ಸಿಎಎ ವಿರುದ್ಧ ರಾಜ್ಯ ವಿಧಾನಸಭೆಗಳ ತೀರ್ಮಾನಗಳು

Source: sonews | By Staff Correspondent | Published on 5th February 2020, 5:02 PM | National News | Special Report | Don't Miss |

 

ರಾಜ್ಯಗಳು ತೋರ್ಪಡಿಸುತ್ತಿರುವ ಭಿನ್ನಮತಗಳು ಸಾಂವಿಧಾನಾತ್ಮಕ ಮೌಲ್ಯಗಳನ್ನು ರಕ್ಷಿಸುವಲ್ಲಿ ಒಕ್ಕೂಟವಾದಿ ನೀತಿಯನ್ನು ಪುನರ್‌ಸ್ಥಾಪಿಸಬೇಕೆಂಬ ಮನವಿಯೇ ಆಗಿದೆ.

 

ವಲೇರಿಯನ್ ರೋಡ್ರಿಗಸ್ ಅವರ ಟಿಪ್ಪಣಿ:

ಈ ಸಂಚಿಕೆ ಅಚ್ಚಿಗೆ ಹೋಗುತ್ತಿರುವ ವೇಳೆಗಾಗಲೇ ಭಾರತದ ನಾಲ್ಕು ರಾಜ್ಯಗಳು- ಕೇರಳ, ಪಂಜಾಬ್, ರಾಜಸ್ಥಾನ್ ಮತ್ತು ಪ. ಬಂಗಾಳ- ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ)-೨೦೧೯ರ ವಿರುದ್ಧ ತೀರ್ಮಾನಗಳನ್ನು ಅಂಗೀಕರಿಸಿ ಅದನ್ನು ಹಿಂತೆಗೆದುಕೊಳ್ಳಬೇಕೆಂದು ಕೇಂದ್ರವನ್ನು ಒತ್ತಾಯಿಸಿವೆ. ಅಷ್ಟು ಮಾತ್ರವಲ್ಲದೆ ನ್ಯಾಷನಲ್ ಪಾಪ್ಯುಲೇಷನ್ ರಿಜಿಸ್ಟರ್ (ಎನ್‌ಪಿಆರ್)ಗಾಗಿ ಸಂಗ್ರಹಿಸುವ ಮಾಹಿvಗಳು ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಜನ್ಸ್ (ಎನ್‌ಆರ್‌ಸಿ) ಜೊತೆ ಸಂಬಂಧ ಹೊಂದಿದ್ದಲ್ಲಿ ಎನ್‌ಪಿಆರ್ ಮಾಹಿತಿ ಸಂಗ್ರಹಕ್ಕೂ ಸಹಕರಿಸುವುದಿಲ್ಲವೆಂದು ತಿಳಿಸಿವೆ. ಇನ್ನಷ್ಟು ರಾಜ್ಯಗಳು ಇದೇ ಬಗೆಯ ಭಿನ್ನಮತವನ್ನು ದಾಖಲಿಸುವ ಎಲ್ಲಾ ಸಾಧ್ಯತೆಗಳಿವೆ. ಈ ರಾಜ್ಯಗಳು ಕೈಗೊಂಡಿರುವ ನಿರ್ಣಯಗಳಲ್ಲಿ ಸಮಾನವಾದ ಅಂಶಗಳಿದ್ದರೂ ಬೇರೆಬೇರೆ ರಾಜ್ಯಗಳು ಬೇರೆಬೇರೆ ಅಂಶಗಳಿಗೆ ಒತ್ತು ಕೊಟ್ಟಿರುವುದು ಆಸಕ್ತಿದಾಯಕವಾಗಿದೆ: