ಉಮರ್ ಖಾಲಿದ್ ವಿರುದ್ಧದ ಚಾರ್ಜ್ಶೀಟ್ ಟಿವಿ ಸ್ಕ್ರಿಪ್ಟ್ ನಂತಿದೆ; ಖಾಲಿದ್ ವಕೀಲರ ವಾದ ಮಂಡನೆ
ಹೊಸದಿಲ್ಲಿ: ದಿಲ್ಲಿ ಗಲಭೆ ಸಂಚು ಪ್ರಕರಣದ ಆರೋಪದಲ್ಲಿ ತನ್ನ ಕಕ್ಷಿದಾರನಾದ ಸಾಮಾಜಿಕ ಹೋರಾಟಗಾರ ಉಮರ್ ಖಾಲಿದ್ ವಿರುದ್ಧ ಪೊಲೀಸರು ಸಲ್ಲಿಸಿರುವ ದೋಷಾರೋಪ ಪಟ್ಟಿಯು ಸಿದ್ಧಪಡಿಸಿದ ಟಿವಿ ಚಿತ್ರಕಥೆಯಂತಿದೆ ಎಂದು ಅವರ ವಕೀಲ ತ್ರಿದೀಪ್ ಪಾಯಸ್ ಶುಕ್ರವಾರ ಹೇಳಿದ್ದಾರೆ ಮತ್ತು ಉಮರ್ ಖಾಲಿದ್ ವಿರುದ್ಧ ಹೊರಿಸಲಾದ ಆರೋಪಗಳಿಗೆ ಯಾವುದೇ ಆಧಾರವಿಲ್ಲವೆಂದು ಅವರು ಹೇಳಿದ್ದಾರೆ.
ದಿಲ್ಲಿ ಸೆಶನ್ಸ್ ನ್ಯಾಯಾಧೀಶ ಅಮಿತಾಭ್ ರಾವತ್ ಅವರು ಉಮರ್ ಖಾಲಿದ್ ಅವರ ಜಾಮೀನು ಅರ್ಜಿಯ ಆಲಿಕೆ ನಡೆಸಿದ ಸಂದರ್ಭ ವಾದಮಂಡಿಸಿದ ಪಾಯಸ್ ಅವರು ದೋಷಾರೋಪ ಪಟ್ಟಿಯ ಕರಡನ್ನು ಸಿದ್ಧಪಡಿಸಿದ ಅಧಿಕಾರಿ ಕೋಮುವಾದಿ ಮನಸ್ಥಿತಿಯುಳ್ಳವರು ಎಂದು ಆರೋಪಿಸಿದರು. ಉಮರ್ ಖಾಲಿದ್ ವಿರುದ್ಧ ಪೊಲೀಸರು ಸಲ್ಲಿಸಿರುವ ದೋಷಾರೋಪಪಟ್ಟಿಯು 'ಕಿರುಚಾಡುವ ಸುದ್ದಿ ವಾಹಿನಿಗಳಲ್ಲಿನ 9 ಗಂಟೆಯ ಸುದ್ದಿಗಳ ಸ್ಕ್ರಿಪ್ಟ್ ಅನ್ನು ಓದಿದ ಹಾಗಾಗುತ್ತದೆ' ಎಂದು ವ್ಯಂಗ್ಯವಾಡಿದರು ಹಾಗೂ ಈ ಚಾಚ್ ೯ಶೀಟ್ ತನಿಖಾ ಅಧಿಕಾರಿಯವರ ಫಲವತ್ತಾದ ಕಲ್ಪನೆಯ ಪ್ರತಿಬಿಂಬವಾಗಿದೆ ಎಂದರು.
ದಿಲ್ಲಿ ಗಲಭೆಗೆ ಸಂಬಂಧಿಸಿ ಖಾಲಿದ್ ವಿರುದ್ಧ ದಿಲ್ಲಿ ಪೊಲೀಸರ ಬಳಿ ಯಾವುದೇ ಪುರಾವೆಯಿಲ್ಲವೆಂದು ಹಿಂದಿನ ವಿಚಾರಣೆಯ ಸಂದರ್ಭ ಪಾಯಸ್ ಅವರು ವಾದಿಸಿದ್ದರು. ಜೆಎನ್ಯು ವಿವಿಯ ಮಾಜಿ ವಿದ್ಯಾರ್ಥಿಯಾದ ಖಾಲಿದ್ ಅವರು ಮಹಾರಾಷ್ಟ್ರದ ಅಮರಾವತಿಯಲ್ಲಿ ಮಾಡಿದ್ದ ಭಾಷಣದ ಮೊಟಕುಗೊಳಿಸಿದ ವೀಡಿಯೊ ತುಣುಕುಗಳನ್ನು ಇಡೀ ಪ್ರಕರಣವು ಆಧರಿಸಿದೆ ಎಂದವರು ಗಮನಸೆಳೆದಿದ್ದರು.
ಖಾಲಿದ್ ವಿರುದ್ಧ ಸಾಕ್ಷಿದಾರರು ನೀಡಿದ ಹೇಳಿಕೆಗಳು ಕಪೋಲಕಲ್ಪಿತವಾದವು ಎಂದು ಹೇಳುವ ಮೂಲಕ ತನ್ನ ವಾದವನ್ನು ಆರಂಭಿಸಿದ ಪಾಯಸ್ ಅವರು ಸಾಕ್ಷಿಗಳಲ್ಲೊಬ್ಬಾತ ಒತ್ತಡಕ್ಕೊಳಗಾಗಿ ಹೇಳಿಕೆ ನೀಡಿದ್ದಾರೆ ಎಂದರು. ಸಂರಕ್ಷಿತ ಸಾಕ್ಷಿಯೊಬ್ಬ ಇನ್ನೊಂದು ಎಫ್ಐಆರ್ನಲ್ಲಿ ಅಸಂಗತವಾದ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದರು.