ಕಾರವಾರ : ಸಾರ್ವಜಿಕರಿಗೆ ಇ-ಖಾತಾ ನೀಡುವಲ್ಲಿ ವಿಳಂಬ ಮತ್ತು ಅಲೆದಾಟವಾಗದಂತೆ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಹರೀಶ ಕುಮಾರ ಕೆ ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಅಂಕೋಲಾ ತಹಶೀಲ್ದಾರ ಕಚೇರಿಯಲ್ಲಿಂದು ನಡೆದ ಅಂಕೋಲಾ ಪುರಸಭೆ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಇ-ಸ್ವತ್ತು ಪಡೆಯುವಲ್ಲಿ ಅಲೆದಾಟ ಮತ್ತು ವಿಳಂಬವಾಗುತ್ತದೆ ಎಂಬ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬರುತ್ತಿದ್ದು, ಇನ್ನು ಮುಂದೆ ಯಾವುದೇ ಕಾರಣಕ್ಕೂ ಜನರಿಂದ ದೂರುಗಳು ಕೇಳಿ ಬರದಂತೆ ಪುರಸಭೆಯ ಎಲ್ಲ ಸಿಬ್ಬಂದಿ ಕಾರ್ಯನಿರ್ವಹಿಸಬೇಕು ಎಂದು ಪುರಸಭೆಯ ಮುಖ್ಯಾಧಿಕಾರಿಗೆ ಖಡಕ್ ಸೂಚನೆ ನೀಡಿದರು.
ಪುರಸಭೆಯ ಪ್ರಗತಿ ಕುಂಠಿತವಾಗಿದೆ. ಎಲ್ಲ ಸಿಬ್ಬಂದಿಗಳು ತಮಗೆ ವಹಿಸಿಕೊಟ್ಟ ಕೆಲಸಗಳನ್ನು ಪ್ರಾಮಾಣಿಕತೆಯಿಂದ ಮಾಡಬೇಕು ಮತ್ತು ಸಾರ್ವಜನಿಕರಿಗೆ ತೊಂದರೆಯಾಗದಂತೆ ಶೀಘ್ರವಾಗಿ ಕಾರ್ಯ ಮಾಡಿಕೊಡಿ ಹಾಗೂ ಇ-ಖಾತಾ ಕುರಿತು ವಾರ್ಡ ಮಟ್ಟದಲ್ಲಿ ಜಾಗೃತಿ ಮೂಡಿಸಿ ಎಂದರು.
ಪುರಸಭೆಯಲ್ಲಿ ಕಳೆದ 4-5 ವರ್ಷಗಳಲ್ಲಿ ವಿವಿಧ ಯೋಜನೆಗಳಡಿಯಲ್ಲಿ ಉಳಿದಿರುವಂತಹ 50 ಲಕ್ಷ ಕ್ಕೆ ಜಿಲ್ಲಾ ಯೋಜನಾ ನಿರ್ದೇಶಕರು ಹೊಸ ಕ್ರೀಯಾ ಯೋಜನೆಯೊಂದನ್ನು ಶೀಘ್ರವಾಗಿ ಸಲ್ಲಿಸಿ, ಅಂಕೋಲಾದ ಪ್ರಗತಿಗೆ ಶ್ರಮಿಸಬೇಕಂದರು.
ನೀರಿನ ಕರ ವಸೂಲಿಯಲ್ಲಿ ಸಮಾಧಾನಕರ ಪ್ರಗತಿ ಇದ್ದು, ವಿದ್ಯುತ್ ಮತ್ತು ನೀರಿನ ಕರ ವಸೂಲಿಗೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮಗಳನ್ನು ಕೈಗೊಳ್ಳಿ ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾ ನಗರಾಭಿವೃದ್ಧಿಕೋಶದ ಮುಖ್ಯ ಅಭಿಯಂತರ ಆರ್.ಪಿ.ನಾಯ್ಕ, ಯೋಜನಾ ನಿರ್ದೇಶಕ ಮುನಿಶ್ಯಾಮಪ್ಪಾ, ಅಂಕೋಲಾದ ತಹಶೀಲ್ಧಾರ ವಿವೇಕ ಶೆಣ್ವಿ, ಪುರಸಭೆ ಮುಖ್ಯಾಧಿಕಾರಿ ಕೆ.ಪ್ರಹ್ಲಾದ ಸೇರಿದಂತೆ ಇತರರು ಉಪಸ್ಥಿತರಿದ್ದರು.