ಸಿಎಎ ಯು ಸಮಾನತೆ, ಸ್ವಾತಂತ್ರ್ಯ ಮತ್ತು ಧರ್ಮ ನಿರಪೇಕ್ಷ ತತ್ವವನ್ನು ಉಲ್ಲಂಘಿಸುತ್ತದೆ ಎಂದು ಕೇರಳ ಭಾವಿಸುತ್ತದೆ; ಈ ಕಾಯಿದೆಯು ನುಸುಳುಕೋರರಿಗೆ ಹೆಚ್ಚಿನ ಅವಕಾಶವನ್ನು ಮಾಡಿಕೊಟ್ಟು ರಾಷ್ಟ್ರದ ಭದ್ರತೆಗೆ ಆಪತ್ತನ್ನು ಉಂಟುಮಾಡುತ್ತದೆ ಎಂದು ಪಂಜಾಬ್ ಭಾವಿಸುತ್ತದೆ;ಈ ಕಾಯಿದೆಯಲ್ಲಿ ಅಂತರ್ಗತವಾಗಿಯೇ ತಾರತಮ್ಯವಿದೆಯೆಂದು ರಾಜಸ್ಥಾನ ವಿರೋಧಿಸುತ್ತದೆ; ಈ ಕಾಯಿದೆಯು ದೇಶಾದ್ಯಂತ ಜನರ ಪ್ರತಿರೋಧ ಮತ್ತು ಹೋರಾಟಗಳಿಗೆ ಕಾರಣವಾಗಿ ಕಾನೂನಾತ್ಮಕ ರಾಜಕಾರಣಕ್ಕೆ ವ್ಯತಿರಿಕ್ತವಾಗಿದೆಯೆಂದು ಪ. ಬಂಗಾಳ ಕಾಯಿದೆಯನ್ನು ವಿರೋಧಿಸುತ್ತದೆ. ಆದರೆ ಕೇಂದ್ರ ಸರ್ಕಾರವು ಮಾತ್ರ ಸಿಎಎ ಅನ್ನು ಜಾರಿ ಮಾಡಲು ಬೇಕಾದ ನಿಯಮಾವಳಿಗಳನ್ನು ರಚಿಸುವಲ್ಲಿ ಉತ್ಸುಕವಾಗಿದೆ. ಆದರೆ ಹೆಚ್ಚುತ್ತಿರುವ ಪ್ರತಿರೋಧವನ್ನು ಮನಗಂಡು  ಸಿಎಎ ಅನ್ನು ಎನ್‌ಆರ್ ಮತ್ತು ಎನ್‌ಪಿಆರ್ ಇಂದ ಬೇರ್ಪಡಿಸಿ ಸಿಎಎ ಅಡಿ ಪೌರತ್ವವನ್ನು ಪಡೆಯಲು ಅರ್ಜಿಗಳನ್ನು ಮಾತ್ರ ಸಲ್ಲಿಸಬೇಕೆಂಬುದಕ್ಕೆ ಮಾತ್ರ ಸರ್ಕಾರ ಸೀಮಿತಗೊಳ್ಳಬಹುದು. ಆದರೆ ಈ ಕಾಯಿದೆಯಡಿ ಅಕ್ರಮ ವಲಸಿಗರನ್ನು ಪತ್ತೆ ಹಚ್ಚಲು ನಡೆಯಬಹುದಾದ ಬೇಟೆಗಳು ಮತ್ತು ಅದರ ನಂತರ ನಡೆಯಲಿರುವ ಬೇರೆ ದೇಶಕ್ಕೆ ಅಟ್ಟುವ ಅಥವಾ ನಿರ್ಬಂಧ ಕೇಂದ್ರಗಳಿಗೆ ತಳ್ಳುವ ಪರಿಣಾಮಗಳನ್ನು ಸದ್ಯಕ್ಕೆ ಬದಿಗಿಟ್ಟು ನೋಡಿದರೂಸಿಎಎ ಕಾಯಿದೆಯಡಿ ಏನಿಲ್ಲವೆಂದರೂ ಹಿಂದೂ, ಸಿಖ್, ಜೈನ್, ಬೌದ್ಧ, ಕ್ರೈಸ್ತ ಮತ್ತು ಪಾರ್ಸಿ ಸಮುದಾಯಗಳಿಗೆ ಸೇರಿದವರೆಂಬ ಸಾಕ್ಷಿಯನ್ನಂತೂ ಒದಗಿಸಲೇ ಬೇಕಾಗುತ್ತದೆ. ಈ ಕ್ರಮವು ೨೦೨೨ರಲ್ಲಿ ಪ. ಬಂಗಾಳದ ವಿಧಾನಸಭೆಗೆ ನಡೆಯಲಿರುವ ಚುನಾವಣೆಗಳ ಸಂದರ್ಭದಲ್ಲಿ ಮತದಾರರನ್ನು ಕೋಮು-ಧೃವೀಕರಿಸುವುದಲ್ಲದೆ ಅಸಾಮಿನಲ್ಲಿ ಈಗಾಗಲೇ ಮಾಡಲಾಗಿರುವ ಕೋಮು ವಿಭಜನೆಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ಭಾರತದ ನೆರೆಹೊರೆಯಲ್ಲಿ ಮುಸ್ಲಿಂ ಅಧಿಪತ್ಯ ಉಳ್ಳ ರಾಷ್ಟ್ರಗಳಿರುವ ಸಂದರ್ಭದಲ್ಲಿ ಸಿಎಎ ಮೂಲಕ ಒಂದು ಆದರ್ಶ ಭಾರತ ರಾಷ್ಟ್ರೀಯತೆಯನ್ನು ಹೇಗೆ ಹಿಂದೂ ರಾಷ್ಟ್ರವಾಗಿರಬೇಕೆಂಬುದರ ಸುತ್ತಾ ಎಲ್ಲಾ ಭಾವನಾತ್ಮಕ ಪ್ರೇರಣೆಗಳೂ ಧೃವೀಕರಣಗೊಳ್ಳಬಹುದು. ಈವರೆಗೆ ಯಾವುದೇ ಸಮುದಾಯಗಳಿಗೆ ಸೇರಿದ್ದರೂ ಪೌರತ್ವದಲ್ಲಿ ಸಮಾನತೆಯೇ ಇದ್ದಿತ್ತು. ಸಾಮಾಜಿಕ ಸಮಾನತೆಯನ್ನು ದೊರಕಿಸಿಕೊಡುವಲ್ಲಿ ಮಾತ್ರ ನಾಗರಿಕರ ನಡುವೆ ಸಕಾರಾತ್ಮಕ ತಾರತಮ್ಯವನ್ನು ಮಾಡಲಾಗುತ್ತಿತ್ತು. ಆದರೆ ಸಿಎಎ ಕಾಯಿದೆಯು  ಮೊಟ್ಟಮೊದಲ ಬಾರಿಗೆ ಒಂದು ನಿರ್ದಿಷ್ಟ ಸಮುದಾಯಗಳಿಗೆ ಸೇರಿದರೆ ಮಾತ್ರ ಪೌರತ್ವವನ್ನು ಪಡೆದುಕೊಳ್ಳುವ ರೀತಿ ಈ ದೇಶದ ಪೌರತ್ವದ ಅಡಿಪಾಯವನ್ನೇ ಬದಲಿಸಿಬಿಡುತ್ತದೆ. ಈ ಕಾಯಿದೆಯು ಹೊರದೂಡುವ ಸಮುದಾಯಗಳು ಎದುರಿಸಬೇಕಾಗುವ ಅವಮಾನ, ಅವಹೇಳನಗಳನ್ನು ಹಗಲುಗುರುಡರನ್ನು ಬಿಟ್ಟರೆ ಮಿಕ್ಕೆಲ್ಲರೂ ಊಹಿಸಿಕೊಳ್ಳಬಲ್ಲರು. ಅದರ ಜೊತೆಗೆ ಈ ಕಾಯಿದೆಯು ನಾಗರಿಕರನ್ನು ಒಂದು ನಿರ್ದಿಷ್ಟ ಗುರುತನ್ನು ಹೊತ್ತು ತಿರುಗುವಂತೆ ಮಾಡುವ ಮೂಲಕ ಸಾಮಾಜಿಕ ಬಂಧಗಳನ್ನು ತುಂಡರಿಸುತ್ತದೆ. ಹೀಗಾಗಿ ರಾಜ್ಯಗಳು ಮಾಡಿರುವ ತೀರ್ಮಾನಗಳಿಗೆ ಸಾಕಷ್ಟು ತಾತ್ವಿಕ ಪುರಾವೆಗಳಿವೆ.

