗತ್ತಿಸಲಾಗಿದೆ. ಫೈಸಲ್, ರಸ್ತೆತಡೆ ನಡೆಸುವಂತೆ ಕುಮ್ಮಕ್ಕು ನೀಡಿದ್ದರು ಎಂದು ವರದಿ ಹೇಳಿದೆ. ಸ್ಕ್ರೀನ್‍ ಶಾಟ್ ನಲ್ಲಿ ಫೈಸಲ್ ಬರಹದ ಅಕ್ಷರಗಳು ಕಾಣಿಸುತ್ತಿಲ್ಲ.

ಮಕ್ತೂಬ್ ಮೀಡಿಯಾದಲ್ಲಿ ಇಂಟರ್ನಿಯಾಗಿರುವ 19 ವರ್ಷ ವಯಸ್ಸಿನ ಫೈಸಲ್ ಜತೆ Altnews.in ಮಾತನಾಡಿದಾಗ, ತಾನು ಜಾಮಿಯಾ ನ್ಯೂಸ್ ನ ಫೇಸ್‍ ಬುಕ್ ಪೇಜ್ ಸಂಪಾದಕನಾಗಿ ಕೆಲಸ ಮಾಡಿದ್ದೆ. ಆದರೆ ಜಾಮಿಯಾ ಟೈಮ್ಸ್ ಗೆ ಕೆಲಸ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು. ವರದಿಯಲ್ಲಿ ಉಲ್ಲೇಖಿಸಿರುವ ಪೋಸ್ಟ್ ಅನ್ನು ನಾನು ಪ್ರೈವೇಟ್ ಮಾಡಿದ್ದೆ ಎಂದವರು ಹೇಳುತ್ತಾರೆ. ಅವರ ಪ್ರಕಾರ ಫೆಬ್ರವರಿ 22ರಂದು ಶಾಹೀನ್‍ ಭಾಗ್ ರಸ್ತೆ ತಡೆ ತೆರವುಗೊಳಿಸಿದ ಬಳಿಕ ಗುಂಪೊಂದು ಸಂಭ್ರಮಿಸುತ್ತಿರುವ ಫೋಟೊ ಇದಾಗಿದೆ. ‘ದ ಹಿಂದೂ’ ಹಾಗೂ ‘ದ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್’ ಕೂಡಾ ಈ ಬಗ್ಗೆ ವರದಿ ಮಾಡಿವೆ.

ಕೃಪೆ:vbnewsonline.in

Read These Next

ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣದಲ್ಲಿ ಬಿಜೆಪಿ ಶಾಮಿಲು; ತೀರ್ಥಹಳ್ಳಿಯಲ್ಲಿ ಬಿಜೆಪಿ ಸದಸ್ಯನನ್ನು ಬಂಧಿಸಿದ NIA

ಬೆಂಗಳೂರು: ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (NIA) ...

ಪತಂಜಲಿಯಿಂದ ನ್ಯಾಯಾಲಯದ ಆದೇಶ ಉಲ್ಲಂಘನೆ; ಕಾನೂನು ಕ್ರಮ ಎದುರಿಸಲು ಸಿದ್ದರಾಗಿ ಪತಂಜಲಿಗೆ ಸುಪ್ರೀಂ ಕೋರ್ಟ್ ಚಾಟಿ

ವೈಜ್ಞಾನಿಕ ತಳಹದಿಯ ಔಷಧಿಗಳನ್ನು ಟೀಕಿಸುವ ಹಾಗೂ ಜನರನ್ನು ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನು ಪ್ರಕಟಿಸುವುದನ್ನು ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...