ಅಂಜುಮನ್ ಸಂಸ್ಥೆಯಿಂದ ಅ.17ಮತ್ತು18 ರಂದು ಶೈಕ್ಷಣಿಕ ವಿಚಾರಸಂಕೀರ್ಣ
ಭಟ್ಕಳ: ಇಲ್ಲಿನ ಪ್ರತಿಷ್ಠಿತ ಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ ಶತಮಾನೋತ್ಸವ ಸಮಾರಂಭದ ಅಂಗವಾಗಿ ಅ.17,18 ರಂದು ‘ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳು ಎದುರಿಸುತ್ತಿರುವ ಸವಾಲುಗಳು ಮತ್ತು ಪರಿಹಾರ’ ಎಂಬ ವಿಷಯದಲ್ಲಿ ಎರಡು ದಿನಗಳ ಶೈಕ್ಷಣಿಕ ವಿಚಾರಸಂಕೀರ್ಣ ಆಯೋಜಿಸುವುದಾಗಿ ಇತ್ತಿಚೆಗೆ ಅಂಜುಮನ್ ಸಂಸ್ಥೆಯ ಜುಕಾಕೋ ಶಮ್ಸುದ್ದೀನ್ ಮೆಮೊರಿಯಲ್ ಸಭಾಂಗಣದಲ್ಲಿ ಜರಗಿದ ಕರಾವಳಿ ಜಿಲ್ಲೆಗಳ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರ ಸಭೆಯೊಂದರಲ್ಲಿ ನಿರ್ಣಯಿಸಲಾಗಿದೆ.
ಅಂಜುಮನ್ ಸಂಸ್ಥೆಯ ಶತಮಾನ ಪೂರೈಸಿದ್ದು ಇದರ ಅಂಗವಾಗಿ ವಿವಿಧ ಕಾರ್ಯಕ್ರಮಗಳು ಜರಗುತ್ತಿದ್ದು ಎರಡು ದಿನಗಳ ಶೈಕ್ಷಣಿಕ ಸಮ್ಮೇಳನವೂ ಸೇರಿದೆ ಎನ್ನಲಾಗುತ್ತಿದೆ.
ಈ ಕುರಿತಂತೆ ಜು.7ರಂದು ನಡೆದ ಪೂರ್ವಭಾವಿ ಸಭೆಯಲ್ಲಿ ವಿಚಾರಸಂಕೀರ್ಣದ ಕುರಿತ ರೂಪುರೇಶೆಗಳನ್ನು ಸಿದ್ದಪಡಿಸಿದ್ದು ರಾಜ್ಯದ ಮಂತ್ರಿಗಳು, ಶಿಕ್ಷಣ ತಜ್ಞರು ಭಾಗವಹಿಸಲಿದ್ದಾರೆ. ಸಭೆಯಲ್ಲಿ ಉತ್ತರಕನ್ನಡ, ಉಡುಪಿ, ದಕ್ಷಿಣಕನ್ನಡ ಜಿಲ್ಲೆಯ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳು ಮುಖ್ಯಸ್ಥರು ಸೇರಿ ತಮ್ಮ ತಮ್ಮ ಸಂಸ್ಥೆಗಳ ವಿವಿಧ ಸಮಸ್ಯೆಗಳನ್ನು ಚರ್ಚಿಸಿದ್ದು ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳು ಎದುರಿಸುತ್ತಿರುವ ಸವಾಲುಗಳು ಹಾಗೂ ಅದಕ್ಕೆ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಮುಂಬರುವ ಶೈಕ್ಷಣಿಕ ಸಮ್ಮೇಳನ ಸಹಕಾರಿಯಾಗಲಿದೆ.
ಸಭೆಯ ಅಧ್ಯಕ್ಷತೆಯನ್ನು ಅಂಜುಮನ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಅಬ್ದುಲ್ ರಹೀಮ್ ಜುಕಾಕೋ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಸಿದ್ದೀಖ್ ಇಸ್ಮಾಯಿಲ್, ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಇಸ್ಹಾಖ್ ಶಾಬಂದ್ರಿ, ಅಂಜುಮನ್ ಶತಮಾನೋತ್ಸವ ಸಮಾರಂಭ ಸಮಿತಿಯ ಸಂಚಾಲಕ ಅಬ್ದುಲ್ ರಖೀಬ್ ಎಂ.ಜೆ, ಅಂಜುಮನ್ ತಾಂತ್ರಿಕ ಮಹಾವಿದ್ಯಾಲಯ ಪ್ರಾಂಶುಪಾಲ ಮುಷ್ತಾಖ್ ಆಹ್ಮದ್ ಭಾವಿಕಟ್ಟಿ, ಮತ್ತಿತರರು ಮಾತನಾಡಿದರು.
ಮೌಲಾನಾ ಉಬೈದುಲ್ಲಾ ಕಂಡ್ಲೂರಿ ನದ್ವಿ, ತರಬಿಯತ್ ಎಜ್ಯುಕೇಶನ್ ಸೂಸೈಟಿಯ ಅಧ್ಯಕ್ಷ ಮುಹಮ್ಮದ್ ಇಸ್ಮಾಯಿಲ್ ಮೊಹ್ತಿಶಮ್, ಉಪಾಧ್ಯಕ್ಷ ಖಾಜಿ ನಜೀರ್ ಅಹ್ಮದ್, ಮೌಲಾನಾ ತಲ್ಹಾ ರುಕ್ನುದ್ದೀನ್ ನದ್ವಿ, ಮೌಲಾನಾ ಆಹ್ಮದ್ ಸೇರಿದಂತೆ ಹಲವಾರು ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳು. ಕುಮಟಾ ಮತ್ತು ಸಿರ್ಸಿಯ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳು ಕೂಡ ಸಭೆಯಲ್ಲಿ ಪಾಲ್ಗೊಂಡು ಮುಂಬರುವ ಶೈಕ್ಷಣಿಕ ಸೆಮಿನಾರ್ಗೆ ಶುಭ ಹಾರೈಸಿದರು.