೧೯೮೦ರ ದಶಕದಲ್ಲಿ ಭಾರತದಲ್ಲಿದ್ದ ಒಂದು ಪಕ್ಷದ ಅಧಿಪತ್ಯ ಕುಸಿಯುತ್ತಿದ್ದಂತೆ ಭಾರತದ ಒಕ್ಕೂಟ ಸಂಬಂಧಗಳಲ್ಲಿ ಒಂದು ಹೊಸ ಸಮತೋಲನ ಏರ್ಪಟ್ಟಿತ್ತು. ಅದರಲ್ಲಿ ಪ್ರಧಾನವಾಗಿ ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಂಬಂಧಗಳನ್ನು ಹೊಸದಾಗಿ ರೂಪಿಸಿಕೊಳ್ಳುವ ಒತ್ತಿನ ಜೊತೆಗೆ ಇತರ ಪೂರಕ ಅಂಶಗಳೂ ಅಡಕವಾಗಿದ್ದವು: ಪಂಚಾಯತ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳಿಗೆ ಕೆಲವು ಅಧಿಕಾರಗಳನ್ನು, ಸಂಪನ್ಮೂಲಗಳನ್ನು ಮತ್ತು ಜವಾಬ್ದಾರಿಗಳನ್ನೂ ನೀಡಲಾಯಿತು; ಶೆಡ್ಯೂಲ್ ಆರರ ಅಡಿಯಲ್ಲಿದ್ದ ರಾಜ್ಯಗಳ ಜಿಲ್ಲಾ ಪರಿಷತ್ತುಗಳು ಮತ್ತು ದೇಶದ ಇತರೆಡೆಗಳಲ್ಲಿದ್ದ ಶೇಡ್ಯೂಲ್ಡ್ ಪ್ರದೇಶಗಳು ಆದಿವಾಸಿಗಳನ್ನು ಅಣಿನೆರೆಯುವ ಕೇಂದ್ರಗಳಾದವು; ಸಾಧಾರಣ ಗಾತ್ರದ ರಾಜ್ಯಗಳೂ ಅಸ್ಥಿತ್ವಕ್ಕೆ ಬಂದವು; ಹಾಗೂ ಉತ್ತರ ಪ್ರದೇಶದಂತಹ ಬೃಹತ್ ರಾಜ್ಯಗಳು ಸಣ್ಣ ಘಟಕಗಳಾಗಿ ಹೋಳಾಗಲು ಸಾಕಷ್ಟು ಕಾರಣಗಳು ಕೂಡಿ ಬಂದವು. ಒಟ್ಟಾರೆಯಾಗಿ ಜನರ ಭಾಗೀದಾರಿಕೆಯನ್ನು ಹೆಚ್ಚಿಸುವ, ಆಡಳಿತವನ್ನು ಉತ್ತರದಾಯಿಯನ್ನಾಗಿ ಮಾಡುವ, ಮತ್ತು ನಾಗರಿಕರನ್ನು ಮತ್ತು ಆಡಳಿತವನ್ನು ಸಂವಾದಿಯಾಗಿಸುವ ಅಧಿಕಾರ ಮತ್ತು ಹೊಣೆಗಾರಿಕೆಗಳು ವಿಕೇಂದ್ರಿಕರಣಗೊಳ್ಳುವ, ಆರೋಗ್ಯಕರ ಧೋರಣೆಗಳು ರೂಪುಗೊಳ್ಳಲಾರಂಭಿಸಿತ್ತು.

ಆದರೆ ೨೦೧೪ರ ನಂತರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸಹಕಾರಿ ಒಕ್ಕೂಟ ತತ್ವವನ್ನು ಪಾಲಿಸುವ ಬಗ್ಗೆ ಪ್ರಾರಂಭದಲ್ಲಿ ಎಷ್ಟೇ ಭರವಸೆಗಳನ್ನು ನೀqದ್ದರೂ ಈ ಎಲ್ಲಾ ಧೋರಣೆಗಳು ನ್ನೆಡೆಯನ್ನು ಕಾಣಲಾರಂಭಿಸಿದವು. ಈ ಹಿನ್ನೆಡೆ ಪ್ರಾರಂಭದಲ್ಲಿ ನಿಧಾನವಾಗಿದ್ದರೂ, ೨೦೧೯ರಲ್ಲಿ ಎನ್‌ಡಿಎ-೨ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಅತ್ಯಂತ ವೇಗವಾಗಿ ಹಿಂದೆ ಸgಯಲು ಆರಂಭಿಸಿದೆ. ತನ್ನ ಅಗಾಧವಾದ ಪಕ್ಷ ಯಂತ್ರಾಂಗದ ಬೆಂಬಲದೊಂದಿಗೆ ಹಲವಾರು ರಾಜ್ಯಗಳಲ್ಲಿ ಬಿಜೆಪಿ ಪಡೆದುಕೊಂಡಿರುವ ಅಸಾಧಾರಣ ಗೆಲುವು, ಪಕ್ಷದ ಕೇಂದ್ರೀಯ ನಾಯಕತ್ವಕ್ಕೆ ಅಧೀನವಾಗಿ ಮತ್ತು ಅದು ಹೇಳಿದಂತೆ ಕೇಳುವ ಸಂಸ್ಕೃತಿಯನ್ನು ಹುಟ್ಟುಹಾಕಿದೆ. ಸಂವಿಧಾನದಲ್ಲಿ ಇರುವ ಔಪಚಾರಿಕ ವಿಧಿ ವಿಧಾನಗಳು ಹಾಗೆಯೇ ಇದ್ದರೂ, ಅವೆಲ್ಲವೂ ಕೇಂದ್ರದ ಆದೇಶಕ್ಕೆ ತಕ್ಕಂತೆ ಬಗ್ಗುವಂತೆ ಮತ್ತು ನಡೆದುಕೊಳ್ಳುವಂತೆ ಮಾಡಲಾಗಿದೆ. ಹೀಗಾಗಿ ಸಿಎಎ ವಿರುದ್ಧ ಈ ಕೆಲವು ರಾಜ್ಯಗಳು ಕೈಗೊಂಡಿರುವ ನಿರ್‍ಣಯಗಳನ್ನು ಕೇವಲ ಆ ಕಾಯಿದೆಯಲ್ಲಿರುವ ಕೆಲವು ನಿರ್ದಿಷ್ಟ ಅಂಶಗಳ ರುದ್ಧ ಮಾತ್ರವಲ್ಲದೆ ಭಾರತ ಒಕ್ಕೂಟದಲ್ಲಿ ಒಕ್ಕೂಟ ನೀತಿಯನ್ನು ಪುನರ್ ಸ್ಥಾಪನೆ ಮಾಡಬೇಕೆಂಬ ಆಶಯದ ಭಾಗವಾಗಿ ನೋಡಬೇಕಿದೆ.

ಸಿಎಎ ದಂಥ ಕಾಯಿದೆಯು ಕೆಲವು ರಾಜ್ಯಗಳ ಮೇಲೆ ಹಾನಿಕಾರಕ ಸಾಮಾಜಿಕ ಮತ್ತು ರಾಜಕೀಯ ಪರಿಣಾಮಗಳನ್ನುಂತು ಮಾಡುವುದಾದರೂ, ಅಂಥಾ ಮಸೂದೆಯು ಜಾರಿಯಾಗದಂತೆ ಪ್ರಭಾವಿಸುವ ಶಕ್ತಿ ಆ ರಾಜ್ಯಗಳಿಗಿಲ್ಲ.  ಮೇಲಾಗಿ ಈ ರಾಜ್ಯಗಳಲ್ಲಿ ಕೇಂದ್ರಕ್ಕಿಂತ ಭಿನ್ನವಾದ ಸೈದ್ಧಾಂತಿಕ ಧೋರಣೆಯುಳ್ಳ ಸರ್ಕಾರಗಳು ಆಡಳಿತದಲ್ಲಿದ್ದಾಗ ಅವರ ಅಭಿಪ್ರಾಯವನ್ನು ಪರಿಗಣನೆಗೇ ತೆಗೆದುಕೊಳ್ಳದೆ ಅವರ ಮಹತ್ವದ ನಿಲುವುಗಳನ್ನೇ ಅಲ್ಲಗೆಳೆಯುವ, ನಾಗರಿಕರನ್ನು ವಿಭಜನೆ ಮಾಡುವ, ಅವಿಶ್ವಾಸವನ್ನು ಹರಡುವ, ಅವರು ಸಂವಿಧಾನದ ಮೂಲತತ್ವವೆಂದು ಭಾವಿಸುವ ತತ್ವಗಳನ್ನೇ ಉಲ್ಲಂಘಿಸುವ ಕಾಯಿದೆಯನ್ನು ಹೇಗೆ ಅನುಷ್ಠಾನಗೊಳಿಸುತ್ತಾರೆಂದು ನಿರೀಕ್ಷಿಸಲು ಸಾಧ್ಯ? ಅಲ್ಲದೆ, ಪೌರತ್ವ ತಿದ್ದುಪಡಿ ಮಸೂದೆಯನ್ನು ವಿಸ್ತೃತವಾಗಿ ಚರ್ಚಿಸಲೂ ಇಲ್ಲ ಹಾಗೂ ಅದನ್ನು ಸಂಸತ್ತಿನ ಸ್ಥಾಯಿ ಸಮಿತಿಗೆ ಕಳಿಸಿಕೊಡಲೂ ಒಪ್ಪಲಿಲ್ಲ ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬೇಕು. ಮೇಲ್ನೋಟಕ್ಕೆ ನೋಡಿದರೆ ಪೌರತ್ವವೆಂಬುದು ಕೇಂದ್ರಕ್ಕೆ ಸೇರಿದ ವಿಷಯವಾಗಿ ಕಂಡುಬಂದರೂ, ಸಿಎಎ ಕಾಯಿದೆಯಲ್ಲಿ ಸಂವಿಧಾನದ ಮೂಲತತ್ವಗಳ ಮೇಲೆ ಪ್ರಭಾವ ಬೀರಬಲ್ಲ ಹಲವಾರು ಅಂಶಗಳಿವೆ. ಹೀಗಾಗಿ ಸಿಎಎ ವಿರುದ್ಧ ಧ್ವನಿ ಎತ್ತುವುದೊಂದೇ ಸಂವಿಧಾನವನ್ನು ರಕ್ಷಿಸಿಕೊಳ್ಳಲು ರಾಜ್ಯಗಳ ಮುಂzದ್ದ ಏಕೈಕ ದಾರಿ ಎಂದು ಹೇಳಬಹುದೇನೋ..

(ವಲೇರಿಯನ್ ರೋಡ್ರಿಗ್ಸ್ ಅವರು ಐಸಿಎಸ್‌ಎಸ್‌ಆರ್ (ಇಂಡಿಯನ್ ಕೌನ್ಸಿಲ್ ಅಫ್ ಸೊಷಿಯಲ್ ಸೈನ್ಸ್ ರಿಸರ್ಚ್) ನ  ನ್ಯಾಷನಲ್ ಫೆಲೋ ಆಗಿದ್ದರು.)

ಕೃಪೆ: Economic and Political Weekly ಅನು: ಶಿವಸುಂದರ್ 

 

Read These Next

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...

ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ ಪ್ರಶ್ನೆ

ಬಾಳೆಹೊನ್ನೂರು: ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಮಲೆನಾಡಿನ ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ...